ಪ್ರಧಾನಿ ಕುರ್ಚಿ ಮೇಲೆ ಗಡ್ಕರಿ ಟವೆಲ್; ಶಿವಸೇನಾ ಸಂಸದನ ಲೆಕ್ಕಾಚಾರ
ಮುಂಬೈ, ಜನವರಿ 7: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶವು ಅತಂತ್ರ ಸ್ಥಿತಿ ನಿರ್ಮಾಣ ಆಗುವ ಕಡೆ ಸಾಗಿದೆ. ಅಂಥ ಸನ್ನಿವೇಶಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ 'ಕಾಯುತ್ತಿದ್ದಾರೆ' ಎಂದು ಶಿವಸೇನಾದ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನಾದ ಮುಖವಾಣಿ 'ಸಾಮ್ನಾ'ಗೆ ಕಾರ್ಯನಿರ್ವಾಹಕ ಸಂಪಾದಕರೂ ಆಗಿರುವ ರಾವತ್ ಭಾನುವಾರ ತಮ್ಮ ಅಂಕಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆ ಆಗುತ್ತಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಭಾವ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದೇಶದಲ್ಲಿ ಅತಂತ್ರ ಲೋಕಸಭೆ ನಿರ್ಮಾಣ ಆಗಬಹುದು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೊಣೆ. ಪೂರ್ಣ ಬಹುಮತದೊಂದಿಗೆ ಕಳೆದ ಬಾರಿ ಆಯ್ಕೆಯಾಗಿದ್ದ ಮೋದಿ ತಮಗೆ ಸಿಕ್ಕ ಅವಕಾಶವನ್ನು ವ್ಯರ್ಥ ಮಾಡಿದರು ಎಂದಿದ್ದಾರೆ. ಕಳೆದ ಬಾರಿ ಮೋದಿಯನ್ನು ಬೆಂಬಲಿಸಿದ ಮತದಾರರು ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂದು ನಿರ್ಧರಿಸಿದ್ದರು. ಆದರೆ ಈ ದಿನ ಚಿತ್ರಣ ಬದಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೋದಿ ಅವರ ಅಭೂತಪೂರ್ವ ವ್ಯಕ್ತಿತ್ವದ ವರ್ಚಸ್ಸು ಈಗ ಹೊಳಪು ಕಳೆದುಕೊಂಡಿದೆ. ರಾಹುಲ್ ಗಾಂಧಿ ನಾಯಕತ್ವವು ಮೋದಿ ಅವರಷ್ಟು ಎತ್ತರಕ್ಕೆ ಏರದಿರಬಹುದು. ಆದರೆ ಕೇಂದ್ರ ಸರಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡ ಜನರ ಮಧ್ಯೆ ರಾಹುಲ್ ಪ್ರಾಮುಖ್ಯ ಪಡೆದುಕೊಂಡಿದ್ದಾರೆ ಎಂದು ರಾವತ್ ಬರೆದುಕೊಂಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಸಂಭವನೀಯ ಕೆಟ್ಟ ಪ್ರದರ್ಶನದ ಬಗ್ಗೆ ಆ ಪಕ್ಷದ ಹಿರಿಯ ನಾಯಕರು ಚಿಂತಿತರಾಗಿದ್ದಾರೆ. ಯಾವ ಕಡೆಗೆ ಗಾಳಿ ಬೀಸುತ್ತಿದೆ ಎಂದು ತಿಳಿದುಕೊಳ್ಳಲು ನಿತಿನ್ ಗಡ್ಕರಿ ಹೇಳಿಕೆ ಸಾಕು. ನಿತಿನ್ ಗಡ್ಕರಿ ಅಂಥವರಿಗೆ ಆರೆಸ್ಸೆಸ್ ಹಾಗೂ ಬಿಜೆಪಿ ಎರಡೂ ಕಡೆ ಸಮಾನವಾದ ಪ್ರಾತಿನಿಧ್ಯ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
2009ರಿಂದ 2013ರ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ ಅವರ ವಿರುದ್ಧ ರಾಜಕೀಯ ಪಿತೂರಿ ಮಾಡಿ, ಎರಡನೇ ಅವಧಿಗೆ ಮುಂದುವರಿಯದಂತೆ ಮಾಡಲಾಯಿತು. ಪೂರ್ತಿ ಗ್ರೂಪ್ ಹಗರಣದಲ್ಲಿ ಗಡ್ಕರಿ ವಿರುದ್ಧ ಹಲವಾರು ಆರೋಪಗಳು ಕೇಳಿಬಂದವು. ಎರಡನೇ ಅವಧಿಗೆ ಅವರನ್ನು ಆಯ್ಕೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಲು ಕಾಯುತ್ತಿದ್ದಾರೆ. ಹಾಗಾದರೆ ಪ್ರಧಾನಿ ಪಟ್ಟಕ್ಕೆ ಒಮ್ಮತದ ಅಭ್ಯರ್ಥಿ ಆಗುವ ಲೆಕ್ಕಾಚಾರ ಅವರಲ್ಲಿದೆ ಎಂದು ರಾವತ್ ಹೇಳಿದ್ದಾರೆ.












Click it and Unblock the Notifications