ಗೃಹಲಕ್ಷ್ಮಿಯರಿಗೆ ಢವಢವ; ಖಾತೆ ವಿವರವೇ ಇಲ್ಲದೆ ₹46.52 ಕೋಟಿ ವರ್ಗಾವಣೆ ಆಗಿದೆ ಎಂದ ವಿಪಕ್ಷ ನಾಯಕ
ಬೆಂಗಳೂರು: ರಾಜ್ಯ ಸರ್ಕಾರದ ಪಂಚಗ್ಯಾರಂಟಿಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಹಣ ದುರುಪಯೋಗವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಸಿಎಜಿ (ಕಂಟ್ರೋಲರ್ ಅಂಡ್ ಆಡಿಟರ್ ಜನರಲ್) ಈ ಯೋಜನೆಯ ಲೋಪದೋಷಗಳ ಬಗ್ಗೆ ನೀಡಿರುವ ವರದಿ ಉಲ್ಲೇಖಿಸಿರುವ ಅವರು, ಇದು ಬಡ ಮಹಿಳೆಯರ ಸಬಲೀಕರಣದ ಯೋಜನೆಯಲ್ಲ, ಬದಲಿಗೆ ಕಾಂಗ್ರೆಸ್ಸಿಗರ ಜೇಬು ತುಂಬಿಸುವ "ಕಾಂಗ್ರೆಸ್ ಲಕ್ಷ್ಮಿ" ಯೋಜನೆ ಎಂದು ಟೀಕಿಸಿದ್ದಾರೆ.
19,000ಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ
ಯೋಜನೆಯ ನಿಯಮಾವಳಿಗಳ ಪ್ರಕಾರ ಪ್ರತಿಯೊಬ್ಬ ಫಲಾನುಭವಿಗೆ ಪ್ರತ್ಯೇಕ ಬ್ಯಾಂಕ್ ಖಾತೆ ಇರಬೇಕು. ಆದರೆ, ಸಿಎಜಿ ಆಡಿಟ್ನಲ್ಲಿ ಬರೋಬ್ಬರಿ 19,020 ಫಲಾನುಭವಿಗಳಿಗೆ ಒಂದೇ ಒಂದು ಬ್ಯಾಂಕ್ ಖಾತೆ ಸಂಖ್ಯೆಯನ್ನು ಜೋಡಿಸಿರುವುದು ಪತ್ತೆಯಾಗಿದೆ. ಇದನ್ನು ಕೇವಲ ತಾಂತ್ರಿಕ ದೋಷ ಎಂದು ಒಪ್ಪಲು ಸಾಧ್ಯವಿಲ್ಲ ಎಂದಿರುವ ಅಶೋಕ್, "ಸಾವಿರಾರು ಮಹಿಳೆಯರ ಹೆಸರಿನಲ್ಲಿ ಬಿಡುಗಡೆಯಾದ ಈ ಹಣ ಅಂತಿಮವಾಗಿ ಯಾರ ಖಾತೆಗೆ ತಲುಪಿದೆ ಮತ್ತು ಇದರ ನಿಜವಾದ ಫಲಾನುಭವಿಗಳು ಯಾರು" ಎಂದು ಪ್ರಶ್ನಿಸಿದ್ದಾರೆ.

ಖಾತೆ ವಿವರವೇ ಇಲ್ಲದೆ ₹46.52 ಕೋಟಿ ವರ್ಗಾವಣೆ
ಯಾವುದೇ ಬ್ಯಾಂಕ್ ಖಾತೆಯ ಅಧಿಕೃತ ವಿವರಗಳೇ ಇಲ್ಲದ ದಾಖಲೆಗಳಿಗೆ ಸರ್ಕಾರ ಸಾರ್ವಜನಿಕರ ಹಣವನ್ನು ವರ್ಗಾಯಿಸಿದೆ ಎಂಬ ಆಘಾತಕಾರಿ ಅಂಶವನ್ನು ಅವರು ಹೊರಹಾಕಿದ್ದಾರೆ. 23,262 ದಾಖಲೆಗಳಿಗೆ ಯಾವುದೇ ಬ್ಯಾಂಕ್ ವಿವರಗಳಿಲ್ಲದಿದ್ದರೂ ₹46.52 ಕೋಟಿ ರೂಪಾಯಿ ಹಣ ಜಮೆಯಾಗಿದೆ. ಇದು ವ್ಯವಸ್ಥಿತವಾಗಿ ನಡೆದಿರುವ ದರೋಡೆ ಎಂದು ಅವರು ಆರೋಪಿಸಿದ್ದಾರೆ.
ಮೂರು ಕಂತುಗಳ ಹಣ ಇನ್ನೂ ಬಂದಿಲ್ಲ
ಅರ್ಹ ಮಹಿಳೆಯರಿಗೆ ತಲುಪಬೇಕಾಗಿದ್ದ ಸತತ ಮೂರು ಕಂತುಗಳ ಗೃಹಲಕ್ಷ್ಮಿ ಹಣ ಇನ್ನೂ ಅನೇಕರಿಗೆ ತಲುಪಿಲ್ಲ. ಸಾವಿರಾರು ಕೋಟಿ ರೂಪಾಯಿ ಹಣ ಮಹಿಳೆಯರ ಹೆಸರಿನಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದರೂ, ಬಡ ಕುಟುಂಬಗಳಿಗೆ ತಲುಪದೇ ಎಲ್ಲಿಗೆ ಮಾಯವಾಯಿತು? ಈ ನಷ್ಟಕ್ಕೆ ಹೊಣೆ ಯಾರು? ಬಡವರ ಹಕ್ಕಿನ ಹಣವನ್ನು ಯಾರು ಗುಳುಂ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಯೋಜನೆಯಲ್ಲಿ ಪಾರದರ್ಶಕತೆ ಇದ್ದರೆ ಆಡಿಟ್ ನಡೆಸಲು ಸಿಎಜಿಗೆ ದಾಖಲೆಗಳನ್ನು ನೀಡಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಫಲಾನುಭವಿಗಳ ಸಂಪೂರ್ಣ ಪಟ್ಟಿ ನೀಡಲು ನಿರಾಕರಣೆ, ಯೋಜನೆಯಿಂದ ರದ್ದುಪಡಿಸಲಾದ ಅರ್ಹರ ಮಾಹಿತಿ ಮುಚ್ಚಿಟ್ಟಿರುವುದು, ಆಡಿಟ್ಗೆ ಅಗತ್ಯವಿರುವ ಪ್ರಮುಖ ದಾಖಲೆಗಳನ್ನು ಒದಗಿಸದಿರುವುದು ಸರ್ಕಾರದ ಮೇಲಿನ ಅನುಮಾನಗಳನ್ನು ಹೆಚ್ಚಿಸಿದೆ. ಮಡಿಕೆಯಲ್ಲಿ ಅಕ್ಕಿ ಇದ್ದರೆ ಮುಚ್ಚಳ ತೆಗೆದು ತೋರಿಸಲು ಭಯವೇಕೆ" ಎಂದು ವ್ಯಂಗ್ಯವಾಡಿದ್ದಾರೆ.
ಮಹಿಳೆಯರ ವೋಟ್ ಬ್ಯಾಂಕ್ಗಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿ, ಸಾರ್ವಜನಿಕರ ತೆರಿಗೆ ಹಣದಲ್ಲಿ ಜಾಹೀರಾತು ನೀಡುತ್ತಿರುವ ಕಾಂಗ್ರೆಸ್ ಸರ್ಕಾರ, ಅನುಷ್ಠಾನದಲ್ಲಿ ಮಾತ್ರ ಭ್ರಷ್ಟಾಚಾರ ಮತ್ತು ಗೊಂದಲಗಳ ಸರಮಾಲೆಯನ್ನೇ ಸೃಷ್ಟಿಸಿದೆ. ರಾಜ್ಯದ ಜನತೆಯ ಭಾವನೆಗಳ ಜೊತೆ ಆಟವಾಡುತ್ತಿರುವ ಮತ್ತು ತೆರಿಗೆ ಹಣ ಲೂಟಿ ಮಾಡುತ್ತಿರುವ ಈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆರ್.ಅಶೋಕ್ ಎಚ್ಚರಿಸಿದ್ದಾರೆ.













Click it and Unblock the Notifications