ಪಿರಿಯಾಪಟ್ಟಣ ಬಳಿ ಹುಲಿ ಚರ್ಮ ವಶ: ಆರೋಪಿ ಬಂಧನ
ಮೈಸೂರು, ಅಕ್ಟೋಬರ್.04: ಹುಲಿ ಚರ್ಮವನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಆರೋಪಿಯನ್ನು ಸಂಚಾರಿ ಅರಣ್ಯ ದಳದ ಸಿಬ್ಬಂದಿ ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ವಲಯಕ್ಕೆ ಹೊಂದಿಕೊಂಡಿರುವ ಸಾಮಾಜಿಕ ಅರಣ್ಯ ಪ್ರದೇಶದ ಚೌತಿ ಗ್ರಾಮದ ನಿವಾಸಿ ಗೋವಿಂದೇಗೌಡ ಎಂಬಾತನೇ ಬಂಧಿತ ಆರೋಪಿ.
ಈತ ಮೂರ್ನಾಲ್ಕು ತಿಂಗಳ ಹಿಂದೆ ತಮ್ಮ ಜಮೀನಿಗೆ ಹೊಂದಿಕೊಂಡಂತಿರುವ ಸಿಲ್ವರ್ ಮರಗಳ ತೋಟಕ್ಕೆ ಉರುಳು ಹಾಕಿದ್ದು, ಅಲ್ಲಿ ಹುಲಿ ಸಿಕ್ಕಿಬಿದ್ದು ಸಾವನ್ನಪಿತ್ತು. ಬಳಿಕ ಅದರ ಚರ್ಮ ತೆಗೆದು ಅದನ್ನು ಮಾರಾಟ ಮಾಡಲು ಇನ್ನಿಬ್ಬರು ಸಹಚರರೊಂದಿಗೆ ಪ್ರಯತ್ನಿಸುತ್ತಿದ್ದನು ಎನ್ನಲಾಗಿದೆ.

ಕಳೆದ ಕೆಲವು ತಿಂಗಳಿನಿಂದಲೇ ಇದರ ಮಾರಾಟ ಮಾಡಲು ಯತ್ನಿಸಿದ್ದನಾದರೂ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೈಸೂರಿಗೆ ತೆರಳಿ ಮಾರಾಟ ಮಾಡಲು ತೀರ್ಮಾನಿಸಿ ಅದರಂತೆ ಮೈಸೂರಿಗೆ ತೆರಳಲು ಮುಂದಾಗಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಮೈಸೂರು ಸಂಚಾರಿ ಅರಣ್ಯ ದಳದ ಆರ್ಎಫ್ಓ ಹೆಚ್.ಎಸ್.ಪ್ರಕಾಶ್ ರವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿದ್ದು, ಈ ವೇಳೆ ಗೋವಿಂದೇಗೌಡ ಸಿಕ್ಕಿಬಿದ್ದಿದ್ದು ಜತೆಗಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ.
ಈ ಸಂಬಂಧ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಈ ಸಂದರ್ಭ ಹುಲಿ ಮೂಳೆ ಹಾಗೂ ಉಗುರುಗಳ ಬಗ್ಗೆ ನಿಖರ ಮಾಹಿತಿ ನೀಡಿಲ್ಲವೆಂದು ಹೇಳಲಾಗಿದೆ.












Click it and Unblock the Notifications