ಎನ್ಸಿಪಿ-ಕಾಂಗ್ರೆಸ್ ವಿಲೀನ ಸಾಧ್ಯತೆ ತಳ್ಳಿ ಹಾಕಿದ ಪವಾರ್
ಮುಂಬೈ, ಮೇ 02: ಕಾಂಗ್ರೆಸ್ ಜತೆ ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ವಿಲೀನ ಸಾಧ್ಯತೆ ಸುದ್ದಿಯನ್ನು ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರು ತಳ್ಳಿ ಹಾಕಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದ ಬಗ್ಗೆ ಆತ್ಮಾವಲೋಕನ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ಎನ್ಸಿಪಿ-ಕಾಂಗ್ರೆಸ್ ವಿಲೀನ ಸುದ್ದಿ ಎಲ್ಲವೂ ಸುಳ್ಳು, ಇದೆಲ್ಲವೂ ಗಾಳಿಸುದ್ದಿ, ಇಂಥ ಸಾಧ್ಯತೆಗಳ ಬಗ್ಗೆ ಬರುವ ಊಹಾಪೋಹಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.
ಬಿಜೆಪಿ ಹೊಡೆತಕ್ಕೆ ಕಂಗಾಲಾದ ಎನ್ಸಿಪಿ, ಕಾಂಗ್ರೆಸ್ನೊಂದಿಗೆ ವಿಲೀನ?
'ದೆಹಲಿಯಲ್ಲಾಗಲಿ, ಮುಂಬೈಯಲ್ಲಾಗಲಿ ಈ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ, ಇಂಥ ಊಹಾಪೋಹದಿಂದ ಆಘಾತವಾಗಿದೆ. ಹೀಗಾಗಿ, ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದು, ಈ ರೀತಿ ಯಾವುದೇ ಚರ್ಚೆ ಅಗತ್ಯವಿಲ್ಲ, ಯಾವುದೇ ಪಕ್ಷದ ಜೊತೆ ವಿಲೀನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇಲ್ಲ, ನಮ್ಮ ರಾಜ್ಯದಲ್ಲಿ ನಾವು ಸ್ವತಂತ್ರವಾಗಿದ್ದು, ಅದೇ ಸ್ಥಿತಿಯಲ್ಲಿ ಮುಂದುವರೆಯುತ್ತೇವೆ' ಎಂದಿದ್ದಾರೆ.
ಎನ್ ಸಿಪಿಯ ರಾಜ್ಯ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಮಾತನಾಡಿ, ಇದೆಲ್ಲವೂ ವಿಪಕ್ಷಗಳ ಕುತಂತ್ರ, ನಮ್ಮ ಪಕ್ಷ ಒಗ್ಗಟ್ಟಿನಿಂದ ಕೂಡಿದ್ದು, ವಿಲೀನದ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಪವಾರ್ ಅವರು ಭೇಟಿ ಮಾಡಿದ ಬಳಿಕ, ಎರಡು ಪಕ್ಷಗಳ ವಿಲೀನದ ಬಗ್ಗೆ ಸುದ್ದಿ ಹಬ್ಬಿತ್ತು. 543 ಸದಸ್ಯರ ಲೋಕಸಭೆಯಲ್ಲಿ ಕಾಂಗ್ರೆಸ್ 52 ಸಂಸದರನ್ನು ಮಾತ್ರ ಹೊಂದಿದೆ. ವಿರೋಧ ಪಕ್ಷದ ನಾಯಕತ್ವ ವಹಿಸಲು ಕನಿಷ್ಠ 55 ಸದಸ್ಯರ ಬೆಂಬಲವಾದರೂ ಬೇಕಾಗುತ್ತದೆ.