ಇತಿಹಾಸ ಗೊತ್ತಿಲ್ಲದ ಮೋದಿ ದಯವಿಟ್ಟು ಸುಮ್ಮನಿರಿ
ಮುಂಬೈ, ಡಿ 23: ಇತಿಹಾಸದ ಬಗ್ಗೆ ಅರಿವಿಲ್ಲದಿದ್ದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದಯವಿಟ್ಟು ಸುಮ್ಮನಿರ ಬೇಕು. ಅದು ಬಿಟ್ಟು ಸಭೆಯಲ್ಲಿ ಜನರ ಚಪ್ಪಾಳೆ ಗಿಟ್ಟಿಸುವ ತವಕದಲ್ಲಿ ಇತಿಹಾಸವನ್ನು ತಿರುಚುವ ಕೆಲಸಕ್ಕೆ ಮೋದಿ ಮುಂದಾಗಬಾರದು ಎಂದು ಎನ್ಸಿಪಿ ಮುಖಂಡ ನವಾಬ್ ಮಲ್ಲಿಕ್ ತರಾಟೆಗೆ ತೆಗೆದು ಕೊಂಡಿದ್ದಾರೆ.
ಮುಂಬೈನಲ್ಲಿ ಭಾನುವಾರ (ಡಿ 22) ನಡೆದ 'ಮಹಾ ಗರ್ಜನೆ' ಸಾರ್ವಜನಿಕ ಸಭೆಯಲ್ಲಿ ಒಟ್ಟಾರೆ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯ ಕಂಡ ಮುಖ್ಯಮಂತ್ರಿಗಳ ವಿಚಾರದಲ್ಲಿ ಮೋದಿ ತಪ್ಪು ಮಾಹಿತಿಯನ್ನು ನೀಡಿದ್ದಾರೆ.
ಗುಜರಾತ್ ಮತ್ತು ಮಹಾರಾಷ್ಟ್ರ ಒಂದೇ ವರ್ಷದಲ್ಲಿ ಸ್ವಾತಂತ್ರ್ಯ ಪಡೆದರೂ, ಮಹಾರಾಷ್ಟ್ರ ಹೆಚ್ಚು ಮುಖ್ಯಮಂತ್ರಿಗಳನ್ನು ಕಂಡಿದೆ ಎನ್ನುವ ಸುಳ್ಳು ಮಾಹಿತಿಯನ್ನು ಮೋದಿ ನೀಡಿದ್ದಾರೆಂದು ಎನ್ಸಿಪಿ ಮುಖಂಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. (ಮುಂಬೈನಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಮೋದಿ)
ಟೀವಾಲಗಳಿಗೆ ವಿಶೇಷ ಪಾಸ್ ನೀಡಿ ಸಭೆಗೆ ಆಹ್ವಾನ ನೀಡಿ ಅವರನ್ನು ಕರೆಸಿದರೆ ಅದು ಬದಲಾವಣೆಯ ಸಂಕೇತ ಎನ್ನುವ ಮೋದಿ ಹೇಳಿಕೆ ಬರೀ ವೋಟ್ ಬ್ಯಾಂಕ್ ಗಿಮಿಕ್ ಅಷ್ಟೇ..
ಮೋದಿಗೆ ಇತಿಹಾಸದ ಬಗ್ಗೆ ಏನೂ ಅರಿವಿಲ್ಲ. ಮಹಾರಾಷ್ಟ್ರ 1960ರಿಂದ ಇದುವರೆಗೆ 17 ಮುಖ್ಯಮಂತ್ರಿಗಳನ್ನು ಕಂಡಿದೆ. ಮೋದಿ 26 ಮುಖ್ಯಮಂತ್ರಿ ಎನ್ನುವ ಸುಳ್ಳು ಹೇಳಿಕೆ ನೀಡುತ್ತಾರೆ ಎಂದು ಎನ್ಸಿಪಿ ಮುಖಂಡ ಮಲ್ಲಿಕ್ ಟೀಕೆ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ 17 ಮುಖ್ಯಮಂತ್ರಿಗಳು 26 ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಾರ್ವಜನಿಕ ಸಭೆಯಲ್ಲಿ ಭಾಷಣ ಬಿಗಿಯುವ ಮುನ್ನ ಇತಿಹಾಸವನ್ನು ಸರಿಯಾಗಿ ಅರಿತು ಮೋದಿ ಭಾಷಣ ಮಾಡಲಿ ಎಂದು ಎನ್ಸಿಪಿ ಮುಖಂಡ ಮೋದಿಗೆ ಸಲಹೆ ನೀಡಿದ್ದಾರೆ.
ಮುಂಬೈನಲ್ಲಿ ಗುಜರಾತಿಗಳು ಎರಡನೇ ಸ್ಥಾನವನ್ನು ಹೊಂದಿದ್ದಾರೆ ಎನ್ನುವ ಮೋದಿ, ಮುಂಬೈ ಮಹಾನಗರದಲ್ಲಿ ಭಾಷಾವಾರು ತಾರತಮ್ಯ ಬಿತ್ತುತ್ತಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿ ಗುಜರಾತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರೆಂದು ನವಾಬ್ ಮಲ್ಲಿಕ್ ಲೇವಡಿ ಮಾಡಿದ್ದಾರೆ.
ಈ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಎನ್ನುವ ಬದಲು ಮೋಹನ್ ಲಾಲ್ ಕರಮ್ ಚಂದ್ ಗಾಂಧಿ ಎನ್ನುವ ಮೂಲಕ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ರಾಜಸ್ಥಾನದ ಚುನಾವಣಾ ಸಭೆಯಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದ್ದರು.