ಮೈಸೂರಿನಲ್ಲಿ ಕಡಿಮೆ ಮಳೆ: ರೈತರಲ್ಲಿ ಆತಂಕದ ಛಾಯೆ
ಮೈಸೂರು, ಜುಲೈ 23: ರಾಜ್ಯದ ಹಲವೆಡೆ ನಾಲ್ಕೈದು ದಿನಗಳಿಂದ ನಿರಂತರ ಮಳೆಯ ವರದಿಯಾಗುತ್ತಿದ್ದರೆ, ಮೈಸೂರಿನಲ್ಲಿ ಮಾತ್ರ ಮಳೆಯ ಪ್ರಮಾಣ ಗಣನೀಯವಾಗಿ ಕ್ಷೀಣಿಸಿದೆ. ಇದು ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಲಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಕ್ಷೇತ್ರದ ಮುಂಗಾರು ಹಂಗಾಮಿನ ಗುರಿಯಲ್ಲಿ ಅರ್ಧದಷ್ಟು ಮಾತ್ರ ಈಗ ಬಿತ್ತನೆಯಾಗಿದೆ. ಸದ್ಯ ಬೆಳವಣಿಗೆ ಹಂತದಲ್ಲಿರುವ ಬೆಳೆಗೆ ಒಮ್ಮೆಯಾದರೂ ಹದವಾಗುವಷ್ಟು ಮಳೆಯಾಗಲೇಬೇಕು. ಇಲ್ಲವಾದರೆ ಈಗಾಗಲೇ ಬಿತ್ತಿದ ಬೆಳೆ ರೈತರ ಕೈ ಸೇರದೆ ಮಣ್ಣು ಪಾಲಾಗುವ ಸಾಧ್ಯತೆಯಿರುವುದರಿಂದ ಭೀತಿ ಹೆಚ್ಚಾಗಿದೆ.
ಮಡಿಕೇರಿಯಲ್ಲಿ ಆಶಾಭಾವ ಮೂಡಿಸಿದೆ ಮುಂಗಾರು ಮಳೆ
ಸಾಲಸೋಲ ಮಾಡಿ ಬಿತ್ತಿರುವ ರೈತರು ಮಳೆ ಯಾವಾಗ ಬರುತ್ತದೆಯೋ ಎಂಬ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಇಳಿಕೆಯಾಗಿದೆ. ಪ್ರಸ್ತುತ ಜನವರಿಯಿಂದ ಈವರೆಗೆ ವಾಡಿಕೆಗಿಂತ ಶೇ.22ರಷ್ಟು ಕೊರತೆಯಾಗಿದೆ. ಈವರೆಗೂ ವಾಡಿಕೆಗಿಂತ ಒಟ್ಟು 374 ಮಿ.ಮೀ ಮಳೆಯಾಗಬೇಕಿತ್ತು. ಆದರೆ 219 ಮಿ.ಮಿ ಮಳೆಯಾಗಿದ್ದು, ಕೊರತೆ ಕಂಡು ಬರುತ್ತಿದೆ. ಕಳೆದ ವರ್ಷ ಈ ಅವಧಿಯಲ್ಲಿ 505 ಮಿ.ಮೀ ಮಳೆಯಾಗಿದ್ದು, ಭಾರಿ ಪ್ರಮಾಣದ ಏರಿಳಿತ ಉಂಟಾಗಿದೆ.
ಮಳೆ ಕೊರತೆಯಿಂದಾಗಿ ಅರ್ಧದಷ್ಟು ಬಿತ್ತನೆಯಾಗಿಲ್ಲ. ಒಮ್ಮೆಯಾದರೂ ಸರಿಯಾಗಿ ಮಳೆಯಾಗಬೇಕು, ಅದು ಸಹ ಸಮರ್ಪಕವಾಗಿ ಆಗಿಲ್ಲ. ಹೆಚ್ಚು ಪ್ರದೇಶದಲ್ಲಿ ಈ ಭಾಗ ತಂಬಾಕು ಬೆಳೆಯಲಾಗಿದೆ. ಅದೂ ಮಳೆಯಿಲ್ಲದೆ ಸರಿಯಾಗಿ ಬೆಳೆಯಾಗಿಲ್ಲ. ರೈತರು ಕೆರೆ, ಹಳ್ಳ - ಕೊಳ್ಳದ ಅಕ್ಕಪಕ್ಕದ ಜಮೀನಿಗೆ ಡೀಸೆಲ್ ಮೋಟರ್ ಸಹಾಯದಿಂದ ನೀರು ಹರಿಸುವ ವಿಫಲ ಯತ್ನ ನಡೆಸುತ್ತಿದ್ದಾರೆ. ಆದರೆ ಮಳೆಯೇ ಇಲ್ಲದ ಕಾರಣ ಹಳ್ಳ-ಕೊಳ್ಳದಲ್ಲಿ ನೀರು ಖಾಲಿಯಾಗುತ್ತಿದೆ. ಸಾಕಷ್ಟು ನೀರು ಲಭ್ಯವಾದ ಜಮೀನಿನಲ್ಲಿರುವ ತಂಬಾಕು ಮಾತ್ರವೇ ಉತ್ತಮವಾಗಿ ಬೆಳೆಯುತ್ತಿದ್ದು ಮಿಕ್ಕ ಜಮೀನಿನ ಪರಿಸ್ಥಿತಿ ಹೇಳತೀರದಾಗಿದೆ.
ಮಡಿಕೇರಿಯಲ್ಲಿ ಭಾರೀ ಮಳೆ; ನಾಪೋಕ್ಲು-ಭಾಗಮಂಡಲ ರಸ್ತೆ ಮೇಲೆ ನೀರು
ಜೂನ್ ತಿಂಗಳಿನಿಂದ ಮುಂಗಾರು ಹಂಗಾಮು ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆ ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ತಂಬಾಕು, ಹತ್ತಿ ಬಿತ್ತನೆ ಕಾರ್ಯ ಏಪ್ರಿಲ್ - ಮೇನಲ್ಲಿಯೇ ಆರಂಭವಾಗುತ್ತದೆ. ಈ ವರ್ಷ ಮಳೆಯ ಕೊರತೆ ಹೆಚ್ಚಾದ ಕಾರಣ ಮುಂಗಾರು ಹಂಗಾಮು ಬೆಳೆ ಕೈಕೊಟ್ಟಿದೆ. ಮೈಸೂರು ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಜಾನುವಾರಿಗೆ ಮೇವಿನ ಕೊರತೆ ಇಲ್ಲದಿದ್ದರೂ ಕೆಲ ತಿಂಗಳುಗಳಲ್ಲೇ ಇದು ದೊಡ್ಡ ಸಮಸ್ಯೆಯಾಗುವಲ್ಲಿ ಸಂಶಯವಿಲ್ಲ.