ದಾವೂದ್ ಗ್ಯಾಂಗಿನ ರಿಯಾಜ್ ಭಾಟಿ, ಸಲೀಂ ಫ್ರೂಟ್ ಬಂಧನವೇಕೆ?
ಮುಂಬೈ, ಸೆ. 27: ಮನಿಲಾಂಡ್ರಿಂಗ್, ಉದ್ಯಮಿಗಳಿಗೆ ಬೆದರಿಕೆವೊಡ್ಡಿ ಹಣ ವಸೂಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಬಂಧಿಕರು ಹಾಗೂ ಆಪ್ತರ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಸೇರಿದಂತೆ ತನಿಖಾ ಸಂಸ್ಥೆಗಳ ದಾಳಿ, ತನಿಖೆ ಮುಂದುವರೆದಿದೆ.
ದಾವೂದ್ ಸೋದರಿ ಹಸೀನಾ ಪಾರ್ಕರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ತಂಡ ದಾಳಿ ನಡೆಸಿದ್ದರು. ಇಂದು ದಾವೂದ್ ಸೋದರ ಇಕ್ಬಾಲ್ ಕಸ್ಕರ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈಗ ದಾವೂದ್ ಸಹಚರ ರಿಯಾಜ್ ಭಾಟಿ, ಛೋಟಾ ಶಕೀಲ್ ಸಂಬಂಧಿಕ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಗಳಿಗೆ ಜೀವ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಟಿ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿತ್ತು. ಭಾಟಿಗೆ ಬಲೆ ಬೀಸಿದ್ದ ವರ್ಸೋವಾ ಪೊಲೀಸರು ಸೋಮವಾರದಂದು ಭಾಟಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ವರ್ಸೋವಾ ಠಾಣಾಧಿಕಾರಿಯ ಪ್ರಕಾರ, ರಿಯಾಜ್ ಭಾಟಿ ಹಾಗೂ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ಇಬ್ಬರು ಸೇರಿಕೊಂಡು ಅಂಧೇರಿಯ ಉದ್ಯಮಿಗೆ ಸತತವಾಗಿ ಬೆದರಿಕೆ ಹಾಕುತ್ತಿದ್ದರು. 30 ಲಕ್ಷಕ್ಕೂ ಅಧಿಕ ಮೌಲ್ಯದ SUV ವಾಹನ ಹಾಗೂ 7.5 ಲಕ್ಷ ರು ನಗದು ನೀಡುವಂತೆ ಬೇಡಿಕೆವೊಡ್ಡಿದ್ದರು., ಆದರೆ, ವಾಹನವಾಗಲಿ, ಹಣವಾಗಲಿ ನೀಡುವುದಿಲ್ಲ ಎಂದು ಉದ್ಯಮಿ ಪ್ರತಿಕ್ರಿಯಿಸಿದ್ದರು. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದಿದ್ದಾರೆ.

ರಿಯಾಜ್ ಹಾಗೂ ಸಲೀಂ ಫ್ರೂಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕ್ರೈಂ ಬ್ರ್ಯಾಂಚ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಸಲೀಂ ಫ್ರೂಟ್ ವಶಕ್ಕೆ ನೀಡುವಂತೆ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಪೊಲೀಸರು ಮನವಿ ಸಲ್ಲಿಸಿದ್ದಾರೆ.
ಬೆದರಿಕೆ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಂ ಬೀರ್ ಸಿಂಗ್ ಜೊತೆಗೆ ಭಾಟಿ ಹೆಸರು ಕೂಡಾ ಗೊರೆಗಾಂವ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇನ್ನೊಂದೆಡೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಸೆಕ್ಷನ್ಗಳ ಅಡಿಯಲ್ಲಿ ಭೂಗತ ಲೋಕಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ರಾಜಧಾನಿಯಲ್ಲಿ ಇಂತಹ ಹತ್ತು ಸ್ಥಳಗಳನ್ನು ಗುರುತಿಸಿದ್ದು, ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಇಡಿ ನಿರ್ಧರಿಸಿದೆ. ಇದಲ್ಲದೆ, ಈ ಪ್ರಕರಣದಲ್ಲಿ ಭೂಗತ ಜಗತ್ತಿನ ಕೆಲವು ರಹಸ್ಯ ವ್ಯವಹಾರಗಳಿಗೆ ಕೆಲವು ರಾಜಕೀಯ ಲಿಂಕ್ಗಳನ್ನು ಸಹ ಪತ್ತೆ ಹಚ್ಚಲು ಯತ್ನಿಸಲಾಗುತ್ತಿದೆ.
1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ಪರಾರಿಯಾಗಿರುವ ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇತ್ತೀಚೆಗೆ ದಾಖಲಿಸಿದ ಎಫ್ಐಆರ್ ಮತ್ತು ಕೆಲವು ಸ್ವತಂತ್ರ ಗುಪ್ತಚರ ಮಾಹಿತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಂಬೈನ ಹಲವಾರು ಆಸ್ತಿಗಳಲ್ಲಿ ಶೋಧ ನಡೆಸುತ್ತಿದೆ
202ರ ಡಿಸೆಂಬರ್ ತಿಂಗಳಲ್ಲಿ ಭೂಗತ ಪಾತಕಿ ದಾವೂದ್ನ ಮಹಾರಾಷ್ಟ್ರದ ರತ್ನಗಿರಿಯಲ್ಲಿದ್ದ ಆಸ್ತಿ 1.10 ಕೋಟಿಗೆ ಹರಾಜು ಹಾಕಲಾಗಿತ್ತು. 30 ಗುಂಟೆಯ ಪ್ಲಾಟ್ ಹಾಗೂ 50 ಗುಂಟೆಯಲ್ಲಿರುವ ಕಟ್ಟಡ ಹೆಸರಾಂತ ಬಿಡ್ಡರ್ ರವೀಂದ್ರ ಕಾಟೆಯವರ ಪಾಲಾಗಿದೆ.
ಮೂಲಗಳ ಪ್ರಕಾರ ಭೂಗತ ಜಗತ್ತಿನ ಹಲವಾರು ಲಿಂಕ್ಗಳು, ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳೊಂದಿಗೆ ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹುಡುಕಾಟ ನಡೆಸುತ್ತಿದೆ. ಈ ದಾಳಿಯಲ್ಲಿ ಹಸೀನಾ ಪಾರ್ಕರ್, ಇಕ್ಬಾಲ್ ಅವರ ಆಸ್ತಿಯೂ ಸೇರಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ, ದಾವೂದ್ ಇಬ್ರಾಹಿಂನ ಸಹಚರ ಛೋಟಾ ಶಕೀಲ್ ಮಾಹಿತಿ ನೀಡಿದವರಿಗೂ ₹20 ಲಕ್ಷ ಬಹುಮಾನವನ್ನು ಘೋಷಿಸಿದೆ. ಇತರ ಭಯೋತ್ಪಾದಕರಾದ ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮನ್ ಮಾಹಿತಿ ನೀಡಿದವರಿಗೆ ತಲಾ ₹15 ಲಕ್ಷ ಬಹುಮಾನವನ್ನು ಘೋಷಿಸಿದೆ.












Click it and Unblock the Notifications