Video: ಎಕ್ಸ್ಪ್ರೆಸ್ವೇನಲ್ಲಿ ಟೋಲ್ ತಪ್ಪಿಸಲು ಸರ್ವೀಸ್ ರಸ್ತೆಗೆ ಇಳಿದ KSRTC ಬಸ್, ಚಾಲಕನಿಗೆ ನೆಟ್ಟಿಗರ ತರಾಟೆ
ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ (Mysuru-Bengaluru Expressway) ಉದ್ಘಾಟನೆಗೊಂಡ ನಂತರ ಟೋಲ್ ಶುಲ್ಕ ತಪ್ಪಿಸಲು ವಾಹನಗಳ ಸಂಚಾರ ಮಾರ್ಗ ಬದಲಾವಣೆ ಘಟನೆಗಳು ಸಾಕಷ್ಟು ಕೇಳಿ ಬರುತ್ತಲೇ ಇವೆ. ಖಾಸಗಿ ವಾಹನ ಸವಾರರು ಟೋಲ್ ಶುಲ್ಕ ಪಾವತಿಯಿಂದ ತಪ್ಪಿಸಿಕೊಳ್ಳಲು ಸರ್ವೀಸ್ ರಸ್ತೆ ಅನುರಿಸಿದಂತೆ KSRTC ಬಸ್ ಸಹ ಸರ್ವೀಸ್ ರಸ್ತೆಯಲ್ಲಿ ಬಂದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಬಸ್ ಚಾಲಕನನ್ನು ತರಾಟೆ ತೆಗೆದುಕೊಂಡಿದ್ದು, ಇತರರಿಗೆ ಅಪಾಯ ತಂದೊಡ್ಡುವ ವರ್ತನೆ ತೋರಿದ ಬಸ್ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಎರಡು ನಗರಗಳ ಮಧ್ಯೆ ಸುಗಮ, ಸುಧಾರಿತ ಸಾರಿಗೆ ಸೇವೆ ಒದಗಿಸುತ್ತಿದೆ. ಈ ಮಾರ್ಗದಲ್ಲಿ ಅದೆಷ್ಟೇ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ತಂದರೂ ಸಹಿತ ನಿಯಮ ಉಲ್ಲಂಘನೆ ಸಾಮಾನ್ಯ ಎಂಬಂತಾಗಿದೆ. ಬೆಂಗಳೂರಿನಿಂದ ಮಂಡ್ಯಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಬಿಡದಿ ಬಳಿಕ ಹೆದ್ದಾರಿ ಬಿಟ್ಟು ಸರ್ವೀಸ್ ರಸ್ತೆಗೆ ತೆರಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಸ್ ಚಾಲಕ ಎಕ್ಸ್ಪ್ರೆಸ್ ವೇ ಟೋಲ್ ಶುಲ್ಕ ತಪ್ಪಿಸಲು ಹೀಗೆ ಮಾಡಿದ್ದಾರೆ ಎಂದು ಶಿರ್ಷಿಕೆ ಬರೆಯಲಾಗಿದೆ. ಈ ಘಟನೆ ಭಾನುವಾರ ಸಂಜೆ 4.30ರ ಸುಮಾರಿಗೆ ನಡೆದಿದೆ ಎನ್ನಲಾಗಿದೆ.

KA 11 F0464 ಸಂಖ್ಯೆಯ KSRTC ಬಸ್ ಹೆದ್ದಾರಿ ಮಾರ್ಗ ಬಿಟ್ಟು ಸರ್ವೀಸ್ ರಸ್ತೆಗೆ ಬರುವುದನ್ನು ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಜೊತೆಗೆ ಬಸ್ ರಿವರ್ಸ್ ತೆಗೆಸಿ ಮರಳಿ ಎಕ್ಸ್ಪ್ರೆಸ್ವೇ ಮೂಲಕ ಬರುವಂತೆ ಆಗ್ರಹಿಸುತ್ತಿರುವುದು ವಿಡಿಯೋದಲ್ಲಿ ಗೊತ್ತಾಗುತ್ತದೆ. 'ಈ ರೀತಿ ಟೋಲ್ ಶುಲ್ಕ ತಪ್ಪಿಸಲು ಸಾರ್ವಜನಿಕ ಬಸ್ಗೆ ಅನುಮತಿ ಇದಿಯೇ ಅಥವಾ ಜನಸಾಮಾನ್ಯರ ವಾಹನಗಳಿಗೂ ಅವಕಾಶ ಇದಿಯೇ' ಎಂದು ಪ್ರಶ್ನಿಸಲಾಗಿದೆ.
ಬಸ್ ಚಾಲಕನಿಗೆ ನೆಟ್ಟಿಗರ ತರಾಟೆ
ಸ್ಥಳೀಯರು ಬಸ್ ಮಾರ್ಗ ಬದಲಾವಣೆಗೆ ಕಿಡಿ ಕಾರುತ್ತಿದ್ದಂತೆ ಎಚ್ಚೆತ್ತ ಚಾಲಕ ಎಕ್ಸ್ಪ್ರೆಸ್ವೇ ಮಾರ್ಗ ಅನುರಿಸಿದ್ದಾರೆ. ನಿಯಮ ಎಲ್ಲರಿಗೂ ಒಂದೆ ಆಗಿರಬೇಕು. ಬಸ್ ಚಾಲಕನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ. ವೈರಲ್ ಪೊಸ್ಟ್ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಬ್ಬರು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ, "ಇಂತಹ ಅನೇಕ ಘಟನೆಗಳಿಂದ ಸರ್ವಿಸ್ ರಸ್ತೆಯನ್ನು ಬಳಸುವವರಿಗೆ ಮತ್ತು ಹೆದ್ದಾರಿಯಿಂದ ನಿರ್ಗಮಿಸುವವರಿಗೆ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿವೆ. ಇದು ಎಕ್ಸ್ಪ್ರೆಸ್ವೇನಿಂದ ಕೇವಲ ನಿರ್ಗಮನ ಮಾರ್ಗವಾಗಿರಬೇಕಿತ್ತು, ಆದರೆ ಅನೇಕರು ಟೋಲ್ ತಪ್ಪಿಸಲು ಮತ್ತು ಹೆದ್ದಾರಿಯನ್ನು ಪ್ರವೇಶಿಸಲು ಈ ಮಾರ್ಗವನ್ನು ಅನುಸರಿಸುತ್ತಿದ್ದಾರೆ' ಎಂದು ವಿವರಿಸಿದ್ದಾರೆ.
ಇನ್ನೊಬ್ಬರು 'ಇತರ ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡ್ಡಬಹುದಾದ ಈ ಘಟನೆಯಲ್ಲಿ ಬಸ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ?' ಎಂದು ಕೆಎಸ್ಆರ್ ಟಿಸಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಮೂರನೇಯವರು 'ಇದು ನೋಡಲು ಹುಚ್ಚುತನದಂತೆ ಭಾಸವಾಗುತ್ತದೆ. ಸರ್ಕಾರವೇ ಟೋಲ್ ಶುಲ್ಕ ಭರಿಸುವಾಗ ಇಂತಹ ಅಪಾಯಕಾರಿ ವರ್ತನೆ ತೋರುವ ಅಗತ್ಯವೇನಿತ್ತು?' ಎಂದು ಹೇಳಿದ್ದಾರೆ.
ದೂರಿಗೆ KSRTC ಸ್ಪಂದನೆ
ನೆಟ್ಟಿಗರ ಕಾಮೆಂಟ್ ನೋಡಿದ ಕೆಎಸ್ಆರ್ಟಿಸಿ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಪ್ರತಿಕ್ರಿಯಿಸಿದ್ದರು, ಆನ್ಲೈನ್ ದೂರನ್ನು ಸಂಬಂಧಪಟ್ಟ ವಿಭಾಗದ ಅಧಿಕಾರಿಗಳಿಗೆ ರವಾನಿಸಲಾಗಿದೆ, ಪರಿಶೀಲಿಸಲಾಗುವುದು ಎಂದು ತಿಳಿಸಿದೆ. ಬಸ್ ಚಾಲಕ ನಿಜವಾಗಿಯೂ ಟೋಲ್ ತಪ್ಪಿಸಲು ಹೀಗೆ ಮಾಡಿದರಾ ಅಥವಾ ಬೇರೆ ಯಾವುದಾದರೂ ಕಾರಣ ಇತ್ತಾ ಎಂಬುದು ತಿಳಿಯಬೇಕಿದೆ.
Government bus taking wrong route to enter the mysore expressway near bidadi to avoid toll, is this allowed for KSRTC busses or is it allowed for everyone? @NHAI_Official @KSRTC_Journeys @blrcitytraffic
— prashantkumar (@prashantkumar66) May 24, 2026
KA 11 F 0464
Time : 4:30 pm near bidadi
Kindly take action. pic.twitter.com/OWGDEUN9q1














Click it and Unblock the Notifications