ಡಿವಿಎಸ್ ಆಸ್ತಿ ಹೆಚ್ಚಳ, ಸಚಿವರ ಸ್ಪಷ್ಟನೆಗಳು
ಮಂಗಳೂರು, ಅ.27 : 'ಕೇಂದ್ರ ಸಚಿವರ ಕೋಟಿ ರೂ. ಅಸ್ತಿ ಗಳಿಕೆ', 'ಕೇಂದ್ರ ರೈಲ್ವೇ ಸಚಿವರ ಅಸ್ತಿ ದ್ವಿಗುಣ' ಎಂಬ ವರದಿಗಳು ಕಳೆದ ಮೂರು ದಿನಗಳಿಂದ ಪ್ರಕಟವಾಗುತ್ತಿದ್ದು, ಇದರಿಂದ ತನಗೆ ತುಂಬಾ ನೋವಾಗಿದೆ ಎಂದು ರೈಲ್ವೆ ಸಚಿವ ಸದಾನಂದ ಗೌಡ ಹೇಳಿದ್ದಾರೆ. ಆಸ್ತಿ ಖರೀದಿ ಪಾರದರ್ಶಕವಾಗಿ ನಡೆದಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನ ತಮ್ಮ ನಿವಾಸದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಸದಾನಂದ ಗೌಡರು ಆಸ್ತಿ ಮೌಲ್ಯ ಹೆಚ್ಚಾಗಲು ಕಾರಣವೇನೆಂದು ದಾಖಲೆ ಸಮೇತ ಮಾಹಿತಿ ನೀಡಿದರು. ಮಂತ್ರಿ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಹೇಳಿದರು.

ಪ್ರಸ್ತುತ ಕೇಳಿಬಂದಿರುವ 10 ಕೋ. ರೂ. ಆಸ್ತಿ ಹೆಚ್ಚಳ ಬ್ಯಾಂಕ್ನಿಂದ ಪಡೆದ ಸಾಲದಿಂದ ಖರೀದಿಸಿದ್ದು. ಇದಕ್ಕೆ ಪೂರಕ ಎಲ್ಲ ದಾಖಲೆಪತ್ರಗಳು ಇವೆ ಎಂದು ಹೇಳಿದ ಸದಾನಂದ ಗೌಡರು, ಸಾರ್ವಜನಿಕ ರಂಗದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ವಿಚಾರಗಳ ಸತ್ಯಾಸತ್ಯತೆಗಳನ್ನು ಸಾರ್ವಜನಿಕರಿಗೆ ಈ ಮೂಲಕ ವಿವರಿಸುತ್ತಿದ್ದೇನೆ ಎಂದರು. [ಕೇಂದ್ರ ಸಚಿವರ ಆಸ್ತಿಯಲ್ಲಿ ದಿಢೀರ್ ಏರಿಕೆ]
ಗೌಡರು ನೀಡಿದ ಸ್ಪಷ್ಟನೆಗಳು : ಬೆಂಗಳೂರಿನಲ್ಲಿ ಕಟ್ಟಡ ಖರೀದಿ ಮಾಡಲು ಫೆಡರಲ್ ಬ್ಯಾಂಕ್ನಿಂದ 8 ಕೋ. ರೂ. ಸಾಲ ಹಾಗೂ ಕಟ್ಟಡವನ್ನು ಬಾಡಿಗೆಗೆ ನೀಡಿರುವ ರಾಮಯ್ಯ ಫೌಂಡೇಶನಿಂದ 2 ಕೋ. ರೂ. ಬಾಡಿಗೆ ಮುಂಗಡ ಪಡೆದಿರುವುದರಿಂದ ಒಟ್ಟು 10 ಕೋಟಿ ರೂ. ಆಸ್ತಿ ಹೆಚ್ಚಳವಾಗಿದೆ.

2013ರ ಸೆಪ್ಟೆಂಬರ್ನಲ್ಲಿ ಫೆಡರಲ್ ಬ್ಯಾಂಕ್ನ್ನು ಸಾಲಕ್ಕಾಗಿ ಸಂಪರ್ಕಿಸಿದ್ದೆ. ನ. 20ಕ್ಕೆ ಸಾಲ ಮಂಜೂರಾಯಿತು. ಆದರೆ, ಈ ಸಮಯದಲ್ಲಿ ಚುನಾವಣೆ ಎದುರಾಗಿದ್ದರಿಂದ ಬಾಡಿಗೆದಾರರ ಜತೆ ಮಾತುಕತೆಗೆ ತಡೆಬಿದ್ದಿತ್ತು. ಚುನಾವಣೆ ಮುಗಿದು ಮತ ಎಣಿಕೆ ನಡುವೆ ವಿರಾಮದ ಅವಧಿಯಲ್ಲಿ ಮತ್ತೆ ವ್ಯವಹಾರ ಮುಂದುವರಿಸಿ 2014ರ ಮೇ 23ರಂದು ಸಾಲ ಪಡೆದುಕೊಳ್ಳಲಾಗಿದೆ.
ಪಾದರ್ಶಕವಾಗಿ ಖರೀದಿ : ಕಟ್ಟಡದ ಬಾಡಿಗೆ ಹಣ ನೇರವಾಗಿ ಬ್ಯಾಂಕ್ಗೆ ಪಾವತಿಯಾಗಿ ಸಾಲಕ್ಕೆ ಜಮೆಯಾಗುತ್ತದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಈ ಆಸ್ತಿ ಸೇರ್ಪಡೆಯಾಗಿರಲಿಲ್ಲ. ಚುನಾವಣೆ ನಡೆದು ಮತ ಎಣಿಕೆ ಅವಧಿಯಲ್ಲಿ ವ್ಯವಹಾರ ನಡೆದಿದ್ದು, ಎಲ್ಲವೂ ಕಾನೂನುಬದ್ದವಾಗಿ ಮತ್ತು ಪಾರದರ್ಶಕವಾಗಿ ನಡೆದಿದೆ.
ಕಳೆದ ಎರಡು ಮೂರು ತಿಂಗಳಿನಿಂದ ನಡೆಯುತ್ತಿರುವ ಹಲವಾರು ವಿದ್ಯಾಮಾನಗಳಿಂದ ತಾನು ಕೂಡ ರಾಜಕೀಯದಲ್ಲಿ ಸಂಶಯಿತ ವ್ಯಕ್ತಿಯಾಗಿ ಪರಿವರ್ತನೆಯಾಗಿದ್ದೇನೆ ಎಂದು ಅನ್ನಿಸುತ್ತಿದೆ. ತನ್ನ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿವೆ. ಇತ್ತೀಚಿನ ದಿನಗಳಲ್ಲಿ ಹಲವು ಆತಂಕಗಳು, ಅಡಚಣೆಗಳು ಎದುರಾಗುತ್ತಿವೆ. ಎಲ್ಲವನ್ನೂ ಸುಧಾರಿಸಿಕೊಂಡು ಹೋಗುವ ನಿರ್ಧಾರ ಮಾಡಿದ್ದೇನೆ ಎಂದು ಸಚಿವರು ಹೇಳಿದರು.












Click it and Unblock the Notifications