ಆಶುತೋಷ್ ನಂತರ ಎಎಪಿ ತೊರೆಯಲು ಮುಂದಾದ ಆಶೀಶ್!
ನವದೆಹಲಿ, ಆಗಸ್ಟ್ 22: ಆಮ್ ಆದ್ಮಿ ಪಕ್ಷಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಪಕ್ಷದ ಪ್ರಮುಖ ನಾಯಕ ಆಶುತೋಷ್ ಅವರ ನಿರ್ಗಮನದ ನಂತರ ಆಶೀಶ್ ಖೇತಾನ್ ಅವರು ರಾಜೀನಾಮೆ ನೀಡಿರುವ ಸುದ್ದಿ ಬಂದಿದೆ. ಆಶುತೋಷ್ ಅವರು ರಾಜೀನಾಮೆ ನೀಡಿದ ವಾರದೊಳಗೆ ಈ ಬೆಳವಣಿಗೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.
ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಖೇತಾನ್, ಪಕ್ಷ ತೊರೆಯುವುದನ್ನು ನಿರಾಕರಿಸದೆ, ಸಕ್ರಿಯ ರಾಜಕೀಯದಿಂದ ನಾನು ಸದ್ಯಕ್ಕೆ ದೂರು ಉಳಿಯುತ್ತಿದ್ದೇನೆ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷ ತೊರೆದ ಹಿರಿಯ ನಾಯಕ ಆಶುತೋಷ್
ಉನ್ನತ ಮೂಲಗಳ ಪ್ರಕಾರ ಆಗಸ್ಟ್ 15ರಂದೇ ಖೇತಾನ್ ಅವರ ರಾಜೀನಾಮೆ ಪತ್ರವು ಅರವಿಂದ್ ಕೇಜ್ರಿವಾಲ್ ಅವರ ಕೈ ಸೇರಿದೆ. ಆಶುತೋಷ್ ಅವರ ಜತೆಗೆ ಖೇತಾನ್ ಕೂಡಾ ನಿರ್ಗಮಿಸುವುದಾಗಿ ಹೇಳಿದ್ದಾರೆ.
ಆದರೆ, ಎರಡು ರಾಜೀನಾಮೆ ಪತ್ರಗಳನ್ನು ಕೇಜ್ರಿವಾಲ್ ಇನ್ನೂ ಒಪ್ಪಿಕೊಂಡಿಲ್ಲ. ನಾನು ಪತ್ರಕರ್ತನಾಗಿ, ವಕೀಲನಾಗಿ ನಂತರ ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕಿಳಿದವನು. ಸದ್ಯ ವಕೀಲನಾಗಿ ಮುಂದುವರೆಯಲು ಬಯಸಿದ್ದೇನೆ. ಏಪ್ರಿಲ್ ತಿಂಗಳಲ್ಲೇ ಈ ಬಗ್ಗೆ ಪಕ್ಷದ ಹಿರಿಯರಿಗೆ ತಿಳಿಸಿದ್ದೆ ಎಂದಿದ್ದಾರೆ.
ರಾಜೀನಾಮೆ ಬಗ್ಗೆ ಹಬ್ಬಿರುವ ಊಹಾಪೋಹಗಳಿಗೆ ಪ್ರತಿಕ್ರಿಯಿಸಿ ಸುದೀರ್ಘವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
This is my facebook post, to clear the air and to quell all rumours. Thanks pic.twitter.com/jZVZorgeFO
— Ashish Khetan (@AashishKhetan) August 22, 2018
2014ರ ಚುನಾವಣೆಯಲ್ಲಿ ಬಿಜೆಪಿಯ ಮೀನಾಕ್ಷಿ ಲೇಖಿ ವಿರುದ್ಧ ಆಶೀಶ್ ಖೇತಾನ್ ಅವರು ಸೋಲು ಕಂಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯಿಂದ ಸ್ಪರ್ಧಿಸಲು ಬಯಸಿದ್ದರು.