ಉಳ್ಳಾಲ: ಸಮುದ್ರ ಪಾಲಾದ ಹಾಸನದ 4 ಯುವಕರು
ಮಂಗಳೂರು, ಫೆ.14: ಪ್ರವಾಸಕ್ಕೆಂದು ಬಂದಿದ್ದ ಹಾಸನದ ನಾಲ್ವರು ಯುವಕರು ಸೋಮೇಶ್ವರ ಬೀಚ್ ನಲ್ಲಿ ಈಜಾಟವಾಡುತ್ತಿದ್ದಾಗ ಸಮುದ್ರಪಾಲಾದ ದಾರುಣ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಹಾಸನದಿಂದ ಒಟ್ಟು 6 ಯುವಕರ ತಂಡ ಮಂಗಳೂರಿಗೆ ಆಗಮಿಸಿತ್ತು. ಈ ಪೈಕಿ ನಾಲ್ವರು ಸಮುದ್ರಪಾಲಾಗಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸಮುದ್ರಪಾಲಾದ ಯುವಕರನ್ನು ಮಹಮ್ಮದ್ ಹನೀಫ್ (24), ಮಹಮ್ಮದ್ ಸುಹೇದ್ (23), ಇಮ್ರಾನ್ ಪಾಷಾ (24), ಶಹೀದ್ ಕಲೀಮ್ (25) ಎಂದು ಗುರುತಿಸಲಾಗಿದೆ. ಸಾಧಿಕ್ ಮತ್ತು ಶಾಹಿಲ್ ಬದುಕುಳಿದ ಯುವಕರು ಎಂದು ತಿಳಿದುಬಂದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಸೈಕಲಿಂಗ್
ಮಂಗಳೂರು: ತಮ್ಮ ಕಚೇರಿಯ ಆವರಣದಲ್ಲೇ ಸೈಕಲ್ ಸವಾರಿ ನಡೆಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಎಲ್ಲರ ಗಮನ ಸೆಳೆದಿದ್ದಾರೆ.
ಮಂಗಳೂರು ಬೈಸಿಕಲ್ ಕ್ಲಬ್ (ಎಂಬಿಸಿ)ನ ಸದಸ್ಯರಾಗಿರುವ ಪತ್ರಕರ್ತ ಅನಿಲ್ ಕುಮಾರ್ ಶಾಸ್ತ್ರಿ ಸುದ್ದಿಗೋಷ್ಠಿಗೆ ಸೈಕಲ್ ನಲ್ಲೇ ಬಂದಿದ್ದರು. ಇದನ್ನು ನೋಡಿ ಫುಲ್ ಖುಷಿಯಾದ ಎಸ್.ಪಿ.ಯವರು ಸುದ್ದಿಗೋಷ್ಠಿ ಮುಗಿದ ಬಳಿಕ ಅನಿಲ್ರ ಸೈಕಲ್ ಏರಿ ಕಚೇರಿ ಸುತ್ತ ಒಂದು ರೌಂಡ್ ಹೊಡೆದರು.

ಸೈಕಲ್ ಹವ್ಯಾಸಿಗಳಾಗಿರುವ ಕೆಲ ಪತ್ರಕರ್ತರು ಕೂಡಾ ಎಂಬಿಸಿ ಸದಸ್ಯರಾಗಿದ್ದು, ಪ್ರತಿ ತಿಂಗಳ ಎರಡನೇ ಶನಿವಾರ ಕಾರು ಮುಕ್ತ ದಿನವಾಗಿ ಆಚರಿಸುತ್ತಾರೆ. ಇಂಧನ ಉಳಿತಾಯ, ವಾಹನ ದಟ್ಟಣೆ ಹಾಗೂ ಪರಿಸರ ಮಾಲಿನ್ಯ ಕಡಿಮೆಗೊಳಿಸುವ ಉದ್ದೇಶದಿಂದಲೇ ಈ ಸೈಕಲ್ ಹವ್ಯಾಸವನ್ನು ಜನಪ್ರಿಯಗೊಳಿಸುತ್ತಿದ್ದಾರೆ.
ಈ ಕಾರಣಕ್ಕಾಗಿಯೇ ಅನಿಲ್ ಸೈಕಲ್ ನಲ್ಲಿ ಸುದ್ದಿಗೋಷ್ಠಿಗೆ ಬಂದಿದ್ದರು. ಇದನ್ನು ನೋಡಿದ ಎಸ್ಪಿ ಫುಲ್ ಖುಷ್ ಆಗಿ ತಾವೂ ಕೂಡಾ ಸೈಕಲ್ ಸವಾರಿ ಮಾಡಿಯೇ ಬಿಟ್ಟರು.












Click it and Unblock the Notifications