Raghuveer: ಕಾಲ ಗಾಯವನ್ನ ಗುಣಪಡಿಸಲ್ಲ, ಮೌನವಾಗಿರಲು ಕಲಿಸುತ್ತದೆ: ನಟ ರಘುವೀರ್ ಪುತ್ರಿ ಭಾವುಕ ಪೋಸ್ಟ್
ಸ್ಯಾಂಡಲ್ವುಡ್ನ "ಚೈತ್ರದ ಪ್ರೇಮಾಂಜಲಿ" ಖ್ಯಾತಿಯ ದಿವಂಗತ ನಟ ರಘುವೀರ್ ಅವರ ಪುತ್ರಿ ಮೋಕ್ಷಾ ತಮ್ಮ ತಂದೆಯನ್ನು ಕಳೆದುಕೊಂಡು 12 ವರ್ಷಗಳಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ನೆನಪಿನಲ್ಲಿ ಅವರು ಬರೆದಿರುವ ಹೃದಯಸ್ಪರ್ಶಿ ಸಾಲುಗಳು ಇಲ್ಲಿವೆ. ತಂದೆಯನ್ನು ಕಳೆದುಕೊಂಡು ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಆ ನೋವು ಇಂದಿಗೂ ಹಸಿರಾಗಿಯೇ ಇದೆ ಎಂದು ಮೋಕ್ಷಾ ರಘುವೀರ್ ಅವರು ಭಾವುಕರಾಗಿದ್ದಾರೆ.
"ನಿಮ್ಮನ್ನು ಕಳೆದುಕೊಂಡು ಇಂದಿಗೆ 12 ವರ್ಷಗಳಾದವು. ಆದರೆ ಈ ಕ್ಷಣಕ್ಕೂ ಆ ಘಟನೆ ನಿನ್ನೆಯಷ್ಟೇ ನಡೆದಂತೆ ಭಾಸವಾಗುತ್ತಿದೆ ಅಪ್ಪ. ಕಾಲ ಎಲ್ಲವನ್ನೂ ಗುಣಪಡಿಸುತ್ತದೆ ಎಂದು ಜನರು ಹೇಳುತ್ತಾರೆ, ಆದರೆ ಕೆಲವು ಗಾಯಗಳು ಮೌನವಾಗಿರುವುದನ್ನು ಕಲಿಯುತ್ತವೆಯೇ ಹೊರತು ಮಾಯವಾಗುವುದಿಲ್ಲ ಎಂಬುದು ನನಗೆ ಈಗ ಅರಿವಾಗುತ್ತಿದೆ" ಎಂದು ಬರೆದಿದ್ದಾರೆ.

ಒಂಟಿತನ ಇಷ್ಟು ಕಾಡುತ್ತಿರಲಿಲ್ಲ ಅಪ್ಪ
"ನಾನು ಬೆಳೆದು ದೊಡ್ಡವಳಾಗಿದ್ದೇನೆ, ಜೀವನವೂ ತನ್ನ ಪಾಡಿಗೆ ತಾನು ಮುಂದೆ ಸಾಗುತ್ತಿದೆ. ಆದರೆ ಇಂದಿಗೂ ನನ್ನೊಳಗಿನ ಆ ಪುಟ್ಟ ಹುಡುಗಿ ಪ್ರತಿಯೊಂದು ಜನಸಂದಣಿಯಲ್ಲೂ ನಿಮ್ಮ ಮುಖವನ್ನೇ ಹುಡುಕುತ್ತಿದ್ದಾಳೆ. ನೀವು ಕೇವಲ ಒಂದು ಬಾರಿ ಮರಳಿ ಬರಬಾರದೇ ಎಂದು ನಾನು ಹಂಬಲಿಸುತ್ತಲೇ ಇರುತ್ತೇನೆ. ಜೀವನದಲ್ಲಿ ನೀವು ನನ್ನ ಜೊತೆಗಿರಬೇಕಾದ ಅನೇಕ ಕ್ಷಣಗಳಿದ್ದವು, ನಿಮ್ಮ ಮುಂದೆ ಹೇಳಿಕೊಳ್ಳಬೇಕಾದ ಸಾವಿರಾರು ಮಾತುಗಳಿದ್ದವು. ಅಪ್ಪ, ಒಂದು ವೇಳೆ ನೀವಿಂದು ನಮ್ಮ ಜೊತೆಗಿದ್ದಿದ್ದರೆ, ಈ ಜೀವನದ ಹಾದಿ ಇನ್ನಷ್ಟು ಮೃದುವಾಗಿರುತ್ತಿತ್ತೇನೋ ಮತ್ತು ಈ ಒಂಟಿತನ ಇಷ್ಟು ಕಾಡುತ್ತಿರಲಿಲ್ಲವೇನೋ ಎಂದು ನನಗೆ ಆಗಾಗ ಅನಿಸುತ್ತದೆ ಎಂದು ನೆನೆದಿದ್ದಾರೆ.
ಎಲ್ಲೇ ಇದ್ದರೂ ನನ್ನನ್ನು ನೋಡುತ್ತಿದ್ದೀರಿ
ನಾನು ನಿಮ್ಮ ಧ್ವನಿಯನ್ನು, ನಿಮ್ಮ ಪ್ರೀತಿಯ ಉಪಸ್ಥಿತಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀವು ಜೊತೆಗಿದ್ದಾಗ ಸಿಗುತ್ತಿದ್ದ ಆ ಸುರಕ್ಷತೆಯ ಭಾವ ಇಂದು ನೆನಪುಗಳಲ್ಲಷ್ಟೇ ಉಳಿದಿದೆ. ಈಗ ಆ ನೆನಪುಗಳನ್ನೇ ಗಟ್ಟಿಯಾಗಿ ಹಿಡಿದುಕೊಂಡು, ಅವುಗಳಲ್ಲೇ ನಿಮ್ಮನ್ನು ಕಾಣಲು ಪ್ರಯತ್ನಿಸುತ್ತಿದ್ದೇನೆ. ನೀವು ಎಲ್ಲೇ ಇದ್ದರೂ ನನ್ನನ್ನು ನೋಡುತ್ತಿದ್ದೀರಿ ಎಂಬ ನಂಬಿಕೆ ನನಗಿದೆ. ನೀವು ನನಗೆ ಕಲಿಸಿಕೊಟ್ಟ ಹಾದಿಯಲ್ಲೇ ನಾನು ಇಂದಿಗೂ ಮುನ್ನಡೆಯಲು ಪ್ರಯತ್ನಿಸುತ್ತಿದ್ದೇನೆ ಅಪ್ಪ" ಎಂದು ಮೋಕ್ಷಾ ರಘುವೀರ್ ತನ್ನ ತಂದೆಯನ್ನು ಸ್ಮರಿಸಿದ್ದಾರೆ.
ಜೀವನವು ತನ್ನ ಪಾಡಿಗೆ ತಾನು ಮುಂದೆ ಸಾಗುತ್ತಿದ್ದರೂ, ತಮ್ಮೊಳಗಿನ ಆ ಪುಟ್ಟ ಹುಡುಗಿ ಇಂದಿಗೂ ಪ್ರತಿಯೊಂದು ಜನಸಂದಣಿಯಲ್ಲೂ ತಂದೆಯ ಮುಖವನ್ನು ಹುಡುಕುತ್ತಲೇ ಇರುವುದಾಗಿ ಬರೆದುಕೊಂಡಿರುವ ಅವರು, ತಂದೆ ಒಂದು ಬಾರಿ ಮರಳಿ ಬರಬಾರದೇ ಎಂಬ ಹಂಬಲ ಅವರ ಸಾಲುಗಳಲ್ಲಿದೆ. ಜೀವನದ ಅನೇಕ ಪ್ರಮುಖ ಕ್ಷಣಗಳಲ್ಲಿ ತಂದೆ ಜೊತೆಗಿರಬೇಕಿತ್ತು ಮತ್ತು ಅವರಿಗೆ ಹೇಳಬೇಕಾದ ಅನೇಕ ಮಾತುಗಳು ಬಾಕಿ ಉಳಿದಿವೆ ಎಂಬ ಕೊರಗು ಅವರನ್ನು ಕಾಡುತ್ತಿದೆ. ತಂದೆ ಜೊತೆಗಿದ್ದಿದ್ದರೆ ಈ ಜೀವನದ ಹಾದಿ ಇನ್ನಷ್ಟು ಮೃದುವಾಗಿರುತ್ತಿತ್ತು ಮತ್ತು ಒಂಟಿತನ ಇಷ್ಟು ಕಾಡುತ್ತಿರಲಿಲ್ಲ ಎಂದು ಅವರು ಅತೀವ ನೋವಿನಿಂದ ಸ್ಮರಿಸಿದ್ದಾರೆ.
ರಘುವೀರ್ ಬದುಕಲ್ಲಿ ದುರಂತ
90ರ ದಶಕದ ಪ್ರೇಕ್ಷಕರ ಮನಗೆದ್ದಿದ್ದ ನಟ ರಘುವೀರ್ ಅವರ ಪುತ್ರಿಯ ಈ ಪೋಸ್ಟ್ ಸದ್ಯ ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿದೆ. 'ಚೈತ್ರದ ಪ್ರೇಮಾಂಜಲಿ' ಚಿತ್ರದ ಮೂಲಕ 90ರ ದಶಕದಲ್ಲಿ ಮನೆಮಾತಾಗಿದ್ದ ರಘುವೀರ್, ಕನ್ನಡದ ಯಶಸ್ವಿ ನಟರಲ್ಲಿ ಒಬ್ಬರು. ಇವರು 'ಅಜಯ್ ವಿಜಯ್' ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ಎಸ್. ನಾರಾಯಣ್ ನಿರ್ದೇಶನದ 'ಚೈತ್ರದ ಪ್ರೇಮಾಂಜಲಿ' ಇವರ ವೃತ್ತಿಜೀವನದ ಮೈಲಿಗಲ್ಲು. ಇದಲ್ಲದೆ ಶೃಂಗಾರ ಕಾವ್ಯ, ಉಯ್ಯಾಲೆ ಹಾಗೂ ಕಾವೇರಿ ತೀರದಲ್ಲಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಇವರು ಮೊದಲಿಗೆ ನಟಿ ಸಿಂಧು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಶ್ರೇಯಾ ಎಂಬ ಪುತ್ರಿ ಇದ್ದಾರೆ. ಆದರೆ ಜೀವನದ ನಂತರದ ದಿನಗಳಲ್ಲಿ ವೈಯಕ್ತಿಕ ನೋವು ಹಾಗೂ ಸಿನಿಮಾಗಳ ವೈಫಲ್ಯದಿಂದ ಸಂಕಷ್ಟ ಎದುರಿಸಿದರು. ರಘುವೀರ್ ಅವರು 2006ರಲ್ಲಿ ತಮ್ಮ ಸಂಬಂಧಿಯಾದ ಗೌರಿ ಅವರನ್ನು ವಿವಾಹವಾದರು. 2014ರಲ್ಲಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ರಘುವೀರ್ ನಿಧನರಾದರು. ಇವರು ಚಿತ್ರರಂಗದ 'ದುರಂತ ನಾಯಕ' ಎಂದೇ ಗುರುತಿಸಲ್ಪಟ್ಟಿದ್ದಾರೆ.













Click it and Unblock the Notifications