ಹುಣಸೂರಲ್ಲಿ ಮತ್ತೆ ಒಂದಾದ ಎಚ್ಡಿಕೆ-ಜಿಟಿ ದೇವೇಗೌಡ?
ಹುಣಸೂರು, ಆಗಸ್ಟ್ 26: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭ ಹಲವು ರಾಜಕೀಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಸುಮಾರು ಎರಡೂವರೆ ವರ್ಷದಿಂದ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಖಾಮುಖಿಯಾಗಿದ್ದಾರೆ.
ಇನ್ನೂ ಎಚ್.ಡಿ.ದೇವೇಗೌಡ ಕಾರ್ಯಕ್ರಮದ ತಮ್ಮ ಭಾಷಣದ ವೇಳೆ ಕುಮಾರಸ್ವಾಮಿಯವರ ಸರಕಾರದ ಕಾರ್ಯಕ್ರಮ, ಹೋರಾಟವನ್ನು ಪ್ರಶಂಸಿಸಿದರು. ನಂತರ ಒಂದೇ ವೇದಿಕೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಜಿ.ಟಿ.ದೇವೇಗೌಡರು ಅಕ್ಕಪಕ್ಕದಲ್ಲಿ ಕುಳಿತು ಚರ್ಚೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಘಟನೆ ಜಿ.ಟಿ.ಡಿ ಮತ್ತೆ ಜೆಡಿಎಸ್ಗೆ ಮರಳುವರೆ ಎಂಬ ಪ್ರಶ್ನೆಯನ್ನೂ ಮೂಡಿಸಿದೆ.
"ಮೂರು ವರ್ಷಗಳಿಂದ ನಾನು ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿಲ್ಲ, ಮಗ ಹರೀಶ್ಗೌಡನಿಗೆ ಟಿಕೆಟ್ ಕೇಳಿಲ್ಲ, ನನ್ನನ್ನು ಮಂತ್ರಿ ಮಾಡಿರೆಂದು ಕೇಳಿಲ್ಲ. ಈ ಹುಣಸೂರಿನ ಜನ ನಮ್ಮನ್ನು ಒಂದೇ ವೇದಿಕೆಗೆ ತಂದು ಸೇರಿಸಿದ್ದಾರೆ " ಎಂದು ಜಿಟಿಡಿ ಭಾವುಕರಾದರು.

ನಂತರ ಕುಮಾರಸ್ವಾಮಿಯವರು ತಮ್ಮ ಮಾತಿನ ವೇಳೆ, " ಜಿ.ಟಿ.ದೇವೇಗೌಡರು ನಮ್ಮ ನಡುವೆ ದೊಡ್ಡ ಮಟ್ಟದ ಬಿರುಕಿಲ್ಲ. ಮೈತ್ರಿ ಸರಕಾರದ ನಂತರ ವೇದಿಕೆಯಲ್ಲಿ ನಾವು ಜತೆಯಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ನಮ್ಮ ನಡುವೆ ಅಷ್ಟು ಸುಲಭವಾಗಿ ಸಂಪರ್ಕ ಕಡಿದುಕೊಳ್ಳಲು ಸಾಧ್ಯವಿಲ್ಲ. ಹುಣಸೂರು ಜಿಟಿಡಿ ಕರ್ಮಭೂಮಿ, ಈ ಕಾರ್ಯಕ್ರಮದ ಮೂಲಕ ಅವರು ನಮಗೆ ಹಲವಾರು ಮಾರ್ಗದರ್ಶನ ನೀಡಿದ್ದಾರೆ. ಅವುಗಳನ್ನು ಚಾಮುಂಡಿ ದೇವಿಯೇ ಅವರ ಬಾಯಿಂದ ಹೇಳಿಸಿದ್ದು, ಅದನ್ನು ಪಾಲಿಸುತ್ತೇನೆ ಎಂದರು.
ಎಚ್ಡಿ ದೇವೇಗೌಡರು ಮತ್ತು ಜಿಟಿಡಿ ಇಬ್ಬರೂ ಎಲ್ಲರನ್ನೂ ಒಂದೇ ರೀತಿ ನೋಡುವ ಗುಣವನ್ನು ಹೊಂದಿದ್ದಾರೆ. ಚಿಕ್ಕಮಾದು ಅವರು ಹುಣಸೂರಿನಿಂದ ಸ್ಪರ್ಧೆ ಮಾಡಲು ಬಯಸಿದ್ದರು. ಆದರೆ ಎಚ್ಡಿ ಕೋಟೆಯಲ್ಲಿ ಶಾಸಕರಾಗಲು ದೇವೇಗೌಡರೇ ಕಾರಣ ಎಂದು ಪ್ರಶಂಸಿಸಿದರು.
