ಎಲ್ಲಾ ಆಯಾಮಗಳಲ್ಲೂ ಸಿದ್ಧಾರ್ಥ್ ಆತ್ಮಹತ್ಯೆ ಪ್ರಕರಣ ತನಿಖೆ: ಸಂದೀಪ್ ಪಾಟೀಲ್
ಮಂಗಳೂರು, ಆಗಸ್ಟ್ 1: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸರು ಬಿರುಸುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಬೆಂಗಳೂರಿಗೂ ಈಗಾಗಲೇ ತಂಡಗಳನ್ನು ಕಳುಹಿಸಿ ಮಾಹಿತಿ ಕಲೆ ಹಾಕಿದ್ದಾರೆ.
"ಸಿದ್ಧಾರ್ಥ್ ಅವರ ಆತ್ಮಹತ್ಯೆ ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು' ಎಂದು ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
"ಸಿದ್ಧಾರ್ಥ್ ಅವರು ಬರೆದ ಪತ್ರದ ಬಗ್ಗೆ , ಅದರಲ್ಲಿರುವ ಸಹಿ ಬಗ್ಗೆ, ಬೋರ್ಡ್ ಆಫ್ ಡೈರೆಕ್ಟರ್ ಹೇಳಿಕೆ ಬಗ್ಗೆ, ಹೀಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು. ಸಿದ್ಧಾರ್ಥ್ ಅವರ ಪ್ರಕರಣ ಬಹಳಷ್ಟು ಸೂಕ್ಷ್ಮ. ಸದ್ಯಕ್ಕೆ ತನಿಖೆಯ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಐಟಿ ಇಲಾಖೆ ಅಧಿಕಾರಿಗಳಿಂದ ಕಿರುಕುಳದ ಆರೋಪ ವಿಚಾರವಾಗಿಯೂ ತನಿಖೆ ನಡೆಸಲಾಗುವುದು" ಎಂದು ಮಾಹಿತಿ ನೀಡಿದರು ಅವರು.

"ಐಟಿ ಸಂಬಂಧಪಟ್ಟವರಿಗೆ ನೋಟೀಸ್ ನೀಡಲು ಅವಕಾಶವಿದೆಯೇ, ಇಲ್ಲವೇ ಎಂದು ಸದ್ಯಕ್ಕೆ ಹೇಳಲಾಗುವುದಿಲ್ಲ. ಆದರೆ, ಪ್ರತಿಯೊಂದು ವಿಚಾರದಲ್ಲೂ ತನಿಖೆ ನಡೆಯುತ್ತದೆ" ಎಂದು ಅವರು ಸ್ಪಷ್ಟಪಡಿಸಿದರು.












Click it and Unblock the Notifications