ತುಳುನಾಡಿನಲ್ಲೊಂದು ವಿಶಿಷ್ಟ ಮೀನು ಹಿಡಿಯುವ ಖಂಡಿಗೆ ಜಾತ್ರೆ
ಮಂಗಳೂರು, ಮೇ 16 : ತುಳುನಾಡಿನಲ್ಲಿ ಪ್ರಸಿದ್ದ ಖಂಡೇವು ಅಡೆವು ಮೀನು ಹಿಡಿಯುವ ಜಾತ್ರೆ ನಡೆಯಿತು. ಧಾರ್ಮಿಕ ಹಿನ್ನಲೆಯಿರುವ ಈ ವಿಶಿಷ್ಠ ಮೀನು ಹಿಡಿಯುವ ಜಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಪ್ರತಿ ವರುಷ ಮೇ ತಿಂಗಳ ಸಂಕ್ರಮಣದಂದು ನಡೆಯುವ ಮೀನು ಹಿಡಿಯುವ ಜಾತ್ರೆ ಕರಾವಳಿ ಭಾಗದ ಒಂದು ವಿಶೇಷ ಆಚರಣೆ.
ತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಖಂಡೇವು ಅಡೆಪು ಎಂಬ ನಾಣ್ಣುಡಿ ಜಾರಿಯಲ್ಲಿದೆ. ಇದರ ಅರ್ಥ ಉಡುಪಿ ಜಿಲ್ಲೆಯ ಎರ್ಮಾಳು ದೇವಳದಲ್ಲಿ ಜಾತ್ರೆ ಪ್ರಾರಂಭಗೊಳ್ಳುವ ಮೂಲಕ ಅವಿಭಜಿತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜಾತ್ರೆಗಳು ಪ್ರಾರಂಭಗೊಂಡು ಖಂಡಿಗೆ ಶ್ರೀ ಧರ್ಮರಸು ಕ್ಷೇತ್ರದ ಜಾತ್ರೆಯೊಂದಿಗೆ ಎಲ್ಲಾ ಜಾತ್ರೆಗಳು ಮುಕ್ತಾಯವಾಗುತ್ತದೆ.
ಕಣ್ಮನ ಸೆಳೆವ ಕೊಡಗಿನ ಸಂಭ್ರಮದ ಬೋಡುನಮ್ಮೆ ಚಿತ್ತಾರ
ಸುರತ್ಕಲ್ ಸಮೀಪದ ಚೆಳೈರುವಿನ ಖಂಡಿಗೆ ಜಾತ್ರೆಯಲ್ಲಿ ಪಾವಂಜೆ ಬಳಿಯ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಸಾಮೂಹಿಕ ಜಾತ್ರೆಯು ಆ ಸಂಪ್ರದಾಯವನ್ನು ಇಂದಿಗೂ ಪಾಲಿಸುತ್ತಾ ಬಂದಿರುವುದು ವಿಶೇಷ.
ವೃಷಭ ಸಂಕ್ರಮಣದಂದು ಜಾತ್ರೆ
ಚೇಳಾಯರು ಗ್ರಾಮದ ಖಂಡಿಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಸು ಕ್ಷೇತ್ರವು ಪಾವಂಜೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಸಮೀಪ ನಂದಿನಿ ನದಿಯ ತಟದಲ್ಲಿದ್ದು, ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಪ್ರತಿ ವರ್ಷ ಮೇ ತಿಂಗಳಲ್ಲಿ ಬರುವ ವೃಷಭ ಸಂಕ್ರಮಣದಂದು ನಡೆಯುತ್ತದೆ.
ಈ ನದಿಯಲ್ಲಿ ಮೀನು ಹಿಡಿಯುವ ಪದ್ದತಿ ಹಿಂದಿನಿಂದಲೂ ಬೃಹತ್ ಮಟ್ಟದಲ್ಲಿ ನಡೆದುಕೊಂಡು ಬಂದಿದೆ. ವೃಷಭ ಸಂಕ್ರಮಣದಂದು ಬೆಳಿಗ್ಗೆ 7 ರ ಸುಮಾರಿಗೆ ದೈವಸ್ಥಾನದಲ್ಲಿ ದೈವಸ್ಥಾನಕ್ಕೆ ಸಂಭಂದಪಟ್ಟವರು ದೈವಕ್ಕೆ ಪ್ರಾಥನೆ ಸಲ್ಲಿಸಿ ನಂದಿನಿ ನದಿಯ ದಡಕ್ಕೆ ಆಗಮಿಸಿ ನದಿಗೆ ಪ್ರಸಾದ ಹಾಕಲಾಗುತ್ತದೆ ಅದೇ ಸಂದರ್ಭ ಸುಡು ಮದ್ದು ಸಿಡಿಸಲಾಗುತ್ತದೆ.
ಮೀನು ಹಿಡಿಯುವುದರಲ್ಲಿ ನಿರತ
ತಕ್ಷಣ ಮೀನು ಹಿಡಿಯಲು ಬಂದ ಜನರು ನದಿಗೆ ಧುಮುಕಿ ಮೀನು ಹಿಡಿಯಲು ತೊಡಗುತ್ತಾರೆ, ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನದವರೆಗೂ ಮೀನು ಹಿಡಿಯುವುದರಲ್ಲಿ ನಿರತರಾಗಿರುತ್ತಾರೆ.
