ಮಂಡ್ಯ : ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ಕಾಂಗ್ರೆಸ್ ಅಭ್ಯರ್ಥಿ?
ಮಂಡ್ಯ, ಏಪ್ರಿಲ್ 23 : ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು?. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಈ ಕುರಿತು ಸ್ಪಷ್ಟನೆ ಸಿಕ್ಕಿಲ್ಲ. ಮಾಜಿ ಸಚಿವ ಅಂಬರೀಶ್ ನಿರ್ಧಾರ ಏನು? ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ಮೈಸೂರಿನಲ್ಲಿ ಭಾನುವಾರ ಅಂಬರೀಶ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರು ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗೆ ಸಿಗದೇ ಮೈಸೂರಿನಿಂದ ಅಂಬರೀಶ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
'ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅಂಬರೀಶ್ ಆಪ್ತರ ಬಳಿ ಹೇಳಿದ್ದಾರೆ' ಎಂದು ತಿಳಿದುಬಂದಿದೆ. ಇಂದು ಪತ್ರಿಕಾಗೋಷ್ಠಿ ನಡೆಸಿ ಅಂಬರೀಶ್ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹಾಗಾದರೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು?.

ಅಮರಾವತಿ ಚಂದ್ರಶೇಖರ್ : ಅಂಬರೀಶ್ ಅವರ ಆಪ್ತ ಅಮರಾವತಿ ಚಂದ್ರಶೇಖರ್ ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿ?. 'ಅಂಬರೀಶ್ ಸ್ಪರ್ಧೆ ಮಾಡಲ್ಲ. ನಾನು ಸ್ಪರ್ಧೆ ಮಾಡುವೆ. ಸೋಮವಾರ ಮಂಡ್ಯ ಕ್ಷೇತ್ರದ ಬಿ ಫಾರಂ ನನ್ನ ಕೈ ಸೇರಲಿದೆ?' ಎಂದು ಅಮರಾವತಿ ಚಂದ್ರಶೇಖರ್ ಹೇಳಿದ್ದಾರೆ.
'ಅಂಬರೀಶ್ ಶಾಸಕರಾಗಿದ್ದಾಗ ನಾನು ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ. ಅಂಬರೀಶ್ ಸ್ಪರ್ಧೆ ಮಾಡಲ್ಲ ಎಂದರೆ ಅವರ ಬದಲು ನನಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಟಿಕೆಟ್ ಸಿಕ್ಕರೆ ಗೆದ್ದು ಬರುವೆ' ಎಂದು ಅಮರಾವತಿ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ನನಗೆ ಆರೋಗ್ಯ ಸರಿ ಇಲ್ಲ ನೀನು ಚುನಾವಣೆಗೆ ಸ್ಪರ್ಧಿಸು ಎಂದು ಅಂಬರೀಶ್ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಅಂಬರೀಶ್ ಅವರು ಸ್ಪಷ್ಟನೆ ನೀಡಲಿದ್ದಾರೆ' ಎಂದು ಅಮರಾವತಿ ಚಂದ್ರಶೇಖರ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಗೆ ನಾಮಪತ್ರವನ್ನು ಸಲ್ಲಿಕೆ ಮಾಡಲು ಏ.24ರ ಮಂಗಳವಾರ ಕೊನೆಯ ದಿನವಾಗಿದೆ. ಆದರೆ, ಮಂಡ್ಯ ಕ್ಷೇತ್ರ ಅಭ್ಯರ್ಥಿ ಯಾರು? ಎಂಬುದು ಇಲ್ಲಿಯ ತನಕ ಅಂತಿಮಗೊಂಡಿಲ್ಲ.












Click it and Unblock the Notifications