ಕೋವಿಡ್ ಚಿಕಿತ್ಸೆಯಲ್ಲಿ ಗಾಯತ್ರಿ ಮಂತ್ರ ಪಠಣ, ಪ್ರಾಣಾಯಾಮ ಎಷ್ಟು ಪರಿಣಾಮಕಾರಿ?
ನವದೆಹಲಿ, ಮಾರ್ಚ್ 20: ಕೊರೊನಾ ಚಿಕಿತ್ಸೆಯ ಜತೆಗೆ ಗಾಯತ್ರಿ ಮಂತ್ರ ಪಠಣ ಹಾಗೂ ಪ್ರಾಣಾಯಾಮ ಮಾಡುವುದರಿಂದ ಕೋವಿಡ್ 19 ರೋಗಿಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಏಮ್ಸ್ ಸಂಶೋಧನೆ ನಡೆಸುತ್ತಿದೆ.
ಈ ಸಂಧೋಧನೆಯನ್ನು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಪ್ರಾಯೋಜಿಸಿದೆ. 20 ಕೋವಿಡ್ ರೋಗಿಗಳನ್ನು ಆಯ್ದುಕೊಂಡಿರುವ ಏಮ್ಸ್ ಅವರನ್ನು ತಲಾ 10 ಜನರ ಎ ಮತ್ತು ಬಿ ಗುಂಪುಗಳನ್ನಾಗಿ ವಿಂಗಡಿಸಿದೆ.
ಕೋವಿಡ್ 19: ಮಾರ್ಚ್ 20ರಂದು ಯಾವ ದೇಶದಲ್ಲಿ ಹೆಚ್ಚು ಗುಣಮುಖ?
ಎ ಗುಂಪಿನ ರೋಗಿಗಳು ಮಾಮೂಲು ಚಿಕಿತ್ಸೆಯ ಜತೆಗೆ ಗಾಯತ್ರಿ ಮಂತ್ರವನ್ನು ಪಠಿಸುತ್ತಾರೆ, ಬೆಳಗ್ಗೆ ಹಾಗೂ ಸಂಜೆ ಒಂದು ಗಂಟೆ ಪ್ರಾಣಾಯಾಮ ಮಾಡುತ್ತಿದ್ದಾರೆ.
ಬಿ ಗುಂಪಿನ ರೋಗಿಗಳು ಮಾಮೂಲು ಚಿಕಿತ್ಸೆಯನ್ನಷ್ಟೇ ಪಡೆಯುತ್ತಿದ್ದಾರೆ. 14 ದಿನಗಳ ಕಾಲ ಈ ಪ್ರಯೋಗ ನಡೆಯಲಿದೆ, ಈ ಅವಧಿಯಲ್ಲಿ ಆಸ್ಪತ್ರೆಯು ರೋಗಿಗಳ ಶರೀರದಲ್ಲಿ ಉರಿಯೂತದ ಮೇಲೆ ನಿಗಾ ಇರಿಸುತ್ತದೆ.
ಪ್ರಯೋಗಕ್ಕೂ ಮೊದಲು ವಿವಿಧ ಪರೀಕ್ಷೆಗಳ ಮೂಲಕ ಎಲ್ಲಾ ರೋಗಿಗಳ ಉರಿಯೂತ ಮಟ್ಟವನ್ನು ಗುರುತಿಸಲಾಗಿದ್ದು, ಟ್ರಯಲ್ ಅಂತ್ಯಗೊಂಡ ಬಳಿಕ ಎ ಮತ್ತು ಬಿ ಗುಂಪಿನ ರೋಗಿಗಳಲ್ಲಿ ಉರಿಯೂತ ಮಟ್ಟಗಳಲ್ಲಿ ವ್ಯತ್ಯಾಸವಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಆದರೆ ರೋಗಿಗಳ ಎರಡು ಗುಂಪುಗಳನ್ನು ಸೃಷ್ಟಿಸಲಾಗಿದೆ, ಮತ್ತು ಪ್ರಯೋಗ ಜಾರಿಯಲ್ಲಿದೆ ಎನ್ನುವುದನ್ನು ಖಚಿತಪಡಿಸಿರುವ ಡಿಎಸ್ಟಿಯಲ್ಲಿನ ಮೂಲಗಳು, ಅಧ್ಯಯನವು ಪೂರ್ಣಗೊಂಡ ಬಳಿಕ ವರದಿಯನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅದರ ಪ್ರಕಟಣೆಯ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿವೆ.
ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಏಮ್ಸ್ನ ಡಾ. ರುಚಿ ದುವಾ ಅವರು ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.