ಬಿಎಸ್ಎನ್ಎಲ್ ಗ್ರಾಹಕರಿಗೆ ಶುಭ ಸುದ್ದಿ, ಸಿಗಲಿದೆ ಹೈ ಸ್ಪೀಡ್ ಇಂಟರ್ನೆಟ್
ಮೈಸೂರು, ಜೂನ್ 2 : ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್)ನ ಮೊಬೈಲ್ ಡೇಟಾ ಸೇವೆ ಉನ್ನತೀಕರಣಗೊಳ್ಳುತ್ತಿದ್ದು 4ಜಿ ಸೇವೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಎಸ್ಎನ್ಎಲ್ ಕರ್ನಾಟಕ ವೃತ್ತದ ಮುಖ್ಯ ಮಹಾಪ್ರಬಂಧಕ ಆರ್.ಮಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ಎನ್ಎಲ್ ಮೈಸೂರು ವಿಭಾಗದಲ್ಲಿ 3ಜಿ ಪ್ಲಸ್ ಸೇವೆ ಆರಂಭಿಸಿದ್ದು, ಸದ್ಯದಲ್ಲಿಯೇ 4ಜಿ ಸೇವೆ ನೀಡುವುದಾಗಿ ಹೇಳಿದರು.

ಖಾಸಗಿ ದೂರಸಂಪರ್ಕ ಸಂಸ್ಥೆಗಳು ನೀಡುವ 4ಜಿ ಸೇವೆಯನ್ನು ಬಳಸುವವರ ಸಂಖ್ಯೆ ಹೆಚ್ಚಾದರೆ ಅದರ ವೇಗವೂ ಕಡಿಮೆಯಾಗುತ್ತದೆ. ಆದರೆ 3ಜಿ ಪ್ಲಸ್ನಲ್ಲಿಯೇ ಅತ್ಯುತ್ತಮ ಸೇವೆ ನೀಡುತ್ತಿರುವ ಬಿಎಸ್ಎನ್ಎಲ್ ಇತರ ಎಲ್ಲಾ ಖಾಸಗಿ ಕಂಪನಿಗಿಂತಲೂ ಉತ್ತಮ ಗುಣಮಟ್ಟದ ಸೇವೆಯ ಜೊತೆಗೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ ಎಂದು ತಿಳಿಸಿದರು.
112 ಮೊಬೈಲ್ ನೆಟ್ವರ್ಕ್ ಕೇಂದ್ರ
ಬಿಎಸ್ಎನ್ಎಲ್ ಮೈಸೂರು ಸಂಸ್ಥೆಯು ಅತ್ಯುತ್ತಮ ವೇಗದ 112 ಮೊಬೈಲ್ ನೆಟ್ವರ್ಕ್ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿ ಕೊಂಡಿದೆ. ಈ ಪೈಕಿ ಈಗಾಗಲೇ 70 ನೆಟ್ ವರ್ಕ್ ಕೇಂದ್ರಗಳ ಕೆಲಸ ಪೂರ್ಣಗೊಂಡಿದೆ. ಅಂತೆಯೇ ದೂರ ಸಂಪರ್ಕ ಸಚಿವಾಲಯಕ್ಕೆ ಸ್ಪೆಕ್ಟ್ರಂ ದೊರೆತ ಬಳಿಕ 4ಜಿಯನ್ನು ಕೂಡ ಪರಿಚಯಿಸಲಾಗುವುದು. ಇದಕ್ಕೆ ಪೂರಕವಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ಒಂದು ಕೇಂದ್ರ ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇಂಟರ್ನೆಟ್ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ತಾಮ್ರದ ವೈಯರ್ಗಳನ್ನು ತೆಗೆದು ಫೈಬರ್ ಕೇಬಲ್ ಅಳವಡಿಸಲಾಗುತ್ತಿದೆ. ಇದರಿಂದ ಇಂಟರ್ನೆಟ್ ವೇಗ ಹೆಚ್ಚಾಗಲಿದೆ. ಇದೇ ಉದ್ದೇಶದಿಂದ ರಾಜ್ಯದಲ್ಲಿ 42,358 ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ಕರ್ನಾಟಕ ಟೆಲಿಕಾಂ ವೃತ್ತದ ವ್ಯಾಪ್ತಿಯಲ್ಲಿ 347 ನಗರ, 21,992 ಗ್ರಾಮಗಳಿವೆ. ಕರ್ನಾಟಕದಲ್ಲಿ 10.5 ಲಕ್ಷ ಲ್ಯಾಂಡ್ಲೈನ್, 3.2 ಲಕ್ಷ ಬ್ರಾಡ್ಬ್ಯಾಂಡ್, 72 ಲಕ್ಷ ಮೊಬೈಲ್ ಸಂಪರ್ಕಗಳಿವೆ. ದೇಶದಲ್ಲೇ ಅತಿ ಹೆಚ್ಚು 42,358 ಹೈ ಸ್ಪೀಡ್ ಬ್ರಾಡ್ಬ್ಯಾಂಡ್ನಡಿ ಫೈಬರ್ ಟು ದ ಹೋಮ್ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದೆ. ಬಿಎಸ್ಎನ್ಎಲ್ ಕರ್ನಾಟಕ ವೃತ್ತ ಎಫ್ಬಿ ಪ್ಲಾಟಿನಂ, ಗೋಲ್ಡ್ ಬಿಸಿನೆಸ್ ವಿಭಾಗದಲ್ಲಿ 35 ಕೋಟಿ ರೂ.ಗಳ ಲಾಭ ದಾಖಲಿಸಿದೆ ಎಂದು ಮಾಹಿತಿ ನೀಡಿದರು.
2 ಸಾವಿರ ಕೋಟಿ ರೂ. ಆದಾಯ
ಬಿಎಸ್ಎನ್ಎಲ್ ಕರ್ನಾಟಕ ವೃತ್ತ 2017-18ನೇ ಸಾಲಿನಲ್ಲಿ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.14ರಷ್ಟು ಆದಾಯ ಇಳಿಕೆಯಾಗಿದೆ. ಜಿಯೋ ಹೊರತುಪಡಿಸಿ ಉಳಿದ ಟೆಲಿಕಾಂ ಕಂಪನಿಗಳ ಆದಾಯದಲ್ಲಿಯೂ ಇಳಿಕೆಯಾಗಿದೆ. ತೀವ್ರ ಪೈಪೋಟಿಯ ನಡುವೆಯೂ ಉಳಿದ ವೃತ್ತಗಳಿಗೆ ಹೋಲಿಸಿದರೆ ಬಿಎಸ್ಎನ್ಎಲ್ ಕರ್ನಾಟಕ ವೃತ್ತ ಉತ್ತಮ ಸಾಧನೆ ಮಾಡಿದೆ. ವಿಎಎಸ್ (ವ್ಯಾಲ್ಯೂ ಏಡೆಡ್ ಸರ್ವೀಸ್) ಆದಾಯದಲ್ಲಿ ಕರ್ನಾಟಕ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿದೆ ಎಂದರು.












Click it and Unblock the Notifications