ರಾಜವಂಶಸ್ಥರಿಗೆ ಮೋದಿ ಕಾರ್ಯಕ್ರಮದಲ್ಲಿ ಕೊನೆಗೂ ಸಿಕ್ತು ಅವಕಾಶ
ಮೈಸೂರು, ಜೂ. 19: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಅಂತಾರಾಷ್ಟ್ರೀಯ ಯೋಗ ದಿನಾಚರಣಗೆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವಂತೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಜಿಲ್ಲಾಡಳಿತ ಭಾನುವಾರ ಅಧಿಕೃತವಾಗಿ ಆಹ್ವಾನ ನೀಡಿದೆ.
ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್ ಎ ರಾಮದಾಸ್, ಎಲ್ ನಾಗೇಂದ್ರ ಹಾಗೂ ಮೇಯರ್ ಸುನಂದಾ ಪಾಲನೇತ್ರ, ಡಿಸಿ ಡಾ. ಬಗಾದಿ ಗೌತಮ್ ಅರಮನೆಗೆ ತೆರಳಿ ಸಂಪ್ರದಾಯದಂತೆ ರಾಜವಂಶಸ್ಥರನ್ನು ಆಹ್ವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಮೈಸೂರು ಪ್ರವಾಸದ ಡಿಟೈಲ್ಸ್ ಇಲ್ಲಿದೆ
ಇತ್ತೀಚೆಗೆ ಸಂಸದ ಪ್ರತಾಪ್ ಸಿಂಹ ಅವರು, ಪ್ರಧಾನಿ ಯೋಗ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ ಇದೆ ಎಂದು ಹೇಳಿಕೆ ನೀಡಿದ್ದರು. ಅರಮನೆ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮೈಸೂರು ರಾಜವಂಶಸ್ಥರಿಗೆ ಅವಕಾಶ ಇಲ್ಲದಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆಧುನಿಕ ಯೋಗ ಜಗದ್ವಿಖ್ಯಾತಿಯಾಗಲು ಮೈಸೂರು ಅರಸರ ಕೊಡುಗೆ ಅಪಾರ. ಅರಮನೆ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಜವಂಶಸ್ಥರನ್ನು ಆಹ್ವಾನಿಸದಿರುವುದು ಸರಿಯಲ್ಲ, ನಮಗೆ ಯದುವೀರ್ ಇಲ್ಲದ ಯೋಗದಿನಾಚರಣೆ ಕಾರ್ಯಕ್ರಮ ಬೇಡ ಎಂದು ಮೈಸೂರಿಗರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಜನರ ಪ್ರತಿರೋಧಕ್ಕೆ ಮಣಿದಿರುವ ಜನಪ್ರತಿನಿಧಿಗಳು ರಾಜವಂಶಸ್ಥರಿಗೆ ವೇದಿಕೆಯಲ್ಲಿ ಇರಲು ಅವಕಾಶ ಕಲ್ಪಿಸಿದ್ದಾರೆ. ಈ ಸಂಬಂಧ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಜಿಲ್ಲಾಡಳಿತದಿಂದ ಅಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನ ನೀಡಲಾಯಿತು. ಯೋಗ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ರಾಜವಂಶಸ್ಥರ ಜೊತೆಗೆ ಅರಮನೆಯಲ್ಲಿ ಉಪಾಹಾರ ಸೇವಿಸಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಪ್ರಧಾನಿಗಾಗಿ ಶಾಲೆ ಕಾಲೇಜುಗಳಿಗೆ ರಜೆ ಏಕೆ? ವಿದ್ಯಾರ್ಥಿಗಳೇನು ಭಯೋತ್ಪಾದಕರೆ?
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುತ್ತಿರುವ ಯೋಗ ದಿನ ಕಾರ್ಯಕ್ರಮದಲ್ಲಿ ಯೋಗ ಮಾಡಲು 12 ಸಾವಿರ ಯೋಗಪಟುಗಳು ದಾಖಲಾತಿ ಮಾಡಿಕೊಂಡಿದ್ದಾರೆ. ಅರಮನೆ ಹಿಂಭಾಗ ಮತ್ತು ಮುಂಭಾಗ ಸೇರಿ ಆವರಣದಲ್ಲಿ 15 ಸಾವಿರ ಜನರಿಗೆ ಯೋಗ ಮಾಡಲು ಅವಕಾಶ ಮಾಡಿಕೊಡಲಾಗಿದೆ.
"ಜೂ.21 ರಂದು ಮೈಸೂರು ಅರಮನೆ ಆವರಣದಲ್ಲಿ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಿರುವ ಹಿನ್ನೆಲೆಯಲ್ಲಿ, ಪೂರ್ವಭಾವಿ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಜೂ.19ರಿಂದ ಜೂ.21ರ ಮಧ್ಯಾಹ್ನ 12ರವರೆಗೆ ಅರಮನೆಯ ಪ್ರವೇಶವನ್ನು ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಜೂನ್ 22ರವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ," ಎಂದು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.