ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಬಂತು ಸಬ್ ವೇ
ಮೈಸೂರು, ಮಾರ್ಚ್ 03; ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಮುಂಭಾಗದ ರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ಪಾರ್ಕಿಂಗ್ ಸ್ಥಳದಿಂದ ಪ್ರವಾಸಿಗರು ಮೃಗಾಲಯ ಪ್ರವೇಶಿಸಲು ಪರದಾಡುತ್ತಿದ್ದರು. ಈ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದು, ಸಬ್ ವೇ ನಿರ್ಮಾಣ ಮಾಡಲಾಗಿದೆ.
1.95 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿಗಳ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬುಧವಾರ ಸಬ್ ವೇ ಉದ್ಘಾಟಿಸಿದರು. 2020ರಲ್ಲಿ ಮೃಗಾಲಯ ಪ್ರಾಧಿಕಾರದಿಂದ ಸಬ್ ವೇ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು.
ಪ್ರಾಣಿಗಳ ಆಹಾರಕ್ಕೆಂದು ಬಂದ ದೇಣಿಗೆಯಲ್ಲಿ ಐಷಾರಾಮಿ ಕಾರು ಖರೀದಿಸಿದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ
ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಕಳೆದ ತಿಂಗಳಷ್ಟೇ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಸಬ್ ವೇಯನ್ನು ಪ್ರವಾಸಿಗರ ಬಳಕೆಗೆ ಮುಕ್ತಗೊಳಿಸಲಾಯಿತು.
ಮೈಸೂರು; ಹಸ್ತಪ್ರತಿ, ತಾಳೆಗರಿ ಸಂರಕ್ಷಣೆಗೆ ಡಿಜಿಟಲ್ ರೂಪ!
30 ಮೀ. ಉದ್ದದ ಸಬ್ವೇ; 1.95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಬ್ ವೇ 30 ಮೀಟರ್ ಉದ್ದ, 4.75 ಮೀಟರ್ ಅಗಲ ಹಾಗೂ 3 ಮೀಟರ್ ಎತ್ತರ ಹೊಂದಿದೆ. ಇದರಲ್ಲಿ ಮೃಗಾಲಯ ಪ್ರವೇಶಿಸುವವರು ಹಾಗೂ ಮೃಗಾಲಯ ವೀಕ್ಷಣೆ ಬಳಿಕ ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಪ್ರತ್ಯೇಕ ಮಾರ್ಗವಿದೆ. ಸಬ್ವೇ ವಿಶಾಲವಾಗಿರುವುದರಿಂದ ಹೆಚ್ಚಿನ ಪ್ರಮಾಣದ ಪ್ರವಾಸಿಗರ ಸಂಚಾರಕ್ಕೆ ಅನುಕೂಲವಾಗಿದೆ.
ಸಬ್ ವೇ ಉದ್ಘಾಟನೆ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, "ಮೃಗಾಲಯದಲ್ಲಿ ವಿಶೇಷವಾದ ಪ್ರಾಣಿ-ಪಕ್ಷಿಗಳಿವೆ. ಇದೇ ಕಾರಣಕ್ಕೆ ಮೃಗಾಲಯ ದೇಶ-ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಮೃಗಾಲಯ ಪ್ರವೇಶಿಸಲು ರಸ್ತೆ ದಾಟಲು ಪರದಾಡುತ್ತಿದ್ದುದ್ದನ್ನು ಗಮನಿಸಿದ ಮೃಗಾಲಯದ ಅಧಿಕಾರಿಗಳು ಸಬ್ ವೇ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದರು. 1.95 ಕೋಟಿ ರೂ. ವೆಚ್ಚದಲ್ಲಿ ಸಬ್ ನಿರ್ಮಿಸಲಾಗಿದ್ದು, ಪ್ರವಾಸಿಗರಿಗೆ ಅನುಕೂಲವಾಗಲಿದೆ" ಎಂದರು.
ಮೈಸೂರು ಮೃಗಾಲಯ ಸಂಪರ್ಕಿಸಲು ಅಂಡರ್ ಪಾಸ್ ನಿರ್ಮಾಣ
ಈ ಸಂದರ್ಭದಲ್ಲಿ ಸಂಸದ ಪ್ರತಾಪ ಸಿಂಹ, ಶಾಸಕ ಎಸ್. ಎ. ರಾಮದಾಸ್, ಮೇಯರ್ ಸುನಂದಾ ಪಾಲನೇತ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್. ಆರ್. ಮಹದೇವಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ವಾಟ್ಸಪ್ ಗ್ರೂಪ್ ರಚಿಸಿದ ಪ್ರತಾಪ್ ಸಿಂಹ; ಉಕ್ರೇನ್ನಲ್ಲಿ ಹಾವೇರಿ ಮೂಲಕ ನವೀನ್ ಮೃತಪಟ್ಟ ಹಿನ್ನಲೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಉಕ್ರೇನ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳ ಅನುಕೂಲಕ್ಕೆ ವಾಟ್ಸಪ್ ಗ್ರೂಪ್ ರಚನೆ ಮಾಡಿದ್ದಾರೆ. ಇವರಿಗೆ ಸಂಸದ ತೇಜಸ್ವಿ ಸೂರ್ಯ ಕೂಡ ಕೈ ಜೋಡಿಸಿದ್ದಾರೆ.
ಚಾಮರಾಜೇಂದ್ರ ಮೃಗಾಲಯದಲ್ಲಿ ಬುಧವಾರ ನೂತನವಾಗಿ ನಿರ್ಮಾಣಗೊಂಡಿರುವ ಕೆಳ ಸೇತುವೆ ಉದ್ಘಾಟನೆ ಬಳಿಕ ಮಾತನಾಡಿದ ಸಂಸದರು, "ಉಕ್ರೇನ್-ರಷ್ಯಾ ಯುದ್ಧದಲ್ಲಿ ಹಾವೇರಿ ವಿದ್ಯಾರ್ಥಿ ನವೀನ್ ಮೃತಪಟ್ಟಿರುವುದು ಅತೀವ ನೋವುಂಟು ಮಾಡಿದೆ. ನವೀನ್ ನಂಜನಗೂಡಿನ ಆದರ್ಶ ಶಾಲೆ ವಿದ್ಯಾರ್ಥಿ" ಎಂದರು.
"ಈ ಹಿಂದೆ ಕತಾರ್ ಹಾಗೂ ಅಫ್ಫಾನಿಸ್ತಾನದಲ್ಲಿ ಜನರನ್ನು ರಕ್ಷಣೆ ಮಾಡುವಾಗ ಒಂದು ಸಾವಾಗಿರಲಿಲ್ಲ. ಆದರೆ ಮೋದಿ ಆಡಳಿತದಲ್ಲಿ ಸುರಕ್ಷತೆ ಮಾಡುವ ವೇಳೆ ಮೊದಲ ಸಾವು ಸಂಭವಿಸಿದೆ. ಇದು ನೋವು ತಂದಿದೆ" ಎಂದು ಹೇಳಿದರು.
"ಉಕ್ರೇನ್ನಲ್ಲಿ ಯಾರೆಲ್ಲಾ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ ಅವರ ನೇರ ಸಂಪರ್ಕದಲ್ಲಿದ್ದೇವೆ. ಅವರ ಅನುಕೂಲಕ್ಕಾಗಿ ನಾನು ಮತ್ತು ಸಂಸದ ತೇಜಸ್ವಿ ಸೂರ್ಯ ವಾಟ್ಸ್ ಆ್ಯಪ್ ಗ್ರೂಪ್ ರಚನೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಅಧಿಕಾರಿಗಳಿಗೆ ಕ್ಷಣ ಕ್ಷಣದ ಮಾಹಿತಿ ಕೊಡುತ್ತಿದ್ದೇವೆ" ಎಂದು ವಿವರಿಸಿದರು.
"ಅಂದಾಜಿನ ಪ್ರಕಾರ ಉಕ್ರೇನ್ನಲ್ಲಿ 10 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಯುದ್ಧದ ವಿಚಾರದಲ್ಲಿ ಭಾರತ ಆಲಿಪ್ತ ನೀತಿ ತಾಳಿದ್ದು, ವಿದ್ಯಾರ್ಥಿಗಳಿಗೆ ಆತಂಕ ತಂದಿದೆ. ಸದ್ಯ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ತಕ್ಷಣ ಸಿಕ್ಕ ರೈಲುಗಳನ್ನು ಬಳಸಿಕೊಂಡು ಹಂಗೇರಿ ಸೇರಿದಂತೆ ಪಕ್ಕದ ಸ್ಥಳಗಳಿಗೆ ತಲುಪಿದರೇ ಅಲ್ಲಿಂದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಾಗುವುದು" ಎಂದು ತಿಳಿಸಿದರು.