ಮತಾಂತರ ವಿರುದ್ಧ ಆರ್ಎಸ್ಎಸ್ 'ತುಡರ್' ಕಾರ್ಯಕ್ರಮ
ಮಂಗಳೂರು, ನವೆಂಬರ್ 1: ದೀಪಗಳ ಹಬ್ಬ ದೀಪಾವಳಿಗೆ ಕ್ಷಣಗಣನೆ ಆರಂಭವಾಗಿದೆ. ದೀಪಾವಳಿಯನ್ನು ಈ ಬಾರಿ ವಿಶೇಷವಾಗಿ ಆಚರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ ನಿರ್ಧಾರ ಮಾಡಿದೆ. ಈ ಬಾರಿಯ ದೀಪಾವಳಿಯನ್ನು ದಲಿತರ ಕಾಲನಿಗಳಲ್ಲಿ ಆಚರಿಸಲು ಆರ್ಎಸ್ಎಸ್ ಯೋಚಿಸಿದೆ. ಈ ಕಾರ್ಯಕ್ರಮಕ್ಕೆ 'ತುಡರ್' ಎಂಬ ಹೆಸರನ್ನು ಸಂಘ ಹೆಸರಿಸಿದೆ.
ತುಡರ್ ಎಂದರೆ ತುಳುವಿನಲ್ಲಿ ದೀಪ ಎಂಬ ಅರ್ಥವಿದೆ. ಅಸ್ಪೃಶ್ಯರ ಕಾಲೊನಿಗಳಲ್ಲಿ ದೀಪಾವಳಿ ಹಬ್ಬ ಆಚರಿಸುವ ಮೂಲಕ ಧರ್ಮದೊಳಗೆ ಜಾತಿ ಪದ್ಧತಿ, ಅಸ್ಪೃಶ್ಯತೆ ನಿವಾರಣೆಗೆ ಮಹತ್ತರ ಹೆಜ್ಜೆಯನ್ನಿಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳ ವ್ಯಾಪ್ತಿಯಲ್ಲಿರುವ ದಲಿತರ ಕಾಲನಿಗಳಲ್ಲಿ 'ತುಡರ್' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಲಿತರ ಕಾಲನಿಯ ನಿವಾಸಿಗಳು ನವೆಂಬರ್ ಮೂರನೇ ತಾರೀಖು ನರಕ ಚತುರ್ದಶಿಯ ದಿನದಂದು ತಮ್ಮ ಕಾಲನಿ ವ್ಯಾಪ್ತಿಯ ದೇವಾಲಯಕ್ಕೆ ತೆರಳಿ ದೇವರಿಗೆ ನಮಸ್ಕರಿಸಿ, ದೇವಾಲಯದಲ್ಲಿ ಅರ್ಚಕರು ಬೆಳಗಿಸಿ ಕೊಟ್ಟ ಆರತಿಯ ಮೂಲಕ ತಾವು ತಂದ ದೀಪವನ್ನು ಪ್ರಜ್ವಲಿಸಿ ಮೆರವಣಿಗೆಯಲ್ಲಿ ತಮ್ಮ ಕಾಲನಿಗೆ ತರಬೇಕು.
ಆ ಬಳಿಕ ಕಾಲನಿಯ ಮನೆಯೊಂದರ ಅಂಗಳದಲ್ಲಿ ಎಲ್ಲರೂ ಸೇರುತ್ತಾರೆ. ಜೊತೆಗೆ ಆ ಊರಿನ ಹಿಂದೂ ಸಮಾಜದ ಪ್ರಮುಖರು ಯಾವುದೇ ಜಾತಿ- ಭೇದವಿಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸಂಘದ ಪ್ರಮುಖರೊಬ್ಬರಿಂದ ಭೌದ್ದಿಕ್ ಕಾರ್ಯಕ್ರಮ ಹಾಗೂ ದೀಪಾವಳಿ ಹಿನ್ನೆಲೆ, ಭಾರತೀಯ ಸಂಸ್ಕೃತಿಯ ಬಗ್ಗೆ ಕಾಲನಿ ನಿವಾಸಿಗಳಿಗೆ ತಿಳಿಯಪಡಿಸಲಾಗುತ್ತದೆ.
ಆ ಬಳಿಕ 'ತುಡರ್' ಕಾರ್ಯಕ್ರಮದ ಅಂಗವಾಗಿ ಆಯಾ ಕಾಲನಿಗಳಲ್ಲಿ ಎಲ್ಲ ಹಿಂದೂ ಬಾಂಧವರು ಸೇರಿ ಸಹಭೋಜನವನ್ನು ಸ್ವೀಕರಿಸುತ್ತಾರೆ. ಕಾಲನಿಯ ನಿವಾಸಿಗಳೇ ಅಡುಗೆ ತಯಾರಿಸಿ ಬಂದ ಅತಿಥಿಗಳಿಗೆ ಹಾಗೂ ಸ್ಥಳೀಯರಿಗೆ ಹಬ್ಬದ ಸಿಹಿ ಊಟವನ್ನು ಉಣಬಡಿಸುತ್ತಾರೆ.
'ತುಡರ್' ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿರುವ ಈ ಸಹಭೋಜನವು ಸಾಮರಸ್ಯ, ಸೌಹಾರ್ದದ ಪ್ರತೀಕವಾಗಿ ನಡೆಯುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ಸುಳ್ಯದ ಶ್ರೀಚೆನ್ನಕೇಶವ ದೇವಾಲಯ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯ, ಉಪ್ಪಿನಂಗಡಿಯ ಶ್ರೀಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯ, ಪೊಳಲಿ ಶ್ರೀರಾಜರಾಜೇಶ್ವರಿ ದೇವಾಲಯ ಸಹಿತ ವಿವಿಧ ದೇವಾಲಯಗಳ ವ್ಯಾಪ್ತಿಯ ದಲಿತ ಕಾಲನಿಗಳಲ್ಲಿ'ತುಡರ್' ಕಾರ್ಯಕ್ರಮ ನಡೆಸಲು ಆರ್ಎಸ್ಎಸ್ ನಿರ್ಧಾರ ಮಾಡಿದೆ.
ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ವತಿಯಿಂದ 3 ವರ್ಷಗಳ ಹಿಂದೆ ಉಪ್ಪಿನಂಗಡಿ ಪರಿಸರದ ಅಸ್ಪೃಶ್ಯರ ಕಾಲೊನಿಗಳಲ್ಲಿ ಭಜನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾಲನಿಯ ಮನೆಯೊಂದರ ತುಳಸಿ ಕಟ್ಟೆಯ ಮುಂದೆ ನಿವಾಸಿಗಳು ಮತ್ತು ಭಜನಾ ಮಂಡಳಿಯ ಸದಸ್ಯರು ಭಜನೆ ನಡೆಸಿಕೊಡುತ್ತಿದ್ದರು. ಜೊತೆಗೆ ಸಣ್ಣ ಧಾರ್ಮಿಕ ಕಾರ್ಯಕ್ರಮವನ್ನು ಕೂಡಾ ನಡೆಸಲಾಗುತ್ತಿತ್ತು. ಇದರ ಪರಿಣಾಮವಾಗಿ ಉಪ್ಪಿನಂಗಡಿ ಪರಿಸರದ ದಲಿತರ ಕಾಲನಿಗಳಲ್ಲಿ ಮತಾಂತರದಂತಹ ಪ್ರಕರಣಗಳು ಸಂಪೂರ್ಣ ಸ್ಥಗಿತಗೊಂಡಿದ್ದವು.
ಇತ್ತೀಚೆಗೆ ಮತಾಂತರ ಪ್ರಕರಣಗಳು ಅತೀ ಹೆಚ್ಚಾಗಿ ನಡೆಯುತ್ತಿರುವುದರಿಂದ ಆರ್ಎಸ್ಎಸ್ ತನ್ನ ಕಾರ್ಯಕ್ರಮಗಳನ್ನು ಮತ್ತಷ್ಟು ತೀವ್ರವಾಗಿ ಮಾಡಲು ನಿರ್ಧಾರ ಮಾಡಿದೆ. ಶೋಷಿತಕ್ಕೊಳಗಾದ ಜನರು ಹಿಂದೂ ಧರ್ಮ ಬಿಟ್ಟು ಹೋಗದಂತೆ ಮನಪರಿವರ್ತನೆ ಮಾಡುವ ಕೆಲಸ ನಡೆಯುತ್ತಿದೆ.