ವಿಜಯೇಂದ್ರಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಮೈಸೂರಲ್ಲಿ ಭಾರೀ ಆಕ್ರೋಶ
ಮೈಸೂರು, ಏಪ್ರಿಲ್ 23 : ಕೊನೆ ಕ್ಷಣದಲ್ಲಿ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಯಡಿಯೂರಪ್ಪ ಕಾರ್ಯಕರ್ತರ ಬಳಿ ಕ್ಷಮೆ ಯಾಚಿಸಿದ್ದಾರೆ. ಸಮಾವೇಶದ ಬಳಿಕ ನಡೆದ ಗಲಾಟೆ ಕುರಿತಂತೆ ಹಾಗೂ ಮುಂದಿನ ನಡೆಯ ಕುರಿತಾಗಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿ, ಮಾಧ್ಯಮಗಳೊಂದಿಗೆ ಮಾತನಾಡಿದರು.
ವರುಣಾ ಕ್ಷೇತ್ರದಿಂದ ನನ್ನ ಮಗ ಬಿ.ವೈ. ವಿಜಯೇಂದ್ರನಿಗೆ ಟಿಕೆಟ್ ತಪ್ಪಿದ್ದರಿಂದ ಕಾರ್ಯಕರ್ತರ ಬಳಿ ಕ್ಷಮೆ ಕೇಳುತ್ತೇನೆ. ಹೈಕಮಾಂಡ್ ನಿರ್ಧಾರವನ್ನು ನಾವು ಪಾಲಿಸಲೇಬೇಕು. ವಿಜಯೇಂದ್ರ 10 ದಿನಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾನೆ. ಈಗಲೂ ಬಿ.ವೈ. ವಿಜಯೇಂದ್ರನೇ ಸ್ಪರ್ಧಿಸಿದ್ದಾನೆಂದು ತಿಳಿದು ಸಾಮಾನ್ಯ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ವಿಜಯೇಂದ್ರಗೆ ವರುಣಾ ಟಿಕೆಟ್ ಕೊಡಬಾರದೆಂದು ನಾನು ನಂಜನಗೂಡಿಗೆ ಹೊರಡುವ ಮುನ್ನವೇ ತೀರ್ಮಾನಿಸಿದ್ದೆ. ಈ ನಿರ್ಧಾರದ ಹಿಂದೆ ಸಂಘ ಪರಿವಾರದ ಅಥವಾ ಹೈಕಮಾಂಡ್ ನ ಹಸ್ತಕ್ಷೇಪ ಇಲ್ಲ ಎಂದು ಬಿಎಸ್ ವೈ ಸ್ಪಷ್ಟಪಡಿಸಿದರು. ಹಲವು ಕಾರಣದಿಂದ ವಿಜಯೇಂದ್ರ ಇಲ್ಲಿ ಸ್ಪರ್ಧಿಸುತ್ತಿಲ್ಲ. ನಿರ್ಧಾರ ಬದಲಿಸುವುದಕ್ಕೆ ಇಂಥ ಕಾರಣ ಎಂದು ಹೇಳೋದಿಲ್ಲ. ವಿಜಯೇಂದ್ರನ ಅಪೇಕ್ಷೆಯಲ್ಲಿದ್ದ ವರುಣಾ ಜನತೆಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ವಿಜಯೇಂದ್ರರ ಬೆಂಬಲಕ್ಕೆ ಮಾಜಿ ಸಚಿವ ರಾಮದಾಸ್
ವಿಜಯೇಂದ್ರರ ಬೆಂಬಲಕ್ಕೆ ಮಾಜಿ ಸಚಿವ ರಾಮದಾಸ್ ನಿಂತಿದ್ದಾರೆ. ವರುಣಾದಲ್ಲಿ ಬಿಎಸ್ ವೈ ಮಗ ವಿಜಯೇಂದ್ರ ಅವರಿಗೆ ಟಿಕೆಟ್ ಕೊಡಬೇಕೆಂದು ರಾಮದಾಸ್ ಪಟ್ಟು ಹಿಡಿದಿದ್ದಾರೆ. ವಿಜಯೇಂದ್ರಗೆ ಟಿಕೆಟ್ ಸಿಗದೆ ಕಾರ್ಯಕರ್ತರು ರಾಜೀನಾಮೆ ಕೊಟ್ಟರೆ ನಾನೂ ಪಕ್ಷ ಬಿಡಲು ಸಿದ್ಧ ಎಂದ ರಾಮದಾಸ್.
ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ
ದಿ ಪ್ರೆಸಿಡೆಂಟ್ ಹೋಟೆಲ್ ಮುಂಭಾಗ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಿಜೆಪಿಯ ಕೇಸರಿ ಬಾವುಟಕ್ಕೆ ಬೆಂಕಿ ಹಚ್ಚಿ, ಆಕ್ರೋಶ ಹೊರಹಾಕಿದರು ಈ ವೇಳೆ ಹೋಟೆಲ್ ಬಳಿ ಪೊಲೀಸರು ಮತ್ತೊಮ್ಮೆ ಲಾಠಿಚಾರ್ಜ್ ಮಾಡಿದರು. ಗುಂಪು ಚದುರಿಸಲು ಮುಂದಾದ ವೇಳೆ ಪೊಲೀಸರು ಲಾಠಿ ಬೀಸಿದರು.
ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಸ್ಥಳಕ್ಕೆ
ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಸ್ಥಳಕ್ಕೆ ಬಂದು ಸನ್ನಿವೇಶದ ಪರಾಮರ್ಶೆ ನಡೆಸಿದರು. ಈ ಮಧ್ಯೆ ವಿಜಯೇಂದ್ರ ಅವರಿಗೇ ವರುಣಾ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ವಿಜಯೇಂದ್ರರನ್ನು ಬೆಂಬಲಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ವೇದಿಕೆಗೆ ನುಗ್ಗಿ ಕುರ್ಚಿಗಳು ಪುಡಿ
ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸಿದ ಬೆನ್ನಲ್ಲೆ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿ ಬಿಜೆಪಿ ಸಮಾವೇಶದ ವೇದಿಕೆಗೆ ನುಗ್ಗಿ ಕುರ್ಚಿಗಳನ್ನು ಪುಡಿ ಮಾಡಿದ್ದರು. ವಿಜಯೇಂದ್ರ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರು. ಈಗಲೂ ಪ್ರತಿಭಟನೆ ಮುಂದುವರೆದಿದ್ದು ಮೈಸೂರಿನ ಬಿಜೆಪಿ ಜನಪ್ರತಿನಿಧಿಗಳು ವಿಜಯೇಂದ್ರಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ.