ಮಹಾ ಕಾಂಗ್ರೆಸ್ ನಲ್ಲಿ ಭಾರೀ ಭಿನ್ನಮತ: ಮನೆಯೊಂದು ಮೂರು ಬಾಗಿಲು
Recommended Video

ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಶಿವಸೇನೆ ಎಷ್ಟೇ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದರೂ, ಲೋಕಸಭೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಒಂದಾಗಿವೆ. ಇನ್ನೊಂದೆಡೆ ಎನ್ಸಿಪಿ-ಕಾಂಗ್ರೆಸ್ ಚುನಾವಣಾ ಮೈತ್ರಿ ಮಾಡಿಕೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೋದಿಯನ್ನು ವಿರೋಧ ಪಕ್ಷಗಳೂ ನಾಚುವಂತೆ ಟೀಕಿಸುತ್ತಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ನಮ್ಮ ನಾಯಕ ನರೇಂದ್ರ ಮೋದಿಯೇ ಎಂದು ಸಾರಿದ್ದಾರೆ. ಜೊತೆಗೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಾಮಪತ್ರ ಸಲ್ಲಿಸುವ ವೇಳೆ, ಗಾಂಧಿನಗರದಲ್ಲಿ ಹಾಜರಾಗಿದ್ದಾರೆ ಕೂಡಾ..
ಇತ್ತ, ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿನ ಕಾಂಗ್ರೆಸ್ ಘಟಕ ಮೂರು ಭಾಗವಾಗಿದೆ. ದೆಹಲಿಯಿಂದ ಕಾಂಗ್ರೆಸ್ ಹಿರಿಯರು ಮನಸ್ತಾಪ ತಣ್ಣಗಾಗಿಸುವ ನಿಟ್ಟಿನಲ್ಲಿ ಮುಂಬೈಗೆ ದೌಡಾಯಿಸದರೂ, ಸದ್ಯದ ಮಟ್ಟಿಗೆ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಶರದ್ ಪವಾರ್ ಅವರ ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳಲೂ ಒಲ್ಲದ ಮನಸ್ಸಿನಿಂದ ಓಕೆ ಅಂದಿದ್ದ ಮಹಾರಾಷ್ಟ್ರದ ಪ್ರಮುಖ ಮುಖಂಡರು, ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಅಕ್ಷರಸಃ ಒಬ್ಬರು ಇನ್ನೊಬ್ಬರ ವಿರುದ್ದ ಬಹಿರಂಗವಾಗಿಯೇ ಕಿಡಿಕಾರುತ್ತಿದ್ದಾರೆ. ಚುನಾವಣೆಯಲ್ಲಿ ಹೊಸ್ತಿಲಲ್ಲಿ ಕಾಂಗ್ರೆಸ್ಸಿಗೆ ಇದು ನುಂಗಲಾರದ ತುತ್ತಾಗುತ್ತಿದೆ.

ಶೀತಲ ಸಮರ ನಿಂತಿಲ್ಲ, ಕಾರ್ಯಕರ್ತರಲ್ಲೂ ಮೂರು ಭಾಗವಾಗಿ ಹೋಗಿದೆ.
ಮಹಾರಾಷ್ಟ್ರ ಕಾಂಗ್ರೆಸ್ ನಲ್ಲಿ ಮೂರು ಬಣಗಳಾಗಿವೆ. ಚುನಾವಣೆಯ ವೇಳೆ ಇಂತಹ ಮನಸ್ತಾಪಗಳು ಸಹಜ ಎನ್ನುವ ಮಟ್ಟಿಗೆ ಈ ಮೂವರ ಶೀತಲ ಸಮರ ನಿಂತಿಲ್ಲ, ಬದಲಿಗೆ ಬೀದಿಗೆ ಬಂದು, ಕಾರ್ಯಕರ್ತರಲ್ಲೂ ಮೂರು ಭಾಗವಾಗಿ ಹೋಗಿದೆ. ಈ ಮೂವರೂ ಕಾಂಗ್ರೆಸ್ಸಿನಲ್ಲಿ ಪ್ರಭಾವಿ ಸ್ಥಾನದಲ್ಲಿ ಇರುವುದರಿಂದ, ಕಾಂಗ್ರೆಸ್ ಹೈಕಮಾಂಡ್ ನಿದ್ದೆಗೆಡಿಸುವಂತೆ ಮಾಡಿದ್ದಾರೆ.

ಅಶೋಕ್ ಚವ್ಹಾಣ್, ಪೃಥ್ವಿರಾಜ್ ಚವ್ಹಾಣ್, ಸುಶೀಲ್ ಕುಮಾರ್ ಶಿಂಧೆ
ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವ್ಹಾಣ್, ಪೃಥ್ವಿರಾಜ್ ಚವ್ಹಾಣ್ ಮತ್ತು ಹಿರಿಯ ಮುಖಂಡ, ಹೈಕಮಾಂಡ್ ವಲಯದಲ್ಲಿ ಪ್ರಭಾವಿಯಾಗಿರುವ ಸುಶೀಲ್ ಕುಮಾರ್ ಶಿಂಧೆ, ತಮಗೆ ಬೇಕಾದವರಿಗೆ ಟಿಕೆಟ್ ನೀಡಲು ದಂಬಾಲು ಬಿದ್ದಿದ್ದು, ಅವರಿಗೆ ಬೇಕಾದ ಹಾಗೆ ಟಿಕೆಟ್ ಹಂಚಿಕೆ ಆಗದೇ ಇದ್ದಿದ್ದರಿಂದ, ಈ ಮೂವರ ಭಿನ್ನಮತ ಇನ್ನೊಂದು ಮಜಲಿಗೆ ಹೋಗಿದೆ. ಅಶೋಕ್ ಚವ್ಹಾಣ್ ಅವರಿಗೆ ನಾಂದೇಡ್ ಕ್ಷೇತ್ರದ ಟಿಕೆಟ್ ನೀಡಿದ ನಂತರ, ಭಿನ್ನಮತದ ಕೂಗು, ಬೊಬ್ಬೆಯಾಗುತ್ತಿದೆ.

ಪ್ರತ್ಯೇಕ ಪ್ರತ್ಯೇಕವಾಗಿ ಮಾತುಕತೆ ನಡೆಸಿದರೂ, ಭಿನ್ನಮತ ಸರಿದಾರಿಗೆ ಬರುತ್ತಿಲ್ಲ
ಮಹಾರಾಷ್ಟ್ರ ಘಟಕದ ಭಿನ್ನಮತ ಬೀದಿ ರಂಪವಾಗುತ್ತಿದ್ದಂತೆಯೇ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮಧುಸೂಧನ್ ಮಿಸ್ತ್ರಿ ಅವರನ್ನು ಮುಂಬೈಗೆ ಕಳುಹಿಸಿದ್ದಾರೆ. ಮೂವರಲ್ಲೂ ಪ್ರತ್ಯೇಕ ಪ್ರತ್ಯೇಕವಾಗಿ ಮಾತುಕತೆ ನಡೆಸಿದರೂ, ಭಿನ್ನಮತ ಸರಿದಾರಿಗೆ ಬರುತ್ತಿಲ್ಲ.

ಕಾಂಗ್ರೆಸ್ಸಿನ ಮುಖ್ಯಸ್ಥ ಸ್ಥಾನದಿಂದ ಸಂಜಯ್ ನಿರುಪಮ್ ಅವರನ್ನಿ ಕಿತ್ತಾಕಿ, ಮಿಲಿಂದ್ ದಿಯೋರ
ಮುಂಬೈ ಘಟಕ ಕಾಂಗ್ರೆಸ್ಸಿನ ಮುಖ್ಯಸ್ಥ ಸ್ಥಾನದಿಂದ ಸಂಜಯ್ ನಿರುಪಮ್ ಅವರನ್ನು ಕಿತ್ತಾಕಿ, ಆ ಸ್ಥಾನಕ್ಕೆ ಮಿಲಿಂದ್ ದಿಯೋರ ಅವರನ್ನು ರಾಹುಲ್ ನೇಮಿಸಿದ್ದರು. ಹಿರಿಯ ಮುಖಂಡ ಅಶೋಕ್ ಚವ್ಹಾಣ್, ಕಾರ್ಯಕರ್ತರೊಬ್ಬರ ಜೊತೆ ಮಾತುಕತೆ ನಡೆಸುವ ದೂರವಾಣಿ ಕರೆ ಲೀಕ್ ಆಗಿ, ಕಾಂಗ್ರೆಸ್ಸಿಗೆ ತೀವ್ರ ಮುಜುಗರವಾಗಿತ್ತು. ಪಕ್ಷದ ಮುಖಂಡರ ವಿರುದ್ದ ಚವ್ಹಾಣ್, ಆಡಿಯೋದಲ್ಲಿ ಕಿಡಿಕಾರಿದ್ದರು.

ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರುವ ಸಾಧ್ಯತೆ
ಹಿರಿಯ ಮುಖಂಡರ ಭಿನ್ನಮತದಿಂದ ಬೇಸತ್ತು ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎನ್ನುವ ವರದಿಯಿಂದಾಗಿ ರಾಹುಲ್ ಗಾಂಧಿ ಬೆಚ್ಚಿಬಿದ್ದಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ನಡುವೆ ಸೀಟು ಹೊಂದಾಣಿಕೆ ನಡೆದಿದ್ದು ಕಾಂಗ್ರೆಸ್ 26, ಎನ್ಸಿಪಿ 22 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ (25) ಮತ್ತು ಶಿವಸೇನೆ ( 23) ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.












Click it and Unblock the Notifications