ಕಂಗೆಡಿಸಿದ ಕೆಂಗಣ್ಣು ಕಾಯಿಲೆ: 15 ದಿನಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಜನರಿಗೆ ಮದ್ರಾಸ್ ಐ
ಮಂಗಳೂರು, ನವೆಂಬರ್16: ಮಂಗಳೂರಿನಲ್ಲಿ ಕೆಂಗಣ್ಣು ಕಾಯಿಲೆಯ ಹಾವಳಿ ಜೋರಾಗಿದೆ. ಒಬ್ಬರಿಂದ ಒಬ್ಬರಿಗೆ ಬಹಳ ವೇಗವಾಗಿ ಹರಡುವ ಈ ರೋಗದಿಂದ ಕರಾವಳಿ ಜನ ಹೈರಾಣಾಗಿ ಹೋಗಿದ್ದಾರೆ. ಇದರಿಂದ ಕಣ್ಣಿನ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೆಂಗಣ್ಣು ಕಾಯಿಲೆ ಹೆಚ್ಚಾಗುತ್ತಿದೆ. ಮಂಗಳೂರು ನಗರ ಹೊರವಲಯದ ಬಜಪೆ, ಎಕ್ಕಾರು ಸೇರಿದಂತೆ ಬಂಟ್ವಾಳ, ಬೆಳ್ತಂಗಡಿ ತಾಲೂಕು ಪರಿಸರದಲ್ಲಿ ಹೆಚ್ಚಿನ ಜನ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆಯಿಂದ ಬಳಲುತ್ತಾ ಊರಿನಲ್ಲಿ ಕಪ್ಪು ಕನ್ನಡಕ ಧರಿಸಿ ಓಡಾಡುತ್ತಿರುವವರ ಸಂಖ್ಯೆ ಏರುತ್ತಿದೆ.
ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದವರು ಅಂಚೇ ಕಚೇರಿಯಲ್ಲಿ ಶುಲ್ಕ ಪಾವತಿಸಬಹುದು
ಬಾಧಿತರಲ್ಲಿ ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳು ಹೆಚ್ಚಿದ್ದು ಇವರ ಮೂಲಕ ಈ ವೈರಸ್ ಇತರರಿಗೆ ವೇಗವಾಗಿ ಹರಡುತ್ತಿದೆ. ಹೀಗಾಗಿ ದಿನವೊಂದಕ್ಕೆ 100ಕ್ಕಿಂತ ಹೆಚ್ಚು ಜನ ಈ ಕೆಂಗಣ್ಣು ಕಾಯಿಲಿಗೆ ತುತ್ತಾಗುತ್ತಿದ್ದು ಕಣ್ಣಿನ ಆಸ್ಪತ್ರೆಗೆ ಹೆಚ್ಚಿನ ಜನ ಚಿಕಿತ್ಸೆಗೆ ಬರುತ್ತಿದ್ದಾರೆ.
ಮದ್ರಾಸ್ ಐ ಎಂದು ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ. ಕಣ್ಣಿನ ಬಿಳಿಭಾಗದ ಮೇಲೆ ಮತ್ತು ಕಣ್ಣಿನ ರೆಪ್ಪೆಗಳ ಒಳಭಾಗ ಉರಿಯೂತಕ್ಕೆ ಈಡಾಗಿ ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಉದಿಕೊಳ್ಳುವುದು ಇದರ ಲಕ್ಷಣವಾಗಿದೆ.
Surathkal toll gate cancelled : ಸತತ ಹೋರಾಟಕ್ಕೆ ಮಣಿದ ಕೇಂದ್ರ: ಸುರತ್ಕಲ್ ಟೋಲ್ ಗೇಟ್ ರದ್ದು
''ಇದು ಬಹುಬೇಗ ಹರಡುವ ರೋಗವಾಗಿದ್ದು ಇದು ಕಣ್ಣಿನ ಕಪ್ಪು ಗುಡ್ಡೆ ಪ್ರದೇಶಕ್ಕೆ ಹರಡಿದರೆ ದೃಷ್ಟಿಗೆ ಸಂಚಕಾರ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಕೆಂಗಣ್ಣು ರೋಗ ಪ್ರದೇಶದಲ್ಲಿ ಇರುವವರು ಕಣ್ಣನ್ನು ಮುಟ್ಟಿಕೊಳ್ಳದಿರುವುದು, ಆಗಾಗ ಕೈ ಸ್ವಚ್ಛಗೊಳಿಸುತ್ತಿರುವುದು, ವೈರಸ್ಗೆ ತುತ್ತಾದವರ ಸಂಪರ್ಕದಿಂದ ದೂರವಿರುವುದರಿಂದ ರೋಗ ಹರಡುವುದರಿಂದ ತಪ್ಪಿಸಿಕೊಳ್ಳಬಹುದು'' ಎಂದು ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ ವಿಕ್ರಂ ಜೈನ್ ಮಾಹಿತಿ ನೀಡಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳ ಅಂತರದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಕೆಂಗಣ್ಣು ವೈರಸ್ನಿಂದ ಬಳಲುತ್ತಿದ್ದಾರೆ. ಈ ರೋಗ ಬಾಧೆಯಿಂದಾಗಿ ಬೆಳ್ತಂಗಡಿಯ ಖಾಸಗಿ ಶಾಲೆಯೊಂದಕ್ಕೆ ರಜೆ ನೀಡಲಾಗಿದೆ.
ಕೆಂಗಣ್ಣು ರೋಗದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಶಿಕ್ಷಣ ಇಲಾಖೆ ಶಾಲೆಗಳ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದೆ. ಒಟ್ಟಿನಲ್ಲಿ ಕೆಂಗಣ್ಣು ಕಾಯಿಲೆಯಿಂದ ಜೀವ ಹಾನಿ ಆಗದೇ ಇದ್ದರೂ ದೃಷ್ಟಿ ದೋಷ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ.