ಪಾಲಕರು, ಶಿಕ್ಷಕರು ಓದಲೇಬೇಕಾದ ಮುಂಬೈ ಹುಡುಗ ಬರೆದ ಆ ಪತ್ರ!
ಮುಂಬೈ, ಮಾರ್ಚ್ 23: "ನಾವಿನ್ನೂ ಪ್ರೆಶರ್ ಕುಕ್ಕರಿನಲ್ಲಿದ್ದೇವೆ... ಒಳಗಿರುವ ಆಹಾರ ಈಗಾಗಲೇ ಸುಟ್ಟುಹೋಗಿದೆ..." ಹೀಗೆ ಸಾಗುತ್ತದೆ ಆ ಪತ್ರ!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪರೀಕ್ಷೆಯ ಕುರಿತು ಮುಂಬೈ ಹುಡುಗನೊಬ್ಬ ತನ್ನ ಫೇಸ್ ಬುಕ್ ನಲ್ಲಿ ಬರೆದ ಪತ್ರವೊಂದು ಎಂಥವರಲ್ಲೂ ಒಮ್ಮೆ ಕಣ್ಣೀರು ಮೂಡಿಸಿದರೆ ಅಚ್ಚರಿಯಿಲ್ಲ.
ಪಿಯುಸಿ ಪರೀಕ್ಷೆಗಳು ಮುಗಿದು, ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿವೆ. ಮಕ್ಕಳಿಗಿಂತ ಹೆಚ್ಚು ತಲೆಬಿಸಿಯಲ್ಲಿ ತಂದೆತಾಯಿರಿದ್ದಾರೆ. ಇಂಥ ಸಂದರ್ಭದಲ್ಲಿ ಮಕ್ಕಳ ಭಾವನೆಗಳನ್ನು ಪಾಲಕರು, ಶಿಕ್ಷರು ಅರ್ಥಮಾಡಿಕೊಳ್ಳುವುದು ಅಗತ್ಯ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಒಬ್ಬ ವಿದ್ಯಾರ್ಥಿಯ ಮನದಲ್ಲಿ ಏಳುವ ತುಮುಲಗಳನ್ನು ಈ ಹುಡುಗ ಸಮರ್ಥವಾಗಿ ವಿವರಿಸಿದ್ದಾನೆ.
"ತ್ರೀ ಇಡಿಯಟ್ಸ್ ಮೂವಿ ನೋಡುವಾಗ ನಾವೆಲ್ಲ ಅಂದುಕೊಂಡಿದ್ದೆವು. ಕಾಲೇಜಿಗೆ ಹೋದರೆ ಈ ರೀತಿ ಒತ್ತಡ ಇರುವುದಿಲ್ಲ ಅಂತ. ಆದರೆ ಹಾಗಾಗಲಿಲ್ಲ, ನಾವಿನ್ನೂ ಪ್ರೆಶರ್ ಕುಕ್ಕರಿನಲ್ಲೇ ಇದ್ದೇವೆ. ಒಳಗೆ ಏನಾಗಿದೆ ಊಹಿಸಿ? ಆಹಾರ ಸುಟ್ಟು ಹೋಗಿದೆ! ಒಬ್ಬ ಮಗುವಿಗೆ ನೀವು ಒಂದು ಕಾಮಿಕ್ ಪುಸ್ತಕ ನೀಡಿದರೆ ಅದನ್ನು ಆ ಮಗು ಒಂದು ಸ್ವಲ್ಪವೂ ಬೇಸರವಿಲ್ಲದೆ ಆರಂಭದಿಂದ ಕೊನೆಯವರೆಗು ಓದುತ್ತದೆ. ಆದರೆ ಅದರ ಬಗ್ಗೆ ಪರೀಕ್ಷೆ ಮಾಡುವುದಾಗಿ ಹೇಳಿದರೆ ಆ ಪುಸ್ತಕವನ್ನು ಅದು ದ್ವೇಷಿಸುತ್ತದೆ..."

"ಮೇಲೇಳುವ ಮಗುವನ್ನು ನಿವೇಕೆ ಮತ್ತೆ ಕೆಳಗೇ ಕಳಿಸುತ್ತೀರಿ? ನೀವ್ಯಾಕೆ ನಮಗೆ rank ಗಳನ್ನು ಕೊಡುತ್ತೀರಿ? ಪರೀಕ್ಷೆಯ ಮೂಲಕ ಮೌಲ್ಯಮಾಪನ ಮಾಡುವುದು ನಾವನುಭವಿಸುವ ಮತ್ತೊಂದು ಒತ್ತಡ. ನಾನೊಬ್ಬ ಗಾಯಕನೋ, ಚಿತ್ರಕಾರನೋ, ನೃತ್ಯಗಾರನೋ, ಸಿನೆಮಾ ನಿರ್ದೇಶಕನೋ ಆಗಬೇಕು ಎಂದುಕೊಂಡಿದ್ದರೆ ತಪ್ಪೇನು? ಇವನ್ನೆಲ್ಲ ಮಾಡಲು ಪೈತಾಗೋರಸ್ ಪ್ರಮೇಯ ನನಗೆ ಹೇಗೆ ಸಹಾಯವಾಗುತ್ತದೆ? ಒಂದು ಚೌಕದಲ್ಲಿ ಎಷ್ಟು ಇಕ್ಕೆಲಗಳಿವೆ ಎಂಬುದು ನನಗೆ ಯಾಕೆ ಉಪಯೋಗಕ್ಕೆ ಬರುತ್ತದೆ? ನನಗೆ ಅಗತ್ಯವಿಲ್ಲದನ್ನು ಕಲಿಯಲು ನನ್ನ ಮೇಲೆ ಒತ್ತಡ ಹೇರುವುದು ಏಕೆ? ನಮ್ಮನ್ನು ನಾವಂದುಕೊಂಡಂತೆ ಬದುಕಲು ಬಿಡಿ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟರೆ ನಾವು ನೀವು ಮತ್ತಷ್ಟು ಹೆಮ್ಮೆ ಪಡುವಂಥ ಕೆಲಸ ಮಾಡಬಲ್ಲೆವು"
"ಏನೇ ಇರಲಿ, ನಾನೀಗ ಹೊರಡುತ್ತೇನೆ. ನನ್ನ ಮುಂದಿನ ಪರೀಕ್ಷೆ ಇನ್ನೊಂದು ಗಂಟೆಯಲ್ಲಿದೆ..."
ಈ ಪತ್ರಕ್ಕೆ ಫೇಸ್ ಬುಕ್ ನಲ್ಲಿ ಈಗಾಗಲೇ 2.4 ಸಾವಿರ ಲೈಕ್ ಗಳು ಬಂದಿವೆ. 148 ಜನ ಶೇರ್ ಮಾಡಿದ್ದಾರೆ, 114 ಜನ ತಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್ ಮೂಲಕ ಹಾಕಿದ್ದಾರೆ.












Click it and Unblock the Notifications