ಸಂಪೂರ್ಣ ಸರ್ಕಾರ ನಡೆಸುವ ಸವಾಲು ಸ್ವೀಕರಿಸಿದ್ದೇನೆ- ಎಚ್.ಡಿ ಕುಮಾರಸ್ವಾಮಿ
ಮೈಸೂರು ಅಕ್ಟೋಬರ್ 21: "ತಾಯಿ ಚಾಮುಂಡೇಶ್ವರಿ ಅನುಗ್ರಹದಿಂದ ಹಾಗೂ ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬರುತ್ತೇವೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು(ಅಕ್ಟೋಬರ್ 21) ಬೆಳಗ್ಗೆ ನಾಡ ದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, "ಮುಂದಿನ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು, ಶಾಸಕರು, ಮಾಜಿ ಶಾಸಕರ ಜೊತೆ ತೆರಳಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ತರುವಂತೆ ತಾಯಿ ಚಾಮುಂಡೇಶ್ವರಿಯನ್ನು ಬೇಡಿದ್ದೇನೆ" ಎಂದರು.
Breaking; 2023ರ ಚುನಾವಣೆ, ಮೈಸೂರಿನ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
"ಉಚಿತವಾದ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಸ್ವಾವಲಂಬಿ ಯೋಜನೆ, ಪ್ರತಿಯೊಬ್ಬರಿಗೂ ಸೂರು, ನೀರಾವರಿ ಕಾರ್ಯಕ್ರಮದ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಇದನ್ನೆಲ್ಲಾ ಅನುಷ್ಠಾನಕ್ಕೆ ತರಲು ಬರುವ ಎಲ್ಲಾ ಸವಾಲನ್ನು ಸ್ವೀಕರಿಸಿದ್ದೇನೆ. ಜನರಿಗೆ ಉತ್ತಮ ಬದುಕು ಕಟ್ಟಿಕೊಡುತ್ತೇನೆ" ಎಂದು ಭರವಸೆ ನೀಡಿದರು.
ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆದಿದ್ದೇನೆ
"ಜನರಿಗೆ ಅನುಕೂಲವಾಗುವ ಸರ್ಕಾರ ಅಧಿಕಾರಕ್ಕೆ ತರುತ್ತೇವೆ. ಇದಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುವಂತೆ ಕೋರುತ್ತೇನೆ. ಒಂದು ವೇಳೆ ಈ ಯೋಜನೆಗಳನ್ನು ಅನುಷ್ಠಾನ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
''ಕಳೆದ ಬಾರಿ ಸಿಎಂ ಆಗಿದ್ದಾಗ ಬಹುಮತ ಬರದಿದ್ದರೂ ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆದಿದ್ದೇನೆ. ಸಂಪೂರ್ಣ ಒಂದು ಸರ್ಕಾರ ಹೇಗೆ ನಡೆಸಬಹುದು ಅಂತ ತೋರಿಸುವ ಸವಾಲು ಸ್ವೀಕರಿಸಿದ್ದೇನೆ. ಹೊಂದಾಣಿಕೆ ಅಥವಾ ಮೈತ್ರಿ ಸರ್ಕಾರ ಮಾಡಿದರೆ ಜನಪರ ಯೋಜನೆ ಅನುಷ್ಠಾನ ಮಾಡಲು ಆಗಲ್ಲ. ಆ ಕಾರಣ ಪಕ್ಷ ವಿಸರ್ಜನೆ ಬಗ್ಗೆ ಹೇಳಿದೆ," ಎಂದರು.
ಜೆಡಿಎಸ್ ಪೂರ್ಣ ಪ್ರಮಾಣದ ಸರ್ಕಾರ ರಚಿಸಲಿದೆ
"ಜನಪರ ಯೋಜನೆ ಚಾಚೂ ತಪ್ಪದೆ ಜಾರಿಗೊಳಿಸಲು 123 ಸ್ಥಾನ ಪಡೆಯುವುದು ನನ್ನ ಗುರಿ. ಇಂದಿನ ಜೆಡಿಎಸ್ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಪಂಚರತ್ನ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುತ್ತೇನೆ, ಎಲ್ಲರಿಂದ ಮಾಹಿತಿ ಪಡೆಯುತ್ತೇನೆ. ನಮ್ಮ ಪಕ್ಷದವರೇ ಅಲ್ಲ, ಎಲ್ಲಾ ಪಕ್ಷದವರಲ್ಲಿ ಮೈತ್ರಿ ಸರ್ಕಾರ ಬರುತ್ತದೆ ಎಂಬ ನಿಲುವು ಇದೆ. ಆದರೆ ಜೆಡಿಎಸ್ ಪೂರ್ಣ ಪ್ರಮಾಣದ ಸರ್ಕಾರ ರಚಿಸಲಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಕೆಸರೆರಚಾಟ ತೊಡಗಿದ್ದಾರೆ. ಆದರೆ ಜೆಡಿಎಸ್ ಬಗ್ಗೆ ಎರಡು ಪಕ್ಷದವರು ಚಕಾರ ಎತ್ತುತ್ತಿಲ್ಲ ಏಕೆಂದರೆ ಮುಂದೆ ಮೈತ್ರಿ ಸರ್ಕಾರದ ಅನಿವಾರ್ಯ ಪರಿಸ್ಥಿತಿ ಬಂದರೆ ಅನುಕೂಲ ಆಗುತ್ತದೆಂದು ಜೆಡಿಎಸ್ ಬಗ್ಗೆ ಯಾರೂ ಟೀಕೆ ಮಾಡುತ್ತಿಲ್ಲ" ಎಂದು ಹೇಳಿದರು.
ಮಲ್ಲಿಕಾರ್ಜುನ್ ಖರ್ಗೆ ಗೆಲುವಿಗೆ ಕುಮಾರಸ್ವಾಮಿ ಮೆಚ್ಚುಗೆ
ಮುಂದಿನ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಫರ್ಧೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, "ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಶಾಸಕರ 126 ಸ್ಥಾನ ಗೆಲ್ಲಿಸಿ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ತರಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಆದರೆ 126 ರಲ್ಲಿ ನಿಖಿಲ್ ಅವರು ಇರಬಹುದು," ಎಂದರು.
ಎಐಸಿಸಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಗೆಲುವಿನ ಬಗ್ಗೆ ಮಾತನಾಡಿದ ಅವರು, "ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಕನ್ನಡಿಗರಾದ ನಮಗೆ ಸಂತೋಷದ ಸಂಗತಿ. ಅವರ ಗೆಲುವಿಗೆ ಅಸೂಯೆ ಪಡಬಾರದು. ಆದರೆ ಈ ಮೂಲಕ ಮತ್ತೊಂದು ಪವರ್ ಸೆಂಟರ್ ಆಗುತ್ತದೆ, ಈಗ ಖರ್ಗೆ ಅವರಿಗೆ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಬಿಟ್ಟು ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಅನ್ನುವ ಕುತೂಹಲ ಇದೆ" ಎಂದರು.
ಸರ್ಕಾರ ರಚನೆ ಮಾಡಬೇಕು ಎಂಬುವುದು ಎಲ್ಲರ ಬಯಕೆ
ಮೈಸೂರಿನಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಜೆಡಿಎಸ್ ಕಾರ್ಯಗಾರದಲ್ಲಿ ಮಾತನಾಡಿದ ಕುಮಾರಸ್ವಾಮಿ, "ತಳ ಸಮುದಾಯದರಿಗೂ ದೊರಕಿಸಿಕೊಟ್ಟಿರುವುದು ದೇವೇಗೌಡರು ಮಾತ್ರ. ಈಗಲೂ ಬಹಳಷ್ಟು ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ. ಕಿತ್ತೂರು, ಕಲ್ಯಾಣ ಕರ್ನಾಟಕ ಸೇರಿ ಇಡೀ ಉತ್ತರ ಕರ್ನಾಟಕದಿಂದ ಕನಿಷ್ಠ 35 ಸ್ಥಾನ ಗೆಲ್ಲುತ್ತೇವೆ. ಚುನಾವಣಾ ಪ್ರಚಾರಕ್ಕೆ ಸಾಗಲು ವಾಹನ ಸಿದ್ದವಾಗಿದೆಯಾ ಎಂಬುದಾಗಿ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಕೇಳುತ್ತಿದ್ದಾರೆ. ಪಕ್ಷವೂ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಸ್ವತಂತ್ರ ಸರ್ಕಾರ ರಚನೆ ಮಾಡಬೇಕು ಎಂಬುವುದು ಎಲ್ಲರ ಬಯಕೆ, ಅವರ ಕನಸು ನನಸು ಮಾಡಬೇಕು ಎಂಬುದೇ ನಮ್ಮ ಗುರಿ," ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಹೇಳಿದರು.
ಅಖಾಡಕ್ಕಿಳಿದ ಗೌಡರು; ಭಾವುಕರಾಗಿ ಮಹತ್ವದ ಘೋಷಣೆ ಮಾಡಿದ ಜಿಟಿಡಿ!