ಸುಳ್ಳು ಹೇಳಬಾರದು ಪ್ರತಾಪ್ ಸಿಂಹಗೆ ವಿಶ್ವನಾಥ್ ತಿರುಗೇಟು!
ಮೈಸೂರು, ಆಗಸ್ಟ್ 22; ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ದಶಪಥ ರಸ್ತೆ ಹೆದ್ದಾರಿ ಕಾಮಗಾರಿ ಯೋಜನೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಈ ಯೋಜನೆಯನ್ನು ನಾನು ತಂದಿದ್ದು ಎನ್ನುತ್ತಿರುವ ಕೊಡಗು-ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಅದೇ ಪಕ್ಷದ ನಾಯಕ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಟಾಂಗ್ ನೀಡಿದ್ದಾರೆ.
ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ
ಮೈಸೂರಿನಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಹೆಚ್. ವಿಶ್ವನಾಥ್, "ಮೈಸೂರು-ಬೆಂಗಳೂರು, ಬೆಂಗಳೂರು-ಮಡಿಕೇರಿ, ಮಡಿಕೇರಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಗಳು ಅಂದಿನ ಯುಪಿಎ ಸರ್ಕಾರದ ಕೊಡುಗೆಗಳಾಗಿವೆ" ಎಂದರು.
ಮೈಸೂರು-ಬೆಂಗಳೂರು 10 ಪಥದ ರಸ್ತೆ 2022ಕ್ಕೆ ಪೂರ್ಣ
"ಆಗ ಕೇಂದ್ರದಲ್ಲಿ ಯುಪಿಎ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿತ್ತು. ಆಗ ಅನುಮೋದನೆ ಆಗಿರುವ ಯೋಜನೆಗಳ ಶ್ರೇಯಸ್ಸು ಅಂದಿನ ಸರ್ಕಾರಗಳಿಗೆ ಸಲ್ಲಬೇಕು. 10-12 ವರ್ಷಗಳ ಹಿಂದೆ ಆಗಿರುವ ಯೋಜನೆಗಳನ್ನು ನಾನು ಮಾಡಿದೆ ಎಂದು ಸುಳ್ಳು ಹೇಳಬಾರದು" ಎಂದು ತಿರುಗೇಟು ನೀಡಿದರು.
ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗ ಆ. 29 ರಂದು ಉದ್ಘಾಟನೆ
"ಇದು ಪ್ರತಾಪ್ ಸಿಂಹ ಕೆಲಸವಲ್ಲ, ಯುಪಿಎ ಸರ್ಕಾರದ ಸಾಧನೆ. ಪ್ರತಾಪ್ ಸಿಂಹ ಹೊಸದಾಗಿ ಏನನ್ನಾದರೂ ಮಾಡಲಿ. ಸುಮ್ಮನೆ ಅನಾವಶ್ಯಕವಾಗಿ ಇದನ್ನು ನಾನು ಮಾಡಿದೆ ಎಂದು ಹೇಳಬಾರದು. ನೀವು ಎಂಪಿ ಆದ ನಂತರ ಈ ಯೋಜನೆ ಬಂದಿಲ್ಲ. ನಾನು ಹಾಗೂ ಅಂದು ಲೋಕಸಭಾ ಸದಸ್ಯರಾಗಿದ್ದ ಧ್ರುವನಾರಾಯಣ್, ರಮ್ಯ ಇದ್ದಾಗ ಬಂದ ಯೋಜನೆ. ಉಂಡುವಾಡಿ ಯೋಜನೆಯನ್ನು ಸಹ ನೀವು ತಂದಿದ್ದಲ್ಲ. ಪ್ರತಾಪ್ ಸಿಂಹ ಸುಳ್ಳು ಹೇಳುತ್ತಿದ್ದಾರೆ" ಎಂದು ಟೀಕಿಸಿದರು.
"ಮಿಸ್ಟರ್ ಪ್ರತಾಪ್ ಸಿಂಹ ದಶಪಥ ಯೋಜನೆ ನಿಮ್ಮದಲ್ಲ. ಇದು ನಾನು ಎಂಪಿ ಆಗಿದ್ದ ವೇಳೆ ಡಿಪಿಆರ್ ಆಗಿತ್ತು. ಆ ವೇಳೆ ನಾನು, ಧ್ರುವನಾರಾಯಣ್, ರಮ್ಯ, ಡಿ. ಕೆ. ಸುರೇಶ್ ಈ ಬಗ್ಗೆ ಸಭೆಗೆ ಹೋಗಿದ್ದೆವು. ಕೇಂದ್ರದಲ್ಲಿ ಕುಳಿತು ಈ ಬಗ್ಗೆ ಡಿಪಿಆರ್ ಫೈನಲ್ ಮಾಡಿಸಿದ್ದೇವೆ. ಆದರೆ ಈಗ ಬಂದು ನಾನು ಮಾಡಿದೆ ಅಂದರೆ ಹೇಗೆ?" ಎಂದು ವಿಶ್ವನಾಥ್ ಪ್ರಶ್ನೆ ಮಾಡಿದರು.
"ಇದರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಸರ್ಕಾರದ ಪಾತ್ರವು ಇದೆ. ಮಗು ಹುಟ್ಟಿದ ಬಳಿಕ ಬಿಟ್ಟು, ಶಾಲೆಗೆ ಹೋಗುವಾಗ ಮಗು ನಂದು ಎಂದರೆ ಹೇಗೆ?" ಎಂದು ಸಂಸದ ಪ್ರತಾಪ್ ಸಿಂಹರನ್ನು ಪ್ರಶ್ನಿಸಿದರು.
"ಮೈಸೂರು-ಬೆಂಗಳೂರು ದಶಪಥ ರಸ್ತೆ ನಿರ್ಮಾಣ ಸಂಸದ ಪ್ರತಾಪ್ ಸಿಂಹ ಸಾಧನೆ ಅಲ್ಲ. ಪ್ರತಾಪ್ ಸಿಂಹ ಹೇಳಿಕೆ ಸರಿ ಅಲ್ಲ. ನಾನೇ ಮಾಡಿಬಿಟ್ಟೆ ಅನ್ನೋದು ಸರಿ ಅಲ್ಲ. ಪಾಪ ಆ ಹೆಣ್ಣು ಮಗಳು ಹೇಳಿದ್ದು ಸರಿ ಇದೆ" ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ಮೇಲೆ ಮೃದು ಧೋರಣೆ ತೋರಿದರು.
"ಪ್ರತಾಪ್ ಸಿಂಹ ನಾನು ಮಾಡಿದೆ, ನಾನು ಕಡಿದೆ ಅಂತಾ ಹೇಳುವುದು ಸರಿ ಅಲ್ಲ. 10 ರಿಂದ 12 ವರ್ಷದ ಹಿಂದೆ ಇದು ಆಗಿದ್ದು. ಸುಳ್ಳು ಎಷ್ಟು ದಿನ ಅಂತಾ ಹೇಳುತ್ತೀರಾ?. ಸುಳ್ಳು ಹೇಳಬಾರದು. ನೀವು ಹೊಸದಾಗಿ ತಂದಿದ್ದರೆ ಬೇಕಾದರೆ ಜನರಿಗೆ ಹೇಳಿ" ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ವಿರುದ್ಧವೂ ವಾಗ್ದಾಳಿ ನಡೆಸಿದ ವಿಶ್ವನಾಥ್, "ಉಂಡುವಾಡಿ ಕುಡಿಯುವ ನೀರು ಯೋಜನೆ ಜಿಟಿಡಿ ಸಾಧನೆ ಅಲ್ಲ. ಅದನ್ನು ನಾನು ಮಾಡಿದ್ದು, ನೀವು ಎಲ್ಲಿದ್ದಿರೀ ಮಿಸ್ಟರ್ ಜಿ. ಟಿ. ದೇವೇಗೌಡ?" ಎಂದು ಟಾಂಗ್ ಕೊಟ್ಟರು.
ಶಾಲೆಗಳ ಆರಂಭ; ಇದೇ ವೇಳೆ ಸೋಮವಾರದಿಂದ ಶಾಲೆಗಳ ಪುನರಾರಂಭ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಶಾಲಾ ಆರಂಭದ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳು ನಗರಕ್ಕೆ ಸೀಮಿತವಾಗಿದೆ. ಆದರೆ ಈ ವಿಷಯದಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳ ಅನುಕೂಲಕ್ಕಾಗಿ ಶಾಲೆಗಳಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಇರಬೇಕು. ಸ್ಯಾನಿಟೈಸ್ ಸಂಪೂರ್ಣವಾಗಿ ಮಾಡಬೇಕು. ಮಕ್ಕಳು ಮಾನಸಿಕ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು" ಎಂದರು.
"ದಸರಾ ಶುರುವಾಗಲಿದೆ ಅಗತ್ಯ ಕ್ರಮ ಕೈಗೊಳ್ಳಬೇಕಿದ್ದು, ಸರಳ ಹಾಗೂ ಸಾಂಪ್ರದಾಯಿಕ ದಸರೆ ಆಗಿರಬೇಕು. ದುಷ್ಟ ಶಿಕ್ಷಕ, ಶಿಷ್ಟ ರಕ್ಷಕವಾಗಿ ದಸರಾ ಆಚರಣೆ ಆಗಬೇಕು. ಮೊದಲು ದಸರಾ ಪ್ರಾಧಿಕಾರ ಮಾಡಬೇಕು. ಎಲ್ಲಾ ಜಾತಿಗಳಿಗೂ ಪ್ರಾಧಿಕಾರ ಇರುವಾಗ ದಸರಾ ಆಚರಣೆಗೆ ಯಾಕೆ ಪ್ರಾಧಿಕಾರ ಇಲ್ಲ?" ಎಂದು ಪ್ರಶ್ನಿಸಿದರು.