ಇಲ್ಲಿಗೆ ಮೀನು ಹಿಡಿಯಲು ಬರುವ ಜನರು ಮಿತ್ರರೊಂದಿಗೆ, ಕುಟುಂಬದವರೊಂದಿಗೆ ಬಂದು ಗುಂಪು ಗುಂಪಾಗಿ ಮೀನುಗಳನ್ನು ಬಲೆಗೆ ಕೆಡವಿಕೊಂಡು ಸಿಕ್ಕ ಮೀನನ್ನು ಮನೆಗೆ ಕೊಂಡೊಯ್ಯು ತ್ತಾರೆ. ಇನ್ನು ಕೆಲವರು ಅಲ್ಲೆ ಕುಳಿತು ಮೀನನ್ನು ಮಾರಾಟ ಮಾಡುತ್ತಾರೆ.
ಇದಕ್ಕೆ ಜಾತಿ, ಮತ, ಧರ್ಮದ ಚೌಕಟ್ಟಿಲ್ಲ. ಎಲ್ಲರೂ ಮೀನು ಹಿಡಿಯುವುದನ್ನು ಪವಿತ್ರ ಕಾಯಕ ಎಂದೇ ಭಾವಿಸುತ್ತಾರೆ.
ಹಿಡಿದ ಮೀನು ಪ್ರೇತಾತ್ಮಗಳಿಗೆ
ಹಿಡಿದ ಮೀನನ್ನು ಮನೆಗೆ ತೆಗೆದು ಕೊಂಡು ಹೋಗಿ, ಸತ್ತ ತಮ್ಮ ಕುಟುಂಬದವರ ಪ್ರೇತಾತ್ಮಗಳಿಗೆ ಬಡಿಸುವ ಕ್ರಮ ಇಲ್ಲಿಯದು, ಇದು ಈಗಲೂ ಹೆಚ್ಚಿನ ಮನೆಗಳಲ್ಲಿ ಆಚರಿಸಿಕೊಂಡೂ ಬರುತ್ತಿದ್ದಾರೆ.
ಇಲ್ಲಿ ಬಲೆಗೆ ಬೀಳುವ ಮೀನುಗಳನ್ನು ಮಾರಾಟ ಮಾಡಿ ಸಾವಿರಾರು ರೂಪಾಯಿ ಸಂಪಾದಿಸುವ ಒಂದು ವರ್ಗವೂ ಇದೆ. ಭಾರೀ ಬೇಡಿಕೆ ಇರುವ ಇಲ್ಲಿನ ಮೀನುಗಳನ್ನು ಖರೀದಿಸುವ ಇನ್ನೊಂದು ವರ್ಗವೂ ಇದೆ.
ರುಚಿಕರವಾದ ಮೀನು
ಖಂಡೇವು ಮೀನು ವರ್ಷಕ್ಕೊಮ್ಮೆ ಸೇವಿಸಲೇಬೇಕು ಎಂದು ಭಾವಿಸುವವರು ಅದರ ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವರ್ಷದಲ್ಲಿ ಒಂದು ದಿನ ಇಲ್ಲಿನ ಮೀನನ್ನು ಪದಾರ್ಥ ಮಾಡಿ ತಿನ್ನುವುದೇ ಇಲ್ಲಿನ ದೈವದ ಪ್ರಸಾದವೆಂದು ಇಲ್ಲಿನ ಭಕ್ತರು ನಂಬುವುದರಿಂದ ಜಾತ್ರೆಗೆ ವಿಶೇಷ ಪ್ರಾಮುಖ್ಯತೆ ದೊರೆತಿದೆ. ಅಲ್ಲದೆ ಇಲ್ಲಿನ ಮೀನು ಅತ್ಯಂತ ರುಚಿಕರವಾಗಿರುತ್ತದೆ.
ನಂಬಿಕೆ ಮೀರಿ ನಡೆದಾಗ
ಮೇಷ ಸಂಕ್ರಮಣ ದಿಂದ ವ್ರಷಭ ಸಂಕ್ರಮಣದ ತನಕ ಇಲ್ಲಿ ಮೀನು ಹಿಡಿಯಲು ನಿಷೇಧವಿದೆ. ಮೇಷ ಸಂಕ್ರಮಣದಂದು ನದಿಗೆ ಪ್ರಸಾದ ಹಾಕಿದ ನಂತರ ಇಲ್ಲಿ ಮೀನು ಹಿಡಿಯುದನ್ನು ನಿಲ್ಲಿಸಲಾಗುತ್ತದೆ.
ಇದನ್ನು ಮೀರಿ ನಡೆಯುವಂತಿಲ್ಲ. ಈ ಹಿಂದೆ ಈ ನಂಬಿಕೆಯನ್ನು ಮೀರಿ ಮೀನು ಹಿಡಿದ ಪರಿಣಾಮ ಮೀನು ಹಿಡಿಯುತ್ತಿದ್ದ ಬಲೆಯಲ್ಲಿ ನಾಗರಹಾವು ಬಂದ ಉದಾಹರಣೆಗಳಿವೆಯಂತೆ.