ರೋಹಿಣಿ ಸಿಂಧೂರಿ ತಮ್ಮ ನಡವಳಿಕೆ ತಿದ್ದಿಕೊಳ್ಳಲಿ: ಮಾಜಿ ಸಚಿವ ಎ.ಮಂಜು
ಮೈಸೂರು, ಜೂನ್ 12: "ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ, ಹಿರಿಯ ರಾಜಕಾರಣಿಗಳಿಗೆ ಗೌರವ ನೀಡಲ್ಲ. ಒಬ್ಬ ಶಾಸಕರ ಕುರಿತು ಏಕವಚನದಲ್ಲಿ ಮಾತನಾಡೋದು ಸರಿಯಲ್ಲ. ಈ ರೀತಿಯ ವರ್ತನೆಯನ್ನು ರೋಹಿಣಿ ಸಿಂಧೂರಿ ಸರಿಪಡಿಸಿಕೊಳ್ಳಬೇಕು" ಎಂದು ಮಾಜಿ ಸಚಿವ ಎ. ಮಂಜು ವಾಗ್ದಾಳಿ ನಡೆಸಿದರು.
"ರೋಹಿಣಿ ಸಿಂಧೂರಿ ತಮ್ಮ ನಡವಳಿಕೆ ಸರಿ ಮಾಡಿಕೊಂಡರೆ ಅವರು ಓರ್ವ ಉತ್ತಮ ಅಧಿಕಾರಿ ಎಂದ ಅವರು, ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯನ್ನು ನಾನು ಹತ್ತಿರದಿಂದ ಬಲ್ಲೆ. ಅವರ ಆಡಳಿತದ ಸಂದರ್ಭದಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಹೀಗಾಗಿಯೇ ಅವರ ಬಗ್ಗೆ ನಾನು ಮಾತನಾಡುತ್ತಿದ್ದೇನೆ'' ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಮೈಸೂರಿನ ಭೂ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರು ಯಾಕೆ ಈತನಕ ಒಂದೇ ಒಂದು ಎಫ್ಐಆರ್ ಮಾಡಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಎಲ್ಲರೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಆದರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿ ದಂಧೆ ಮಾಡಬಾರದು ಎಂದರು.

"ಎಷ್ಟೋ ಅಧಿಕಾರಿಗಳು ಮೈಸೂರಿಗೆ ಬಂದು ಹೋಗಿದ್ದಾರೆ. ಈವರೆಗೂ ಭೂ ಮಾಫಿಯಾದವರ ವಿರುದ್ಧ ಯಾಕೆ ಎಫ್ಐಆರ್ ಆಗಿಲ್ಲ? ಭೂ ಮಾಫಿಯಾ ಮಾಡಿದ್ದಾರೆ ಎಂದು ಡಿಸಿಯಾಗಿದ್ದ ರೋಹಿಣಿ ಹೇಳಿದ್ದಾರೆ. ಆದರೆ ಅವರ ಮೇಲೆ ಎಫ್ಐಆರ್ ಯಾಕೆ ಮಾಡಿಸಿಲ್ಲ. ಕೇವಲ ಪ್ರಚಾರಕ್ಕೆ ಮಾಡುವುದಲ್ಲ. ಸಾರ್ವಜನಿಕ ಆಸ್ತಿ, ಸರ್ಕಾರದ ಆಸ್ತಿಯ ಬಗ್ಗೆ ಆನ್ ರೆಕಾರ್ಡ್ ಇರುತ್ತದೆ. ನಾನು ಯಾರ ಪರವೂ, ವಿರುದ್ಧವೂ ಮಾತನಾಡಲ್ಲ. ರಾಜಕಾರಣಿಗಳು, ಸಂಬಂಧಿಕರು ರಿಯಲ್ ಎಸ್ಟೇಟ್ನಲ್ಲಿ ಆಸ್ತಿ ಮಾಡುವ ರೀತಿ, ಅಧಿಕಾರಿಗಳ ನೆಂಟರು, ಸಂಬಂಧಿಕರ ಹೆಸರಲ್ಲಿ ಆಸ್ತಿ ಮಾಡಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಹೊರಗೆ ಬರುತ್ತದೆ'' ಎಂದು ಎಚ್ಚರಿಕೆ ನೀಡಿದರು.

Recommended Video
"ಕೆರೆ, ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಬೇಕು ಅಂತ ರೋಹಿಣಿ ಸಿಂಧೂರಿ ಹೇಳಿಕೊಂಡಿದ್ದಾರೆ. ಆದರೆ, ಹಾಸನದಲ್ಲಿ ಕೆರೆ ಉಳುವಿಗಾಗಿ ಜನರೇ ಸ್ವಂತ ಹಣದಲ್ಲಿ ಕೆರೆ ನಿರ್ಮಿಸಲು ಮುಂದಾಗಿದ್ದರು. ಆಗ ರೋಹಿಣಿ ಸಿಂಧೂರಿಯೇ ಹಾಸನದ ಡಿಸಿಯಾಗಿದ್ದರು. ಈ ಸಂಬಂಧ ಜನತೆ ಅಹ್ವಾನ ನೀಡಿದ್ದ ವೇಳೆ ಕೆರೆ ಬಳಿ ಬಂದು ಕಾರಿನಿಂದ ಕೆಳಗೆ ಇಳಿಯಲೇ ಇಲ್ಲ'' ಎಂದು ಟೀಕಿಸಿದರು.












Click it and Unblock the Notifications