ಮುಂಬರುವ ದಸರಾ ಮಹೋತ್ಸವದ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನು ಆಹ್ವಾನಿಸುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಆದರೆ ಸೂಕ್ತ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಿಕಿಶಿ ಮುಖ್ಯಮಂತ್ರಿಯಾಗುವ ಆಸೆ ಹೊಂದಿದ್ದಾರೆ. ಆದರೆ ದೇವರು ಎಲ್ಲವನ್ನೂ ನಿರ್ಧಾರ ಮಾಡುತ್ತಾನೆ. ನಾನು ಡಿಕೆ ಶಿವಕುಮಾರ್ ಭಾಷಣ ಕೇಳಬೇಕೆಂದುಕೊಂಡಿದ್ದೆ, ಆದರೆ ನನಗೆ ಬೇರೆ ಕಾರ್ಯಕ್ರಮವಿದ್ದ ಕಾರಣ ಬೇಗ ಹೊರಡುತ್ತಿದ್ದೇನೆ ಎಂದು ತಿಳಿಸಿ ಹೊರಟರು.
ಮಂಜುನಾಥ್ಗೆ ಬೆಂಬಲ ಸೂಚಿಸಿದ ಡಿಕೆಶಿ
ಕುಮಾರಸ್ವಾಮಿಯವರು ತೆರಳಿದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಭಾಷಣದಲ್ಲಿ ಜಿ.ಡಿ.ಹರೀಶ್ಗೌಡ ಹೆಸರು ಹೇಳುತ್ತಿದ್ದಂತೆ ಜನರು ಹೋ ಎಂದು ಕೂಗಿದರು. ಹರೀಶನನ್ನೇನು ಚುನಾವಣೆಗೆ ನಿಲ್ಲಿಸಲ್ಲ. ದೇವರಾಜ ಅರಸರಿಗೆ ಅಧಿಕಾರ ನೀಡಿದ ಕ್ಷೇತ್ರವಿದು, ಈ ಕ್ಷೇತ್ರದಲ್ಲಿ ಮಂಜುನಾಥ್ ಕೈ ಬಲಪಡಿಸಲು ಬಂದಿದ್ದೇನೆ ಎಂದರು.
ಮುಂದುವರಿಸಿ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಎಸ್ಎಂ ಕೃಷ್ಣ ಕಾಂಗ್ರೆಸ್ನಲ್ಲಿ ಈಗಾಗಲೇ 5 ವರ್ಷ ಮುಖ್ಯಮಂತ್ರಿಯಾಗಿದ್ದರು. ಇದೀಗ ಮತ್ತೆ ನಮ್ಮ ಸಮುದಾಯಕ್ಕೆ ಅವಕಾಶ ಒದಗಿ ಬಂದಿದೆ. ಎಲ್ಲರೂ ಬೆಂಬಲಿಸಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿಯಾಗುವ ಆಸೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ವಿಶ್ವನಾಥ್-ಡಿಕೆಶಿ ಚರ್ಚೆ
ಸಭೆಯಲ್ಲಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ರ ಬಳಿಗೆ ತೆರಳಿದ ಡಿಕೆಶಿಯವರು ಬಹಳ ಹೊತ್ತು ಗಹನವಾಗಿ ಚರ್ಚಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಸಿದ್ದರಾಮಯ್ಯ ಅವರನ್ನು ಕಟು ಪದಗಳಿಂದ ಸದಾ ಟೀಕಿಸುವ ವಿಶ್ವನಾಥ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿದ್ದಲ್ಲದೆ, ಅವರೊಂದಿಗೆ ಭೋಜನದಲ್ಲಿ ಪಾಲ್ಗೊಂಡಿದ್ದು ಕೂಡಾ ಕುತೂಹಲ ಮೂಡಿಸಿದೆ.












Click it and Unblock the Notifications