ಮೈಸೂರು ದಸರಾ: ಧೂಳೆಬ್ಬಿಸಿದ ಪೈಲ್ವಾನರು, ಖಾದ್ಯ ಸವಿದ ಪ್ರವಾಸಿಗರು...
ಮೈಸೂರು, ಅಕ್ಟೋಬರ್. 11: ದೇಶವೇ ತಿರುಗಿ ನೋಡುವ ವೈಭವದ ಹಬ್ಬ ನವರಾತ್ರಿಯ ದಸರಾ ಮಹೋತ್ಸವದಲ್ಲಿ ಗುರುವಾರ (ಅ.10) ಉದ್ಘಾಟನೆಯೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿತು.
ಅದರಲ್ಲಿ ಹೆಚ್ಚು ಸಂತಸಕೊಟ್ಟದ್ದು ಕುಪ್ಪಣ್ಣ ಉದ್ಯಾನದ ತರಹೇವಾರಿ ಹೂಗಳು. ಇನ್ನು ಗಾಜಿನ ಮನೆಯಲ್ಲಿ ಲೋಟಸ್ ಮಹಲ್ ಕಣ್ಮನ ಸೆಳೆಯಿತು. ಇತ್ತ ಆಹಾರಮೇಳದಲ್ಲಿ ವಿವಿಧ ಖಾದ್ಯಗಳನ್ನು ಪ್ರವಾಸಿಗರು ಸವಿದರು.
ಅಂದಹಾಗೆ ಆಹಾರಮೇಳದಲ್ಲಿ ವಿದೇಶಿ ಆಹಾರ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗದ ಆಹಾರ, ಪಂಜಾಬ್, ರಾಜಸ್ತಾನ, ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳ ಸಸ್ಯಾಹಾರ, ಮಾಂಸಾಹಾರದ ಘಮಲು ಇರಲಿದೆ.
ಚಾಮುಂಡಿವಿಹಾರದಲ್ಲಿ ಕ್ರೀಡಾ ಕಲರವ ನಿರ್ಮಾಣವಾದರೆ, ಡಿ.ದೇವರಾಜ ಅರಸು ವಿವಿಧೋದ್ದೇಶ ಅಖಾಡದಲ್ಲಿ ಪೈಲ್ವಾನವರು ಧೂಳೆಬ್ಬಿಸಿದರು. ಕಲಾಮಂದಿರದಲ್ಲಿ ಚಲನಚಿತ್ರೋತ್ಸವದ ರಂಗು ತೆರೆದುಕೊಂಡಿತು. ಸಂಜೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು. ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ..

ಕಂಗೊಳಿಸಿದ ತಳಿರು ತೋರಣ
ಮಹಿಷಾಸುರ ವೃತ್ತದಿಂದ ದೇಗುಲದವರೆಗೆ ತಳಿರು ತೋರಣ, ಸ್ವಾಗತ ಕಮಾನು, ಬಣ್ಣಬಣ್ಣದ ರಂಗೋಲಿಗಳು ಕಂಗೊಳಿಸಿದವು. ನಂದಿಧ್ವಜ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ತುಂಬಿದವು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅರಮನೆಗೆ ತೆರಳಿ ರಾಜವಂಶಸ್ಥೆ ಪ್ರಮೋದಾದೇವಿ ಅವರಿಗೆ ದಸರಾ ಶುಭಾಶಯ ಕೋರಿದರು.

ಪುಸ್ತಕ ಮೇಳ
ನಾಡಹಬ್ಬದ ಅಂಗವಾಗಿ ಇತ್ತ ವಿವಿಧ ಪ್ರಕಾಶನ ಸಂಸ್ಥೆಗಳು ನಗರದ ಕಾಡಾ ಕಚೇರಿಯ ಪುಸ್ತಕ ಮೇಳದಲ್ಲಿ ಭಾಗವಹಿಸಿವೆ. ಚೇತನ್ ಬುಕ್ ಹೌಸ್, ಸಾಹಿತ್ಯ ಸ್ತಂಭ, ನವಕರ್ನಾಟಕ ಪ್ರಕಾಶನ, ನಿಸರ್ಗ ಪ್ರಕಾಶನ, ಅಭಿರುಚಿ ಪ್ರಕಾಶನ, ಸಮಾಜ ನೆರಳೆಕಟ್ಟೆ, ಸಮೈಕ್ಯ ಪಬ್ಲಿಕೇಷನ್, ಜಯರಾಮ್ ಪ್ರಕಾಶನ, ಸಂತಕವಿ ಕನಕದಾಸರ ಸಂಶೋಧನ ಕೇಂದ್ರ, ಕುವೆಂಪು ಭಾಷಾ ಭಾರತಿ ಕೇಂದ್ರ, ಚಿಂತನ ಚಿತ್ತಾರ, ನ್ಯಾಷನಲ್ ಬುಕ್ಹೌಸ್, ಕನ್ನಡ ಗೋಮಿನಿ ಪ್ರಕಾಶನಗಳು ಸೇರಿದಂತೆ 45 ಪ್ರಕಾಶನಗಳು ಮೇಳದಲ್ಲಿದ್ದವು.

ಶೇ.50ರಷ್ಟು ರಿಯಾಯಿತಿ
ಮೇಳದಲ್ಲಿ ಭಾಗವಹಿಸುವ ಪ್ರಕಾಶನಗಳ ಪೈಕಿ ಮೈಸೂರಿನ ಅಭಿರುಚಿ ಪ್ರಕಾಶನವು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳಿಗೆ ಶೇ.20ರಷ್ಟು ರಿಯಾಯಿತಿ ನೀಡಿದೆ. ಶಿಗ್ಗಾವಿ ತಾಲ್ಲೂಕಿನ ಕರ್ನಾಟಕ ಜನಪದ ವಿಶ್ವವಿದ್ಯಾನಿಲಯ ಮಳಿಗೆ ಪುಸ್ತಕ ಗಳಿಗೆ ಶೇ.50ರಷ್ಟು ರಿಯಾಯಿತಿ ದೊರೆಯುತ್ತಿದೆ.

ಕ್ರೀಡಾಕೂಟ ಮೆರಗು
ಸಾಂಸ್ಕೃತಿಕ ಹಬ್ಬ ದಸರಾ ಮಹೋತ್ಸವದಲ್ಲಿ ಕ್ರೀಡಾಕೂಟದ್ದು ವಿಶೇಷ ಮೆರಗು. ನಾಡಿನ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಮುಖ್ಯ ವೇದಿಕೆಯಾದ ದಸರಾ ಕ್ರೀಡಾಕೂಟ-2018ರಲ್ಲಿ 23 ವಿಧದ ಕ್ರೀಡೆಯಲ್ಲಿ 4 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.












Click it and Unblock the Notifications