ಖಂಡಾಲ ಘಾಟ್ ರಸ್ತೆಯಂತೆ ಚಾರ್ಮಾಡಿ ಘಾಟ್ ರಸ್ತೆ ಅಭಿವೃದ್ಧಿ
ಮಂಗಳೂರು, ಆಗಸ್ಟ್ 30: ಚಾರ್ಮಾಡಿ ಘಾಟ್ ನಲ್ಲಿ ಇಂದಿನಿಂದ ಮತ್ತೆ ವಾಹನ ಸಂಚಾರ ಆರಂಭಗೊಂಡಿದೆ. ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಚಿಕ್ಕಮಗಳೂರಿನಿಂದ ಮಂಗಳೂರು, ಉಡುಪಿ, ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಚಾರ್ಮಾಡಿ ಘಾಟಿ ರಸ್ತೆಯ ಹಲವು ಕಡೆ ಗುಡ್ಡ ಕುಸಿದಿದ್ದ ಪರಿಣಾಮ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೆ ಇಂದಿನಿಂದ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರ ಆರಂಭಗೊಂಡಿದೆ.
ಪ್ರತಿವರ್ಷ ಭೂಕುಸಿತ ಉಂಟಾಗಿ ವಾಹನ ಸಂಚಾರ ಬಂದ್ ಭಾರೀ ಸಮಸ್ಯೆಗೆ ಕಾರಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆಗೆ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದೆ. ಮಹಾರಾಷ್ಟ್ರದ ಖಂಡಾಲ ಘಾಟ್ ಪ್ರಾಜೆಕ್ಟ್ ಮಾದರಿಯಲ್ಲಿ ಶಾಶ್ವತವಾಗಿ ರಸ್ತೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
2 ತಿಂಗಳು ಚಾರ್ಮಾಡಿ ಘಾಟ್ ಸಂಪರ್ಕ ಕಡಿತ?
ಇತ್ತೀಚೆಗೆ ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಲವಾರು ಕಡೆ ಭೂ ಕುಸಿತ ಸಂಭವಿಸಿದೆ. ಚಾರ್ಮಾಡಿ ಭಾಗದಲ್ಲೂ ತೀವ್ರ ಮಳೆಗೆ ಗುಡ್ಡ ಕುಸಿದು ಬಿದ್ದಿದ್ದು, ಶಿರಾಡಿ ಘಾಟ್ ನಲ್ಲೂ ಅದೇ ಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗ ಚಾರ್ಮಾಡಿ ಘಾಟ್ ರಸ್ತೆಯಾಗಿರುವ ಕಾರಣ ಇಲ್ಲಿ ಪ್ರತಿ ಬಾರಿ ಮಳೆಗಾಲದ ಸಂದರ್ಭ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಹಾನಿ, ಭೂಕುಸಿತ ಸಂಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬಂತೆ ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಶ್ವತ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳಿಂದ ಈಗಾಗಲೆ ಸರ್ವೇ ನಡೆದಿದ್ದು, 2017ರಲ್ಲಿ ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಸರ್ಕಾರದ ಮಂಜೂರಾತಿ ದೊರೆತಿರಲಿಲ್ಲ. ಕುಸಿದ ರಸ್ತೆ ಹಾಗೂ ರಸ್ತೆ ಗುಣಮಟ್ಟ ಸಂಚಾರಕ್ಕೆ ಯೋಗ್ಯವಿಲ್ಲದ ಕಾರಣ ಘಾಟ್ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಗೊಂಡಿರುವುದರಿಂದ ಯೋಜನೆಗೆ ತ್ವರಿತಗತಿಯ ಅನುಮೋದನೆ ಸಿಗುವ ನಿರೀಕ್ಷೆ ಇದೆ.
ಖಂಡಾಲ ಘಾಟ್ ಪ್ರಾಜೆಕ್ಟ್ ಪರಿಸರ ಹಾಗೂ ಭೂ ಸಂರಚನೆಗೆ ಹೆಚ್ಚಿನ ಹಾನಿ ಮಾಡದ ರೀತಿ ನಿರ್ಮಾಣವಾಗಿರುವುದರಿಂದ ಪಶ್ಚಿಮಘಟ್ಟ ಪ್ರದೇಶಗಳ ಮೂಲಕ ಹಾದುಹೋಗುವ ರಸ್ತೆಗಳಿಗೆ ಹೇಳಿ ಮಾಡಿಸಿದ ಯೋಜನೆಯಾಗಿದೆ. ಇದೇ ಯೋಜನೆ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ನಿರ್ಮಾಣಗೊಂಡರೆ 10 ಮೀಟರ್ ಅಗಲದ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ.