ಮಣ್ಣುಪಾಲಾದ ಹುಣಸೂರಿನ ಬೀಜೋತ್ಪಾದನಾ ಕೇಂದ್ರ
ಪಾಳು ಬಿದ್ದ ಕಟ್ಟಡಗಳು, ತುಕ್ಕು ಹಿಡಿದು ಕಾಡುಪಾಲಾದ ಟ್ರ್ಯಾಕ್ಟರ್, ಗೆದ್ದಲು ಹಿಡಿದ ಕಡತಗಳು ಹೀಗೆ ಕೋಟ್ಯಂತರ ಆಸ್ತಿ ಮಣ್ಣುಪಾಲಾದ ಚಿತ್ರಣ ನಿಮಗೆ ಕಂಡು ಬರುವುದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಬೀಜೋತ್ಪಾದನಾ ಕೇಂದ್ರದಲ್ಲಿ.
ರೈತರಿಗೆ, ಕೃಷಿಗೆ ಸಹಾಯವಾಗಲಿ ಎಂದು ಹುಣಸೂರಿನಲ್ಲಿ ತೆರೆಯಲಾದ ಬೀಜೋತ್ಪಾದನಾ ಕೇಂದ್ರವೊಂದು ಕಳೆದ ಒಂದು ದಶಕದಿಂದ ಪಾಳುಬಿದ್ದಿದೆ. ಆದರೆ ಕೃಷಿ ಅಭಿವೃದ್ಧಿಯ ಬಗ್ಗೆ ಸದಾ ಮಾತನಾಡುವ ಜನಪ್ರತಿನಿಧಿಗಳ ಈ ಕಟ್ಟಡದ ದುಸ್ಥಿತಿಯ ಕಡೆಗೆ ಕಿಂಚಿತ್ತೂ ಗಮನ ಹರಿಸದಿರುವುದು ಜನರಲ್ಲಿ ಆಕ್ರೋಶ ಮತ್ತು ಅಚ್ಚರಿ ಮೂಡಿಸಿದೆ.
ಹುಣಸೂರಿನ ರತ್ನಪುರಿ ಗ್ರಾಮದಲ್ಲಿ ಪಾಳುಬಿದ್ದಿರುವ ಜಿಲ್ಲಾ ಪಂಚಾಯತ್ ಬೀಜೋತ್ಪಾದನಾ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು ಕೃಷಿ ಮತ್ತು ರೈತರ ಬಗ್ಗೆ ಸರ್ಕಾರಕ್ಕೆ ಇರುವ ಅಸಡ್ಡೆ ಮನೋಭಾವ ಮೊದಲ ನೋಟದಲ್ಲಿಯೇ ಗೋಚರವಾಗುತ್ತದೆ.
ಅಂದು ಮತ್ತು ನಂತರದ ದಿನಗಳಲ್ಲಿ ರೈತರ ಪಾಲಿಗೆ ಆಶಾಕಿರಣವಾದ ಬೀಜೋತ್ಪಾದನಾ ಕೇಂದ್ರ ನಿರ್ಲಕ್ಷ್ಯಕ್ಕೊಳಗಾಗಿದೆ. ಕೃಷಿಯ ಕುರಿತಾಗಿ ಯಾವುದೇ ಮಾಹಿತಿ ಪಡೆಯಲು ಬೇರೊಂದು ಕಡೆಗೆ ಹೋಗಬೇಕಾದ ಪರಿಸ್ಥಿತಿ ಈ ಗ್ರಾಮಸ್ಥರಿಗೆ.[ಕೃಷಿಯನ್ನೇ ಬದುಕಾಗಿಸಿಕೊಂಡ ಮೈಸೂರಿನ ಎಂ.ಕಾಂ ಪದವೀಧರೆ]
ಹುಣಸೂರಿನ ಬೀಜೋತ್ಪಾದನಾ ಕೇಂದ್ರವನ್ನು ಸ್ಥಾಪಿಸಿದವರು ಯಾರು? ಈ ಕೇಂದ್ರದ ದುರಾವಸ್ಥೆ, ಸ್ಥಳೀಯ ಜನರ ಅಳಲು ಏನು? ಎಂಬುದರ ಚಿತ್ರಣ ಇಲ್ಲಿದೆ ನೋಡಿ.
ಹುಣಸೂರಿನ ಬೀಜೋತ್ಪಾದನಾ ಕೇಂದ್ರ ಯಾರ ಕಾಲದಲ್ಲಿ ಸ್ಥಾಪನೆಯಾಗಿತ್ತು?
ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲಿ ಎಂದು ಕೃಷಿ ಅಧಿಕಾರಿಗಳಿಗೆ ವಾಸಕ್ಕೆ ಯೋಗ್ಯವಾದ ವಸತಿಗೃಹ ನಿರ್ಮಿಸಿ ದಾಸ್ತಾನು ಸಂಗ್ರಹಕ್ಕೆ ಸೂಕ್ತ ಕೊಠಡಿಗಳನ್ನು ನಿರ್ಮಿಸಿ ನೂರಾರು ಜನರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.
ಹುಣಸೂರಿನ ಬೀಜೋತ್ಪಾದನಾ ಕೇಂದ್ರದ ದುರಾವಸ್ಥೆ?
ಸುಮಾರು 15 ಎಕರೆ ಪ್ರದೇಶ ಹೊಂದಿರುವ ಕೇಂದ್ರದ ಜಮೀನಿನಲ್ಲಿ ತೆಂಗು, ಮಾವು, ಹಲಸು, ಹುಣಸೆ, ಕಹಿಬೇವು, ತೇಗ, ಹೆಬ್ಬೇವು ಹಾಗೂ ಇನ್ನಿತರೆ ಜಾತಿಯ ಗಿಡಗಳನ್ನು ನೆಡಲಾಗಿತ್ತು. ಆದರೆ ಅದನ್ನು ರಕ್ಷಿಸಿ ಪೋಷಿಸುವ ಕಾರ್ಯ ಮಾಡದ ಕಾರಣ ಗಿಡಗಂಟಿ ಬೆಳೆದು ಮರಗಿಡಗಳು ನಾಶವಾಗಿವೆ. ಪರಿಣಾಮ ಪೊದೆಗಳಲ್ಲಿ ವಿಷಜಂತು ಸೇರಿ ಭಯದ ವಾತಾವರಣ ನಿರ್ಮಾಣವಾಗಿದೆ.
ತುಕ್ಕು ಹಿಡಿದ ಟ್ರ್ಯಾಕ್ಟರ್, ಟ್ರೈಲರ್, ಟೈರ್ ಗಾಡಿ
ಸರ್ಕಾರ ನೀಡಿದ, ತುಕ್ಕು ಹಿಡಿದು ಪಾಳುಬಿದ್ದ ಟ್ರ್ಯಾಕ್ಟರ್, ಟ್ರೈಲರ್, ಟೈರ್ ಗಾಡಿ, ಇನ್ನಿತರೆ ಯಂತ್ರೋಪಕರಣಗಳ ಸುತ್ತಮುತ್ತಲೂ ಲಾಂಟೆನಾ ಇನ್ನಿತರ ಕಳೆ, ಗಿಡಗಂಟಿಗಳು ಬೆಳೆದಿದ್ದು, ವಾಹನಗಳು ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ.
ಧೂಳು, ಗೆದ್ದಲು ಹಿಡಿದ ದಾಖಲೆಗಳು?
ಇಲ್ಲಿನ ಕಚೇರಿಯಲ್ಲಿರುವ ದಾಖಲಾತಿಗಳು ಸರಿಯಾದ ನಿರ್ವಹಣೆಯಿಲ್ಲದೆ ಗೆದ್ದಲು ಹಿಡಿಯುತ್ತಿವೆ. ಇಷ್ಟೆಲ್ಲಾ ಆದರೂ ಯಾರೂ ಈ ಬೀಜೋತ್ಪದನಾ ಕೇಂದ್ರದತ್ತ ಗಮನಹರಿಸುತ್ತಿಲ್ಲ.
ಗ್ರಾಮಸ್ಥರ ಅಳಲು ಏನು?
ಒಂದೆಡೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇತ್ತ ರೈತರ ಅಭಿವೃದ್ಧಿಗಾಗಿ ಸ್ಥಾಪನೆಗೊಂಡ ಬೀಜೋತ್ಪಾದನಾ ಕೇಂದ್ರವೊಂದು ಪಾಳು ಬಿದ್ದಿರುವುದು ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾ ಕೊರತೆಗೆ ಕನ್ನಡಿ ಹಿಡಿದಂತಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಪಾಳು ಬಿದ್ದ ಬೀಜೋತ್ಪಾದನಾ ಕೇಂದ್ರಕ್ಕೆ ಮರು ಜೀವ ನೀಡಲಿ ಎಂಬುದು ಅಲ್ಲಿನ ಗ್ರಾಮಸ್ಥರ ಅಳಲಾಗಿದೆ.