ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಜಯ್, ಅರವಿಂದ್ ಹೆಸರು
ಮುಂಬೈ , ನವೆಂಬರ್ 22: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮುಗಿದಿದ್ದು, ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರ ಸ್ಥಾಪನೆ ಬಹುತೇಕ ನಿಚ್ಚಳವಾಗಿದೆ. ಶಿವಸೇನಾದಿಂದ ಸಿಎಂ, ಎನ್ಸಿಪಿ ಹಾಗೂ ಕಾಂಗ್ರೆಸ್ಸಿನಿಂದ ಡಿಸಿಎಂ ಎಂದು ನಿಗದಿಯಾಗಿದೆ.
ಈ ನಡುವೆ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆಡಳಿತಾರೂಢ ಬಿಜೆಪಿ ಈ ಬಾರಿ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಸಜ್ಜಾಗಿದೆ. ಇದೇ ಮೊದಲಬಾರಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಶಿವಸೇನಾ ಜತೆ ಎನ್ಸಿಪಿ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚಿಸಲಿವೆ. ಶರದ್ ಪವಾರ್ ನೇತೃತ್ವದ ಎನ್ಸಿಪಿ, ಶಿವಸೇನಾಗೆ ಸರ್ಕಾರ ರಚನೆಗೆ ನೇರ ಬೆಂಬಲ ನೀಡಲಿದ್ದು, ಸರ್ಕಾರದ ಆಡಳಿತದಲ್ಲಿ ಪಾಲ್ಗೊಳ್ಳಲಿದೆ. ಈ ಕುರಿತಂತೆ ಶನಿವಾರದಂದು ರಾಜ್ಯಪಾಲರ ಕೊಶ್ಯಾರಿ ಅವರಿಗೆ ಅಧಿಕೃತವಾಗಿ ಪತ್ರ ಸಲ್ಲಿಸಲಿದ್ದಾರೆ.
ಚುನಾವಣೆಗೂ ಮುನ್ನ ಎನ್ಸಿಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ನೇರವಾಗಿ ಸರ್ಕಾರದ ಭಾಗವಾಗಿರದೆ, ಈ ಸಮ್ಮಿಶ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದೆ. ಅಲ್ಲದೆ, ಆರು ಮಂದಿ ಪಕ್ಷೇತರ ಶಾಸಕರು ಕೂಡ ಶಿವಸೇನಾಗೆ ಬೆಂಬಲ ನೀಡುವುದಾಗಿ ಹೇಳಿದೆ.

ಉದ್ಧವ್ ಠಾಕ್ರೆಯೇ ಮುಖ್ಯಮಂತ್ರಿ
ಠಾಕ್ರೆ ಕುಟುಂಬದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಉದ್ಧವ್ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರವು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಅದನ್ನು ನಿಭಾಯಿಸಲು ಹೆಚ್ಚು ಪರಿಣತಿಯ ಅಗತ್ಯವಿದ್ದು, ಉದ್ಧವ್ ಠಾಕ್ರೆ ಅವರೇ ಸರ್ಕಾರದ ನೇತೃತ್ವ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಉದ್ಧವ್ ಮುಖ್ಯಮಂತ್ರಿಯಾಗುವುದಕ್ಕೆ ಎನ್ಸಿಪಿ, ಕಾಂಗ್ರೆಸ್ಸಿನಿಂದಲೂ ಯಾವುದೇ ತಕರಾರು ಕೇಳಿ ಬಂದಿಲ್ಲ.

ಶರದ್ ಪವಾರ್ ಶಿಫಾರಸ್ಸಿನ ಸಿಎಂ
ಶರದ್ ಪವಾರ್ ಅವರು ಶಿಫಾರಸ್ಸಿನಂತೆ ಸಂಜಯ್ ರಾವತ್ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದಿದೆ.ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಜಯ್, ಶರದ್ ಪವಾರ್ ಅವರು ಏನೇ ಹೇಳಲಿ, ಶಿವಸೇನಾದಿಂದ ಸಿಎಂ ಆದರೆ ಉದ್ಧವ್ ಠಾಕ್ರೆ ಮಾತ್ರ, ಇದು ಮಹಾರಾಷ್ಟ್ರದ ಜನತೆಯ ಆಯ್ಕೆ ಎಂದಿದ್ದಾರೆ. ಬಿಜೆಪಿ ಕೂಡಾ ಸಿಎಂ ಸ್ಥಾನವನ್ನು ಶಿವಸೇನಾಕ್ಕೆ ಬಿಟ್ಟುಕೊಡಲು ಸಿದ್ಧವಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿ, ಉದ್ಧವ್ ಠಾಕ್ರೆ ಸಿಎಂ ಆಗಬೇಕು ಎಂಬುದನ್ನು ಮಹಾರಾಷ್ಟ್ರ ಜನತೆ ನಿರ್ಧರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇಬ್ಬರು ಡಿಸಿಎಂಗಳು
ಮೈತ್ರಿ ಕಾರಣಕ್ಕೆ ಎನ್ಸಿಪಿಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನಾ ಬಿಟ್ಟುಕೊಡಬೇಕಾಗಿದ್ದು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಪೃಥ್ವಿರಾಜ್ ಚವಾಣ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕೂಡ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ನಿಂದ ಬಾಳಾಸಾಹೇಬ್ ಥೋರಟ್ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ನೇಮಿಸುವ ಸಾಧ್ಯತೆ ಇದೆ

ಅಂತಿಮ ಕರಡು ಪ್ರತಿ ಸಿದ್ಧ
ಉದ್ಧವ್ ಠಾಕ್ರೆ ಹಾಗೂ ಶರದ್ ಪವಾರ್ ಅವರು ಸರ್ಕಾರ ರಚನೆ, ಸಚಿವ ಸ್ಥಾನ ಹಂಚಿಕೆ ಬಗ್ಗೆ ಅಂತಿಮ ಕರಡು ಪ್ರತಿ ಸಿದ್ಧ ಪಡಿಸಿದ್ದಾರೆ. ಈ ಬಗ್ಗೆ ಸೋನಿಯಾ ಗಾಂಧಿ ಅವರ ಬಳಿ ನಾಳೆ ಮಾತುಕತೆ ನಡೆಸಿ ಅಂತಿಮಗೊಳಿಸಲಾಗುತ್ತದೆ ಎಂಬ ಸುದ್ದಿ ಬಂದಿದೆ. ಜೊತೆಗೆ ಉದ್ಧವ್ ಠಾಕ್ರೆ ಸಿಎಂ, ಅಜಿತ್ ಪವಾರ್ ಡಿಸಿಎಂ, ಕಾಂಗ್ರೆಸ್ಸಿನಿಂದ ಮತ್ತೊಬ್ಬರು ಡಿಸಿಎಂ ಆಗಿ ಪೂರ್ಣಾವಧಿಗೆ ನೇಮಕವಾಗಲಿದ್ದಾರೆ. ಒಟ್ಟಾರೆ 42 ಸ್ಥಾನಗಳನ್ನು ಆಯಾ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ಗಳಿಸಿದ ಸ್ಥಾನಗಳಿಗೆ ಅನುಗುಣವಾಗಿ ಹಂಚಲಾಗುತ್ತದೆ.












Click it and Unblock the Notifications