ಲೇಸರ್ ಬೆಳಕಲ್ಲಿ ಮೂಡಿದ ಬಾಹುಬಲಿ ಜೀವನ ಚರಿತ್ರೆಗೆ ನಟ ರಮೇಶ್ ಪ್ರಶಂಸೆ
ಮಂಗಳೂರು, ಫೆಬ್ರವರಿ 10: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ ಮನೆ ಮಾಡಿದೆ. ರಾತ್ರಿಯಾಗುತ್ತಿದ್ದಂತೆಯೇ ಮಂಜುನಾಥನ ಆಲಯ ಸ್ವರ್ಗದಂತೆ ಭಾಸವಾಗುತ್ತಿದ್ದು, ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ.
ಈ ನಡುವೆ ವೈರಾಗ್ಯ, ತ್ಯಾಗ, ಸಂಯಮದ ಸಹನೆಯ ಸಾಕಾರಮೂರ್ತಿ ಬಾಹುಬಲಿಯ ಜೀವನ ಸಾರುವ ಲೇಸರ್ ಷೋ ಧರ್ಮಸ್ಥಳ ದ ವೈಭವಕ್ಕೆ ಮೆರುಗು ತಂದಿದ್ದು, ಬಹುಭಾಷಾ ನಟ ರಮೇಶ್ ಸೇರಿದಂತೆ ಲಕ್ಷಾಂತರ ಜನ ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು.
ಧರ್ಮಸ್ಥಳದಲ್ಲಿ ಮೇಳೈಸಿದ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಂಭ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ವೈಭವ ಕಳೆಗಟ್ಟಿದೆ.ಬೆಳಗ್ಗೆ ಪೂಜಾ ವಿಧಿವಿಧಾನಗಳು ನಡೆದ್ರೆ ರಾತ್ರಿಯಾಗುತ್ತಿದ್ದಂತೆಯೇ ಧರ್ಮಸ್ಥಳ ಸ್ವರ್ಗದ ರೀತಿ ಭಾಸವಾಗುತ್ತಿದೆ.ಧರ್ಮಸ್ಥಳ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು,ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸ ವಾಗುತ್ತಿದೆ.
ಮಹಾಮಸ್ತಕಾಭಿಷೇಕ ಮಹೋತ್ಸವ ದ ಹಿನ್ನೆಲೆಯಲ್ಲಿ ಬಾಹುಬಲಿಯ ಜೀವನ ವೃತ್ತಾಂತ ಸಾರುವ ಲೇಸರ್ ಷೋ ಗೆ ಚಿತ್ರ ನಟ ರಮೇಶ್ ಅರವಿಂದ್ ಚಾಲನೆ ನೀಡಿದರು.ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾದ ಬಾಹುಬಲಿ ಮೂರ್ತಿಯ ಮೇಲೆ ಲೇಸರ್ ಷೋ ಮಾಡಿದ್ದು, ಬಾಹುಬಲಿಯ ಜೀವನ ಸಾರುವ ಗತ ವೈಭವವನ್ನು ಷೋ ಮೂಲಕ ತೋರಿಸಲಾಯಿತು.
ರಮೇಶ್ ಅರವಿಂದ್ ಷೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಬಾಹುಬಲಿಯ ಉತ್ಸವ ಮಾಡೋದು ಬಾಹುಬಲಿಯ ವ್ಯಕ್ತಿತ್ವವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಬೇಕೆಂಬ ಕಾರಣಕ್ಕಾಗಿ. ಧರ್ಮಸ್ಥಳ ಈ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದರು.
ಬೆಂಗಳೂರು ಮೂಲದ ಕಂಪೆನಿ ಈ ಲೇಸರ್ ಷೋ ಪ್ರದರರ್ಶಿಸಿದ್ದು , ಡಾ ಡಿ ವೀರೇಂದ್ರ ಹೆಗ್ಗಡೆ ಯವರ ತಂತ್ರಜ್ಞಾನ ಬಳಕೆಯ ಆಸಕ್ತಿಗೆ ಸಾಕ್ಷಿಯಾಗಿದೆ. ನುರಿತ ತಂತ್ರಜ್ಞರು ಕಳೆದ ಒಂದು ತಿಂಗಳಿನಿಂದ ಷೋ ಗಾಗಿ ಶ್ರಮ ಪಟ್ಟಿದ್ದು ಬಾಹುಬಲಿಯ ಮೂರ್ತಿಯ ಮೇಲೆನೇ ಬಾಹುಬಲಿ ವ್ಯಕ್ತಿತ್ವ ಚಿತ್ರಿಸಿದ್ದು ಜನರ ಮೆಚ್ಚುಗೆ ಗಳಿಸಿದೆ.ಲೇಸರ್ ಷೋ ಫೆಬ್ರವರಿ 18 ತನಕ ಪ್ರತಿದಿನ ರಾತ್ರಿ ಪ್ರದರ್ಶನ ವಾಗಲಿದೆ.