ಆರ್ಟಿಐನಡಿ ಮಾಹಿತಿ ನೀಡದೆ ನಿರ್ಲಕ್ಷ್ಯ: ಬಿಡಿಎ ಅಧಿಕಾರಿಗಳಿಗೆ ಭಾರೀ ದಂಡ ವಿಧಿಸಿದ ಮಾಹಿತಿ ಆಯೋಗ
ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಸಾರ್ವಜನಿಕರು ಕೋರಿದ ಮಾಹಿತಿಯನ್ನು ನೀಡಲು ವಿಫಲರಾದ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಇಬ್ಬರು ಹಿರಿಯ ಅಧಿಕಾರಿಗಳಿಗೆ ಕರ್ನಾಟಕ ಮಾಹಿತಿ ಆಯೋಗವು ಭಾರೀ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.
ಉಮೇಶ್ (ಉಪಕಾರ್ಯದರ್ಶಿ-1, ಬಿಡಿಎ) ಇವರಿಗೆ ಒಟ್ಟು 1 ಲಕ್ಷ ರೂ. ದಂಡ ವಿಧಿಸಲಾಗಿದೆ. ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 25 ಸಾವಿರ ರೂ.ನಂತೆ ಈ ದಂಡದ ಮೊತ್ತವನ್ನು ವಿಧಿಸಲಾಗಿದೆ. ಸಿ.ಎಲ್. ಶಿವಕುಮಾರ್ (ಕಾರ್ಯದರ್ಶಿ, ಬಿಡಿಎ) ಇವರಿಗೆ ಒಂದು ಪ್ರಕರಣದಲ್ಲಿ ಮಾಹಿತಿ ನೀಡದಿದ್ದಕ್ಕಾಗಿ 25 ಸಾವಿರ ರೂ. ದಂಡ ವಿಧಿಸಲಾಗಿದೆ.

ಶೋಕಾಸ್ ನೋಟಿಸ್ಗೂ ಕ್ಯಾರೇ ಎನ್ನದ ಅಧಿಕಾರಿ
ಆರ್ಟಿಐ ಕಾಯ್ದೆಯ ಕಲಂ 4ರ ನಿರ್ವಹಣೆಗೆ ಸಂಬಂಧಿಸಿದಂತೆ ತಕ್ಷಕ್, ತನ್ವಿತಾ ಗೌರ್, ಅಶ್ವಿಜಾ ಪಿ ಮತ್ತು ಬಾಲಚಂದ್ರ ರಾವ್ ಎಂಬ ನಾಲ್ವರು ಅರ್ಜಿದಾರರು ಪ್ರತ್ಯೇಕವಾಗಿ ಮಾಹಿತಿ ಕೋರಿದ್ದರು. ಆದರೆ ಅಧಿಕಾರಿ ಉಮೇಶ್ ಅವರು ಈ ಕೋರಿಕೆಗಳಿಗೆ ಸ್ಪಂದಿಸಿರಲಿಲ್ಲ. ಆಯೋಗವು ಶೋಕಾಸ್ ನೋಟಿಸ್ ನೀಡಿದ ನಂತರವೂ ಮಾಹಿತಿ ಒದಗಿಸದ ಕಾರಣ, ಆಯೋಗವು ದಂಡ ವಿಧಿಸುವುದರ ಜೊತೆಗೆ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಯಾಕೆ ಶಿಫಾರಸು ಮಾಡಬಾರದು ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಸುರೇಶ್ ಚಂದ್ರ ಬಾಬು ಎಂಬುವರು ಬಿಡಿಎ ಹೆಚ್ಚುವರಿ ಭೂ ಸ್ವಾಧೀನಾಧಿಕಾರಿಗಳ ಅಧಿಕಾರ ವ್ಯಾಪ್ತಿಯ ಕುರಿತ ಸರ್ಕಾರದ ಆದೇಶದ ಪ್ರತಿಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದ್ದು, ಕೂಡಲೇ ಮಾಹಿತಿ ನೀಡದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಆಯೋಗ ಎಚ್ಚರಿಸಿದೆ.
ಮಾಹಿತಿ ಹಕ್ಕು ಕಾಯ್ದೆಯ ಕಲಂ 4ರ ಅನ್ವಯ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು ತನ್ನ ಹೊಣೆಗಾರಿಕೆಗಳನ್ನು ಕಾಲಕಾಲಕ್ಕೆ ವೆಬ್ಸೈಟ್ನಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ. ಕಾಯ್ದೆ ಜಾರಿಯಾಗಿ 20 ವರ್ಷಗಳಾದರೂ ಈ ನಿಯಮ ಪಾಲನೆಯಾಗದ ಬಗ್ಗೆ ಸುಪ್ರೀಂಕೋರ್ಟ್ ಈ ಹಿಂದೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಆದೇಶವನ್ನು ಉಲ್ಲಂಘಿಸಿರುವ ಅಧಿಕಾರಿಗಳ ನಡೆಗೆ ಆಯೋಗವು ಈಗ ದಂಡದ ರೂಪದಲ್ಲಿ ಕಠಿಣ ಕ್ರಮ ಕೈಗೊಂಡಿದೆ.
ಮತ್ತೊಂದು ಪ್ರಕರಣದಲ್ಲಿ ಬಿಡಿಎ ಹೆಚ್ಚುವರಿ ಭೂ ಸ್ವಾಧೀನಾಧಿಕಾರಿಗಳ ಅಧಿಕಾರ ವ್ಯಾಪ್ತಿಯ ಕುರಿತಂತೆ ಸರ್ಕಾರದ ಆದೇಶದ ಪ್ರತಿಯನ್ನು ಕೋರಿ, ಸುರೇಶ್ ಚಂದ್ರ ಬಾಬು ಎಂಬುವರು, ಬಿಡಿಎ ಕಾರ್ಯದರ್ಶಿ ಶಿವಕುಮಾರ್ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಶಿವಕುಮಾರ್ ಅವರು ಕೂಡ ಅರ್ಜಿದಾರರು ಕೋರಿರುವ ದಾಖಲೆ ಒದಗಿಸಿಲ್ಲ. ಹೀಗಾಗಿ ಅರ್ಜಿದಾರರು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯೋಗ, ಮಾಹಿತಿ ನೀಡದ ಶಿವಕುಮಾರ್ ಅವರಿಗೆ 25 ಸಾವಿರ ರೂ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ. ಒಂದು ವೇಳೆ ಅರ್ಜಿದಾರರು ಕೋರಿರುವ ದಾಖಲೆಯನ್ನು ತಕ್ಷಣ ನೀಡದಿದ್ದಲ್ಲಿ ಶಿವಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.












Click it and Unblock the Notifications