ಶಿವಸೇನೆಯ 'ಸಿಎಂ ಕನಸಿನ ಸೌಧ'ವನ್ನು ಭಗ್ನಗೊಳಿಸಿದ ಸೋನಿಯಾ ಗಾಂಧಿ?
ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಸಂಬಂಧ ಮಂಗಳವಾರ (ನ 5) ತಡರಾತ್ರಿ ಮಹತ್ವದ ಬೆಳವಣಿಗೆಗಳು ನಡೆದಿವೆ. ನಾಗಪುರದಲ್ಲಿ ಸಿಎಂ ದೇವೇಂದ್ರ ಫಡ್ನವೀಸ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದಾರೆ.
ಈ ನಡುವೆ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇಬ್ಬರ ಭೇಟಿಯ ವೇಳೆ, ಮಹತ್ವದ ನಿರ್ಧಾರ ಬರಲಿಲ್ಲ ಎನ್ನುವ ಮಾತಿದೆ.
ಮೂಲಗಳ ಪ್ರಕಾರ, ಶಿವಸೇನೆಯ ಜೊತೆ ಮೈತ್ರಿ ಮಾಡಿಕೊಳ್ಳಲು ಸೋನಿಯಾ ಗಾಂಧಿ ನಿರಾಸಕ್ತಿ ತೋರಿದ್ದಾರೆ. ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಘಟಕ ಕೂಡಾ, ಶಿವಸೇನೆಯ ಜೊತೆಗಿನ ಮೈತ್ರಿಗೆ ವಿರೋಧ ವ್ಯಕ್ತ ಪಡಿಸಿತ್ತು.
ಕಳೆದ ರಾತ್ರಿ, ಬಿಜೆಪಿಯ ತಂಡ ಶಿವಸೇನೆ ವರಿಷ್ಠ ಉದ್ಡವ್ ಠಾಕ್ರೆ ಜೊತೆ ಮಾತುಕತೆ ನಡೆಸಿದೆ. ಆದರೆ, ಫಡ್ನವೀಸ್ ಅವರನ್ನು ಬದಲಿಸುವ ಮಾತೇ ಇಲ್ಲ ಎಂದು ಬಿಜೆಪಿ, ಠಾಕ್ರೆಗೆ ಸ್ಪಷ್ಟಪಡಿಸಿದೆ.

ಸೋನಿಯಾ ಗಾಂಧಿ - ಶರದ್ ಪವಾರ್ ಮಾತುಕತೆ
ಸೋಮವಾರ (ನ 4) ಸಂಜೆ, ಮಹಾರಾಷ್ಟ್ರದಲ್ಲಿನ ತಮ್ಮ ಮೈತ್ರಿ ಪಕ್ಷವಾದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆ ಸೋನಿಯಾ ಮಾತುಕತೆ ನಡೆಸಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಶಿವಸೇನೆಗೆ ಬೆಂಬಲಿಸುವ ವಿಚಾರಕ್ಕೆ ಬೆಂಬಸೋನಿಯಾ ಲ ಸೂಚಿಸಿಲ್ಲ ಎಂದು ವರದಿಯಾಗಿದೆ. ಶರದ್ ಪವಾರ್ ಅವರ ಪ್ರಸ್ತಾವನೆಯನ್ನು ಸೋನಿಯಾ ನೇರವಾಗಿ ನಿರಾಕರಿಸಿದ್ದಾರೆಂದು ಹೇಳಲಾಗುತ್ತಿದೆ.

ಬಿಜೆಪಿಗೆ ಬಿಸಿಮುಟ್ಟಿಸಲು ಶಿವಸೇನೆ+ಕಾಂಗ್ರೆಸ್+ಎನ್ಸಿಪಿ ಮೈತ್ರಿ
ಬಿಜೆಪಿಗೆ ಬಿಸಿಮುಟ್ಟಿಸಲು ಶಿವಸೇನೆ+ಕಾಂಗ್ರೆಸ್+ಎನ್ಸಿಪಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸುವ ಬಗ್ಗೆ ಶಿವಸೇನೆ ಸುಳಿವು ನೀಡಿತ್ತು. ಶಿವಸೇನೆಯ ಮುಖಂಡ ಸಂಜಯ್ ರಾವತ್, ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅಜಿತ್ ಪವಾರ್ ಕೂಡಾ ಇದನ್ನು ಸ್ಪಷ್ಟ ಪಡಿಸಿದ್ದರು. ಈಗ, ಸೋನಿಯಾ ನಿರ್ಧಾರದ ನಂತರ, ಶಿವಸೇನೆಯ ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಹಾಲೀ ವಿಧಾನಸಭೆಯ ಅವಧಿ
ಹಾಲೀ ವಿಧಾನಸಭೆಯ ಅವಧಿ ಮುಗಿಯಲು ಇನ್ನು ಕೇವಲ ಮೂರು ದಿನವಿರುವುದರಿಂದ, ಬಿಜೆಪಿ ಮತ್ತು ಶಿವಸೇನೆ ನಿರ್ಣಾಯಕ ಮಾತುಕತೆ ಆರಂಭಿಸಿದೆ. ಶಿವಸೇನೆ ತನ್ನ 50:50 ಫಾರ್ಮುಲಾದಿಂದ ಹಿಂದಕ್ಕೆ ಸರಿಯದಿದ್ದರೂ, ಹಳೇ ಗಂಡನ ಪಾದವೇ ಗಟ್ಟಿ ಎನ್ನುವಂತೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.

ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲೇ ಸರಕಾರ ರಚನೆ
ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲೇ ಸರಕಾರ ರಚನೆಯಾಗಲಿದೆ. ಸದ್ಯದಲ್ಲೇ ಸಿಹಿಸುದ್ದಿ ಹೊರಬೀಳಲಿದೆ ಎಂದು ರಾಜ್ಯ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, "ನಾವು ಬಿಜೆಪಿ ಜೊತೆ ಉತ್ತಮ ಹೊಂದಾಣಿಕೆಯಲ್ಲೇ ಇದ್ದೇವೆ. ಆದರೆ, ಸಿಎಂ ವಿಚಾರದಲ್ಲಿ ನಮಗೆ ಲಿಖಿತ ಭರವಸೆ ನೀಡಬೇಕೆಂದು" ಪಟ್ಟು ಹಿಡಿದಿದ್ದಾರೆ.

ಬಿಜೆಪಿ-ಶಿವಸೇನೆ ಸರಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ
ಶಿವಸೇನೆಯ ಮುಖಂಡ ಕಿಶೋರ್ ತಿವಾರಿ, ಆರ್ ಎಸ್ ಎಸ್ ಮುಖ್ಯಸ್ಥರಿಗೆ ಪತ್ರಬರೆದು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಬಿಜೆಪಿ - ಶಿವಸೇನೆ ನಡುವೆ ಬುಧವಾರವೂ ಬಿಕ್ಕಟ್ಟು ಪರಿಹಾರವಾಗದೇ ಇದ್ದ ಪಕ್ಷದಲ್ಲಿ, ಮೋಹನ್ ಭಾಗವತ್ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸದ್ಯದ ರಾಜಕೀಯ ಸಮೀಕರಣದ ಪ್ರಕಾರ, ಮತ್ತೆ, ಬಿಜೆಪಿ-ಶಿವಸೇನೆ ಸರಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications