ಮಹಾರಾಷ್ಟ್ರ ಕನ್ನಡ ಪತ್ರಕರ್ತರಿಂದ ಡೈರಿ ಡೈರೆಕ್ಟರಿ 2016
ಮುಂಬಯಿ, ಜನವರಿ 07 : ಮಹಾರಾಷ್ಟ್ರ ರಾಜ್ಯ ಸಚಿವಾಲಯದಲ್ಲಿ ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು ಪ್ರಕಾಶಿಸಿರುವ ಚತುರ್ಥ 'ದಿನಚರಿ ಪುಸ್ತಕ-ಮಾಹಿತಿಸೂಚಿ ಕೈಪಿಡಿ-2016'(ಡೈರಿ-ಡಿರೆಕ್ಟರಿ)ಯನ್ನು ಬುಧವಾರ ಸಂಜೆ ಬಿಡುಗಡೆ ಗೊಳಿಸಲಾಯಿತು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೋರ್ವ ಪ್ರಜೆಗೂ ತನ್ನ ಧರ್ಮ, ಭಾಷೆ, ಪ್ರಾಂತ್ಯ ಪ್ರಧಾನವಾಗಿದ್ದು, ಇವೆಲ್ಲಕ್ಕೂ ಮಿಗಿಲಾದದ್ದು ಮಾನವೀಯತೆ ಮತ್ತು ಭಾರತೀಯತೆ ಆಗಿದೆ ಎಂದು ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಕಾಮಗಾರಿ ಮತ್ತು ಟೆಕ್ಸ್ಟೈಲ್ ಖಾತೆ ಸಚಿವ ಚಂದ್ರಹಾಸ ಪಾಟೀಲ್ ಹೇಳಿದರು.
ಇವೆಲ್ಲವುದರ ಮಧ್ಯೆ ಸಾಮರಸ್ಯದ ಬದುಕನ್ನು ಬಾಳುತ್ತಾ ರಾಷ್ಟ್ರದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದೆ. ಪತ್ರಕರ್ತರ ಸಹಯೋಗ ನಮ್ಮೆಲ್ಲರ ಬಾಂಧವ್ಯದ ಬದುಕಿಗೆ ಬೆಸುಗೆಯಾಗಲಿ ಎಂದು ಮಹಾರಾಷ್ಟ್ರ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶ ಉಸ್ತುವಾರಿ ಮಂತ್ರಿಯೂ ಆಗಿರುವ ಚಂದ್ರಹಾಸ ಪಾಟೀಲ್ ತಿಳಿಸಿದರು.

ಮಹಾರಾಷ್ಟ್ರ ರಾಜ್ಯಸರಕಾರದ ಮುಖ್ಯ ಕಾರ್ಯಾಲಯ (ಸಚಿವಾಲಯ)ದ ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಸಭಾಗೃಹದಲ್ಲಿ ಮಂತ್ರಾಲಯದ ಪ್ರಚಾರ ಸಹಾಯಕ ನಿರ್ದೇಶಕ ದೇವೇಂದ್ರ ಭುಜಬಲ್ ಡೈರಿ-ಡಿರೆಕ್ಟರಿ ವಿಧ್ಯುಕ್ತವಾಗಿ ಅನಾವರಣಗೊಳಿಸಿ ಶುಭಹಾರೈಸಿದರು.
ಮರಾಠಿ ಪತ್ರಿಕಾರಿಕಾ ಜನಕ ದರ್ಪಣ್ಕರ್ ಆಚಾರ್ಯ ಬಾಳ ಶಾಸ್ತ್ರಿ ಜಂಭೇಕರ್ ಅವರ ಪ್ರತಿಮೆಗೆ ಪುಷ್ಪವೃಷ್ಟಿಗೈದು ದೇವೇಂದ್ರ ಭುಜಬಲ್ ಅವರು ಮಹಾರಾಷ್ಟ್ರದ ಮಂತ್ರಾಲಯದಲ್ಲಿ ಪತ್ರಕಾರ್ ದಿವಸ್ ಸಂಭ್ರಮಕ್ಕೆ ಚಾಲನೆ ನೀಡಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾದ ಸರಳ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಮಹಾರಾಷ್ಟ್ರ ರಾಜ್ಯ ಸಚಿವಾಲಯದ ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಅಧ್ಯಕ್ಷ ಚಂದನ್ ಶಿರ್ವಾಳೆ, ಕಾರ್ಯದರ್ಶಿ ಚಂದ್ರಕಾಂತ್ ಶಿಂಧೆ, ಸ್ಟೇಟ್ ರಿಲೀಜ್ಹ್ ಫೌಂಡೇಶನ್ ಪುಣೆ ಇದರ ಅಧ್ಯಕ್ಷ, ರೇಖೀ ತಜ್ಞ ಅಶೋಕ್ ದೇಶ್ಮುಖ್ ಉಪಸ್ಥಿತರಿದ್ದರು.

ಕೈಪಿಡಿಯ ಸಂಪಾದಕ ಹಾಗೂ ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಪತ್ರಕರ್ತರ ಭವನ ಸಮಿತಿ ಶಿವ ಎಂ.ಮೂಡಿಗೆರೆ, ಕಾರ್ಯಧ್ಯಕ್ಷ ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ಜೊತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮ್ ಎಂ.ಹಂಧೆ ಹಾಜರಿದ್ದರು.
ಮಹಾರಾಷ್ಟ್ರ ಕನ್ನಡ ಪತ್ರಕರ್ತರಿಗೆಲ್ಲ ಒನ್ಇಂಡಿಯಾ ಕನ್ನಡದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.












Click it and Unblock the Notifications