ನನಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ, ಬಿಜೆಪಿ ಗೆಲ್ಲಿಸಬೇಡಿ: ಡಿಕೆಶಿ
Recommended Video
ಮಂಡ್ಯ, ನವೆಬರ್ 28: ನನಗೆ ಹಾಗೂ ನನ್ನ ಕುಟುಂಬಕ್ಕೆ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ, ಹೀಗಾಗಿ ಬಿಜೆಪಿಯ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಗೆಲ್ಲಿಸಬಾರದು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತದಾರರಿಗೆ ಹೇಳಿದ್ದಾರೆ.

ನನ್ನ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದೇಕೆ
ನನ್ನ ಶಕ್ತಿಯನ್ನು ಕುಗ್ಗಿಸೋಕೆ ಬಿಜೆಪಿಯವರು ನಿರಂತರ ಪ್ರಯತ್ನ ಮಾಡಿದರು, ಆದರೆ ನನಗೆ ನಿಮ್ಮೆಲ್ಲರ ಆಶೀರ್ವಾದ ಇರುವ ತನಕ ಯಾರೂ ಎನೂ ಮಾಡಲಾಗುವುದಿಲ್ಲ, ನಾನು ಮುಂದಿನ ದಿನಗಳಲ್ಲಿ ತಿರುಗೇಟು ನೀಡುತ್ತೇನೆ ಎಂದು ತಿಳಿಸಿದರು.
ಮಂಡ್ಯದ ಕೆ.ಆರ್.ಪೇಟೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನನ್ನು ಬೇಕು ಅಂತಲೇ ಇಡಿ ಸಂಕಷ್ಟದಲ್ಲಿ ಸಿಲುಕಿಸಲಾಯಿತು, ನನ್ನನ್ನು ತಿಹಾರ್ ಜೈಲಿಗೂ ಕಳುಹಿಸಿದರು ಎಂದು ಹರಿಹಾಯ್ದರು.

ರಾಜ್ಯದಲ್ಲಿ ಅಪವಿತ್ರ ಸರ್ಕಾರ
ಅಲ್ಲದೇ ಏನು ತಪ್ಪು ಮಾಡದ ನನ್ನ ಕುಟುಂಬಕ್ಕೂ ಕಷ್ಟ ಕೊಟ್ಟರು ಎಂದು ಹೇಳಿದರು. ನಿಮ್ಮೆಲ್ಲರ ಹಾರೈಕೆ ಮತ್ತು ಪೂಜಾಫಲದಿಂದ ಮತ್ತೆ ನಿಮ್ಮ ಎದುರಿಗೆ ನಿಂತಿದ್ದೇನೆ ಎಂದರು.
ಮೈತ್ರಿ ಸರ್ಕಾರ ಪತನದ ಬಗ್ಗೆ ಕೆಲವರು ನಾನಾ ಹೇಳಿಕೆಗಳನ್ನು ಕೊಡುತ್ತಿದ್ದಾರೆ, ನಾರಾಯಣಗೌಡ ರಾಜೀನಾಮೆ ನೀಡಲು ನಾನು ಕಾರಣ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಪತನಗೊಂಡಿರುವುದರಿಂದ ನಾರಾಯಣಗೌಡಗೆ ನಿದ್ದೆ ಬರ್ತಿಲ್ಲ ಎಂದು ಕುಟುಕಿದರು.

ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ
ಕೆ.ಆರ್.ಪೇಟೆ ಕ್ಷೇತ್ರವನ್ನು ಶಿಕಾರಿಪುರ ರೀತಿ ಅಭಿವೃದ್ದಿ ಮಾಡುತ್ತೇನೆ ಎಂದು ಹೇಳುತ್ತಾರೆ, ಹಾಗಾದರೆ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಏಕೆ ತವರು ಕ್ಷೇತ್ರ ನೆನಪಾಗಲಿಲ್ಲ ಎಂದು ಪ್ರಶ್ನಿಸಿದರು. ಈಗ ಬೇರೆ ಪಕ್ಷದ ಶಾಸಕರನ್ನು ಸೆಳೆದು ಸರ್ಕಾರ ರಚನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಹುಣಸೂರು ಕ್ಷೇತ್ರದಲ್ಲಿ ಸಮ್ಮನೆ ನಿಲ್ಲಬೇಕು ಎಂದು ಚುನಾವಣೆಗೆ ನಿಂತಿದ್ದಾರೆ, ಅವರು ಪ್ರಚಾರಕ್ಕೆ ಹೋದರೆ ಎರಡು ವ್ಯಾನ್ ಗಳಲ್ಲಿ ಪೊಲೀಸರನ್ನು ಕರೆದುಕೊಂಡು ಹೋಗಿ ಪ್ರಚಾರ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪೊಲೀಸರು ಮತ್ತು ಅಧಿಕಾರಿಗಳನ್ನು ಇಟ್ಟುಕೊಂಡು ಎಲೆಕ್ಷನ್ ಮಾಡೋಕೆ ಆಗಲ್ಲ, ಓಟ್ ಹಾಕೋರು ಮತದಾರರು.

ಜೆಡಿಎಸ್ ಮೇಲೆ ದ್ವೇಷವಿಲ್ಲ
ರಾಜ್ಯದ ಉಪ ಚುನಾವಣೆಯನ್ನು ಇಡೀ ದೇಶ ಗಮನಿಸುತ್ತಿದೆ, ಅನರ್ಹರಿಗೆ ತಕ್ಕ ಪಾಠ ಕಲಿಸಬೇಕೆಂದರು. ಕಾಂಗ್ರೆಸ್ ಕಾರ್ಯಕರ್ತನಾಗಿ ಹೇಳುತ್ತೇನೆ ಮತ್ತೆ ನಾರಾಯಣಗೌಡನನ್ನು ವಿಧಾನಸೌಧ ಮೆಟ್ಟಿಲು ಹತ್ತಿಸಬಾರದು ಎಂದು ಕರೆ ನೀಡಿದರು.
ನನ್ನನ್ನು ಕೆ.ಆರ್.ಪೇಟೆ ಕ್ಷೇತ್ರಕ್ಕೆ ಬರಬಾರದೆಂದು ಜೆಡಿಎಸ್ ನವರು ತಡೆಹಿಡಿದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು, ಆದರೆ ನನ್ನ ಯಾರು ತಡೆ ಹಿಡಿದಿಲ್ಲ, ಹುಣಸೂರಿನಿಂದ ಬರುವುದು ಸ್ವಲ್ಪ ವಿಳಂಬವಾಯಿತು ಅಷ್ಟೇ ಎಂದರು.ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನಗೆ ಶಕ್ತಿ ತುಂಬಿರಿ ಎಂದರು.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಅನರ್ಹ ಶಾಸಕ ನಾರಾಯಣಗೌಡ, ಕಾಂಗ್ರೆಸ್ ನಿಂದ ಕೆ.ಬಿ,ಚಂದ್ರಶೇಖರ್ ಮತ್ತು ಜೆಡಿಎಸ್ ನಿಂದ ಬಿ.ಎಲ್.ದೇವರಾಜ್ ಉಪ ಚುನಾವಣಾ ಆಖಾಡದಲ್ಲಿದ್ದಾರೆ. ಡಿಸೆಂಬರ್ 05 ರಂದು ಮತದಾನ ನಡೆಯಲ್ಲಿದ್ದು, ಡಿಸೆಂಬರ್ ೦೯ ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications