ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರ ಕಚೇರಿ ತೆರೆಯಬೇಕು: ಸಂಜಯ್ ರಾವತ್
ಮುಂಬೈ, ಏಪ್ರಿಲ್ 19: ಗಡಿ ವಿಚಾರದಲ್ಲಿ ಈಗಾಗಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಕಿತ್ತಾಟ ನಡೆಯುತ್ತಲೇ, ಅದಕ್ಕೆ ಪುಷ್ಠಿ ಎಂಬಂತೆ ಶಿವಸೇನಾ ಮತ್ತೊಂದು ವಿವಾದಿತ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿದೆ.
ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವು ಬೆಳಗಾವಿಯಲ್ಲಿ ತನ್ನ ಕಚೇರಿಯನ್ನು ತೆರೆಯಬೇಕು ಎಂದು ಹೇಳಿದೆ.
ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ರೋಕ್ಠೋಕ್ ಅಂಕಣದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಪಕ್ಷದ ಮುಖಂಡ ಸಂಜಯ್ ರಾವತ್ ಗಡಿ ವಿವಾದದ ಸಮನ್ವಯ ಸಮಿತಿ ಸಚಿವ ಏಕನಾಥ ಶಿಂಧೆ ಆಗಾಗ ಬೆಳಗಾವಿಗೆ ಭೇಟಿ ನೀಡಬೇಕು.
ಇದಲ್ಲದೆ ಸುಪ್ರೀಂಕೋರ್ಟ್ನಲ್ಲಿ ಮಹಾರಾಷ್ಟ್ರದ ಪರ ಗಡಿ ವಿವಾದದಲ್ಲಿ ವಾದಿಸುತ್ತಿರುವ ಸರ್ಕಾರದ ಪರ ವಕೀಲರು ಕೂಡ ಬೆಳಗಾವಿಗೆ ಭೇಟಿ ನೀಡಿ, ಪ್ರಕರಣದ ಸ್ಥಿತಿಗತಿ ಬಗ್ಗೆ ವಿವಿರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಲ್ಲೆ ಸಮರ್ಥಿಸಿಕೊಂಡ ರಾವತ್
ಬೆಳಗಾವಿಯಲ್ಲಿ ಇತ್ತೀಚೆಗಷ್ಟೇ ಕನ್ನಡಿಗರು ಮರಾಠಿಗರ ಮೇಲೆ ದಾಳಿ ನಡೆಸಿದರು, ಇದಕ್ಕೆ ಪ್ರತೀಕಾರವಾಗಿ ಕರ್ನಾಟಕದ ಬಸ್ ಧ್ವಂಸ ಮಾಡಿದರು ಎಂದು ಹಿಂಸಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಮುಂಬೈನಲ್ಲೂ ಕನ್ನಡಿಗರಿದ್ದಾರೆ, ಅವರ ಮೇಲೆ ನಾವು ಯಾವತ್ತೂ ದಾಳಿ ಮಾಡಲಿಲ್ಲ ಎಂದರು.

ಮರಾಠಿ ಭಾಷಿಕರಿರುವ ಶಾಲೆಗೆ ಅನುದಾನ
ಕರ್ನಾಟಕದ ಮರಾಠಿ ಭಾಷಿಕರಿರುವ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಅನುದಾನ ನೀಡುವ ಕುರಿತು ಆಲೋಚಿಸಿದೆ. ಇದಕ್ಕಾಗಿ ಠಾಕ್ರೆ ಸರ್ಕಾರವು ಶಾಲೆಗಳ ನೋಂದಣಿ ಮಾಡಿಕೊಳ್ಳಬೇಕು. ಆದರೆ ಇದಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಫಡ್ನವೀಸ್ ಪ್ರಚಾರ
ಬೆಳಗಾವಿ ಲೋಕಸಭೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಚಾರ ಮಾಡಿದ್ದಕ್ಕೆ ಶಿವಸೇನೆ ಆಕ್ಷೇಪ ವ್ಯಕ್ತಪಡಿಸಿದೆ.

ಕಲ್ಯಾಣ ಕಚೇರಿ ತೆರೆಯಬೇಕು
ಬೆಳಗಾವಿ ಗಡಿ ತಗಾದೆಯನ್ನು ಆಗೊಮ್ಮೆ ಈಗೊಮ್ಮೆ ಕೆದಕುವ ಶಿವಸೇನೆ ಹೊಸ ತಗಾದೆ ತೆಗೆದಿದೆ, ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರ ಬೆಳಗಾವಿಯಲ್ಲಿ ಕಲ್ಯಾಣ ಕಚೇರಿಯನ್ನು ತೆರೆಯಬೇಕು ಎಂದು ಒತ್ತಾಯಿಸಿದೆ.












Click it and Unblock the Notifications