ದ.ಕ ಜಿಲ್ಲೆಯ ಅತೃಪ್ತ ಬಿಜೆಪಿ ಮುಖಂಡರು ಸದ್ಯದಲ್ಲೇ ಕಾಂಗ್ರೆಸಿಗೆ: ರೈ
ಮಂಗಳೂರು, ಏಪ್ರಿಲ್ 10: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಘೋಷಣೆಯಾಗುತ್ತಿದ್ದಂತೆ ಹಲವಾರು ಬಿಜೆಪಿ ಅತೃಪ್ತ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ್ ರೈ ಬಾಂಬ್ ಸಿಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಹಲವಾರು ಅತೃಪ್ತ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ . ಬಿಜೆಪಿಯ ಅಭ್ಯರ್ಥಿಗಳ ಘೋಷಣೆಯನ್ನೇ ಕಾಯುತ್ತಿರುವ ಈ ಮುಖಂಡರು ಅಭ್ಯರ್ಥಿಗಳ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಸೇರಲಿದ್ದಾರೆ ಎಂದು ಅವರು ಹೇಳಿದರು.
ಅಭ್ಯರ್ಥಿಗಳ ಘೋಷಣೆ ಅಗುತ್ತಿದ್ದಂತೆ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಯಾರೆಲ್ಲ ಕಾಂಗ್ರೆಸ್ ಸೇರುತ್ತಾರೆ ಕಾದು ನೋಡಿ ಎಂದು ಅವರು ಮಾರ್ಮಿಕವಾಗಿ ನುಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯ ಎಂಟೂ ಕ್ಷೇತ್ರಗಳನ್ನು ಗೆಲ್ಲುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ವಿಚಾರದಲ್ಲಿ ಯಾರಿಗೂ ಅತೃಪ್ತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಸಚಿವ ಯು.ಟಿ ಖಾದರ್ ಅವರಿಗೆ ಪ್ರಸಾದ ನೀಡಿದ ಭೂತ ಕಟ್ಟುವವನಿಗೆ ತಲೆ ಸರಿಯಿಲ್ಲ ಎಂದಿದ್ದ ಆರ್.ಎಸ್.ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ತಿರುಗೇಟು ನೀಡಿದ ರಮಾನಾಥ್ ರೈ, ಪ್ರಭಾಕರ ಭಟ್ ತಮ್ಮ ಹೇಳಿಕೆಯ ಮೂಲಕ ದೈವದ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದಂತಾಗಿದೆ ಎಂದು ಹೇಳಿದರು.
ದೊಡ್ಡ ಹಿಂದುತ್ವವಾದಿಯಾಗಿ ದೈವದ ನಂಬಿಕೆಯನ್ನು ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನೆ ಮಾಡಿದ್ದಾರೆ.
ದೈವಾರಾಧನೆ ಒಂದು ನಂಬಿಕೆ. ಭೂತ ಕಟ್ಟುವವನು ಪ್ರಸಾದ ನೀಡ್ತಾನೆಯೇ? ದೈವದ ರೂಪದಲ್ಲಿ ಪ್ರಸಾದ ನೀಡುವುದನ್ನು ಇವರು ಪ್ರಶ್ನೆ ಮಾಡುತ್ತಿದ್ದಾರೆ. ಬರೀ ಓಟಿಗಾಗಿ ಇಂಥ ಮಾತನ್ನಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications