ವಿಜಯೇಂದ್ರಗೆ ವರುಣಾ ಟಿಕೆಟ್ ನಿರಾಕರಣೆ, ಕಾರ್ಯಕರ್ತರ ದಾಂಧಲೆ
Recommended Video

ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ವರುಣಾದಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಕಾರ್ಯಕ್ರಮದಲ್ಲಿ ಗಲಾಟೆ ಪ್ರಾರಂಭಿಸಿದ್ದಾರೆ.
ನಂಜನಗೂಡಿನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರು 'ವಿಜಯೇಂದ್ರ ಅವರಿಗೆ ಟಿಕೆಟ್ ನೀಡುತ್ತಿಲ್ಲ, ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಿ' ಎಂದು ಹೇಳಿದರು ಕೂಡಲೇ ಆಕ್ರೋಶಗೊಂಡ ಕಾರ್ಯಕರ್ತರು ವಿಜಯೇಂದ್ರ ಅವರಿಗೇ ಟಿಕೆಟ್ ನೀಡಲೇಬೆಂಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ನಂತರ ವೇದಿಕೆ ಏರಿದ ಕಾರ್ಯಕರ್ತರು ವೇದಿಕೆ ಮೇಲಿದ್ದ ಕುರ್ಚಿ ಮೇಜುಗಳನ್ನು ಪುಡಿಗಟ್ಟಿದರು. ವಿಜಯೇಂದ್ರ ಅವರ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ವಿಜಯೇಂದ್ರ ಅವರೇ ವರುಣಾದಲ್ಲಿ ಅಭ್ಯರ್ಥಿ ಆಗಬೇಕೆಂದು ಒತ್ತಾಯ ಮಾಡಿದರು.

ಕಾರ್ಯಕರ್ತರ ದಾಂದಲೆ ಹೆಚ್ಚಾದಂತೆ ಪೊಲೀಸರು ವಿಜಯೇಂದ್ರ ಅವರನ್ನು ಪೊಲೀಸ್ ಜೀವಪಿನಲ್ಲಿ ಕೂರಿಸಿಕೊಂಡು ಸ್ಥಳದಿಂದ ತೆರಳಲು ಪ್ರಯತ್ನಿಸಿದರಾದರೂ ಪೊಲೀಸರ ವಾಹನಕ್ಕೂ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಸಹ ಮಾಡಿದರು.
ವರುಣಾದಿಂದ ಸಿಎಂ ಪುತ್ರ ಯತೀಂದ್ರ ಅವರ ವಿರುದ್ಧ ವಿಜಯೇಂದ್ರ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿತ್ತು, ವಿಜಯೇಂದ್ರ ಅವರು ವರುಣಾದಲ್ಲಿ ಮನೆ ಸಹ ಖರೀದಿಸಿ ಕೆಲವು ದಿನಗಳಿಂದ ಕ್ಷೇತ್ರದಲ್ಲಿ ಪ್ರಚಾರ ಸಹ ನಡೆಸಿದ್ದರು. ಇಂದು ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸಲು ಸಹ ಸಜ್ಜಾಗಿದ್ದರು ಆದರೆ ಕೊನೆ ಕ್ಷಣದಲ್ಲಿ ಆದ ಅಭ್ಯರ್ಥಿ ಬದಲಾವಣೆ ಘೋಷಣೆಯಿಂದ ಕಾರ್ಯಕರ್ತರು ಕೆರಳಿದ್ದಾರೆ.

ವರುಣಾದಿಂದ ರೇವಣಸಿದ್ದಯ್ಯ ಅಥವಾ ಜಿ.ಪಂ ಸದ್ಯಸ ಸದಾನಂದ ಅವರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಇದೀಗ ಬಿಡುಗಡೆ ಮಾಡಿರುವ ನಾಲ್ಕನೇ ಪಟ್ಟಿಯಲ್ಲಿ ವರುಣಾ, ಚಾಮುಂಡೇಶ್ವರಿ ಮತ್ತು ಬಾದಾಮಿಯ ಅಭ್ಯರ್ಥಿ ಇನ್ನೂ ಘೋಷಿಸದ ಕಾರಣ ಕುತೂಹಲ ಇನ್ನೂ ಹಾಗೇ ಉಳಿದಿದೆ.












Click it and Unblock the Notifications