ಒಡೆಯರ್ ಸಾವಿನ ಮುನ್ನ ಅಪಶಕುನದ ಸಂಕೇತ?
ಮೈಸೂರು, ಡಿ 11: ಮೈಸೂರು ರಾಜಮನೆತನದ ಕೊನೆಯ ಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಮುನ್ನ ಅಪಶಕುನದ ಸಂಕೇತಗಳು ಎದುರಾಗಿದ್ದವು ಎನ್ನುವ ಸುದ್ದಿ ಈಗ ಚಾಲ್ತಿಯಲ್ಲಿದೆ.
ಶ್ರೀಕಂಠದತ್ತ ಒಡೆಯರ್ ಸಾವಿನ ಎರಡು ದಿನದ ಮುನ್ನ ಮೈಸೂರು ಚಾಮುಂಡೇಶ್ವರಿ ದೇವಾಲಯದ ಮಾಜಿ ಪ್ರಧಾನ ಅರ್ಚಕರು ನಿಧನ ಹೊಂದಿದ್ದರು. ಇದು ಮೈಸೂರು ರಾಜಮನೆತನಕ್ಕೆ ಎದುರಾಗಹಬುದಾದ ಅಪಶಕುನದ ಸಂಕೇತವಾಗಿತ್ತು ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ.
ಇದಲ್ಲದೇ, ಒಡೆಯರ್ ಅವರಿಗೆ ಸರ್ಪದೋಷವಿತ್ತು. ಅದಕ್ಕೆ ಸರಿಯಾದ ಸಮಯಕ್ಕೆ ಅವರು ಪರಿಹಾರ ಕ್ರಮ ಕೈಗೊಂಡಿದ್ದರೆ ಅವರಿಗೆ ಅಕಾಲಿಕ ಸಾವು ಬರುತ್ತಿರಲಿಲ್ಲ ಎಂದು ಬೆಂಗಳೂರು - ಮೈಸೂರು ರಸ್ತೆಯ ಮುಕ್ತಿನಾಗ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗೇಂದ್ರ ದೀಕ್ಷಿತ್ ಮಂಗಳವಾರ (ಡಿ 11) ಅಭಿಪ್ರಾಯ ಪಟ್ಟಿದ್ದರು. (ಶ್ರೀಕಂಠದತ್ತ ಒಡೆಯರ್ ಉತ್ತರಾಧಿಕಾರಿ ಯಾರು?)
ಕಳೆದ ವಿಜಯದಶಮಿಯ ಜಂಬೂ ಸವಾರಿ ಮೆರವಣೆಗೆ ಸಮಯದಲ್ಲಿ ಅಂಬಾರಿ ಮೇಲೆ ಮಳೆ ಸುರಿದಿತ್ತು, ಚಾಮುಂಡೇಶ್ವರಿಯನ್ನು ಹೊರುವ ಅಂಬಾರಿ ಕೂಡಾ ಆನೆಯ ಮೇಲೆ ಸರಿಯಾಗಿ ಕೂತಿರಲಿಲ್ಲ. ಇದೂ ಒಂದು ಅಪಶಕುನದ ಸಂಕೇತವಾಗಿತ್ತು ಎನ್ನುವುದು ಮೈಸೂರು ಭಾಗದ ಜನ ಆಡಿಕೊಳ್ಳುತ್ತಿರುವ ಮಾತು. [ಮೈಸೂರಿನ ಆಳರಸರ ಮಧುವನ]
ಒಡೆಯರ್ ಅವರಿಗೆ ಕಾರುಗಳ ಕ್ರೇಜ್ ಇತ್ತು. ಸುಮಾರು ಹನ್ನೆರಡು ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದರು. ಎಲ್ಲಾ ಕಾರುಗಳ ಮೇಲೆ ಗಂಡಭೇರುಂಡದ ಲಾಂಛನವಿದೆ. ಕಳೆದ ದಸರಾ ಉತ್ಸವದ ಸಮಯದಲ್ಲಿ ಒಡೆಯರ್ ಅವರು ಸಂಪ್ರದಾಯಕ್ಕೆ ವಿರುದ್ದವಾಗಿ ಬೆಳ್ಳಿರಥ ಏರವು ಬದಲು BMW ಕಾರು ಏರಿದ್ದರು. (ಒಡೆಯರ್ ಅವರಿಗೆ ಚಿತ್ರ ನಮನ)
ವಿಜಯದಶಮಿಯ ದಿನದಂದು ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಅರಮನೆಯಿಂದ ಬನ್ನಿಮರದ ಬಳಿಗೆ ಬೆಳ್ಳಿ ರಥದ ಮೂಲಕ ತೆರಳುವುದು ಸಂಪ್ರದಾಯ. ಇದುವರೆಗೂ ಸಂಪ್ರದಾಯ ಮುರಿಯದ ಒಡೆಯರ್ ಈ ಬಾರಿ ಮಾತ್ರ ರಥ ಏರದೇ ಕಾರಿನಲ್ಲಿ ಬಂದು ಪೂಜೆ ಸಲ್ಲಿಸಿ ಕಾರಿನಲ್ಲೇ ಅರಮನೆಗೆ ವಾಪಸಾಗಿದ್ದರು.
ಬೆಳ್ಳಿರಥವನ್ನು ಅರಮನೆಯ ಪ್ರಾಂಗಣದಲ್ಲೇ ಬಿಡಲಾಗಿತ್ತು. ಇದೂ ಒಂದು ಅಪಶಕುನದ ಸಂಕೇತವಾಗಿತ್ತು ಎನ್ನುವುದು ಅರಮನೆ ಆವರಣದಲ್ಲಿ ಕೇಳಿ ಬರುತ್ತಿರುವ ಮಾತು.
ಕಳೆದ ಬಾರಿಯ ದಸರಾ ಸಮಯದಲ್ಲಿ ಬೆಳ್ಳಿ ರಥ ಏರಲಾಗದೇ ಒಡೆಯರ್ ಮುಜುಗರ ಎದುರಿಸ ಬೇಕಾಗಿತ್ತು. ಹಾಗಾಗಿ ಅವರು ರಥವನ್ನು ಏರಲಿಲ್ಲ ಎನ್ನುವ ಮಾತನ್ನೂ ಅರಮನೆ ಸಿಬ್ಬಂದಿಗಳು ಆಡಿಕೊಳ್ಳುತ್ತಿದ್ದಾರೆ.