ಸಿಎಂ ಆಗುವ ಬಯಕೆಯನ್ನು ಬಿಚ್ಚಿಟ್ಟ ಡಿಕೆ ಶಿವಕುಮಾರ್
ಮಂಡ್ಯ, ಮೇ 3 : ಈಗಾಗಲೇ ನಾನೂ ಸಿಎಂ ಅಭ್ಯರ್ಥಿ ಎಂದು ಹೇಳುತ್ತಾ ಓಡಾಡುತ್ತಿರುವ ಸಿದ್ದರಾಮಯ್ಯ ಸೇರಿದಂತೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರಲ್ಲದೆ ತಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಮದ್ದೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಪರ ರೋಡ್ ಶೋ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ ಓಟ್ ಹಾಕಿ ಅಂತಾರೆ. ಹಾಗಾದ್ರೆ ನಾನೇನಿಲ್ವಾ? ನನಗೇನು ಸಿಎಂ ಆಗೋ ಸಾಮರ್ಥ್ಯವಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ತಮ್ಮ ಒಳಗಿನ ಬಯಕೆಯನ್ನು ಹೊರಹಾಕಿದ್ದಾರೆ.

ಗೌಡರ ಕುಟುಂಬದವರು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯೂ ಆಗಿದ್ದರು. ಅವರ ಅವಧಿಯಲ್ಲಿ ಮಂಡ್ಯಕ್ಕೆ ಏನು ಮಾಡಿದ್ದಾರೆ ಹೇಳಬೇಕಲ್ವಾ? ಎಂದು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ದೂರಿದರು.
ಇದೇನು ಪಂಚಾಯಿತಿ ಕೆಟ್ಟೋಯ್ತಾ? ನಾನೇ ಮುಂದಿನ ಮುಖ್ಯಮಂತ್ರಿ ಅಂದ್ರೆ ಜನ ದಡ್ಡರಾ? ಇವೆಲ್ಲ ಆಗದಿರೋ ಕಥೆ. ಡಿ.ಸಿ. ತಮ್ಮಣ್ಣ ಅವರು ಇಷ್ಟು ವರ್ಷಗಳ ಕಾಲ ಶಾಸಕರಾಗಿದ್ದು ಸಾಕು. ಅವರಿಗೆ ರೆಸ್ಟ್ ಕೊಡಿ, ಮಧು ಮಾದೇಗೌಡ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಒಟ್ಟಾರೆ ಡಿಕೆಶಿ ಅವರ ಮಾತು ಅವರಲ್ಲಿ ಸುಪ್ತವಾಗಿದ್ದ ಮುಖ್ಯಮಂತ್ರಿಯಾಗುವ ಬಯಕೆಯನ್ನು ಹೊರ ಹಾಕಿರುವುದಂತು ಸತ್ಯ. ಮುಂದೆ ಏನಾಗುತ್ತೆ ನೋಡೋಣ. ಮುಖ್ಯಮಂತ್ರಿಯಾಗುವ ಡಿಕೆಶಿ ಕನಸು ನನಸಾಗುತ್ತಾ?











Click it and Unblock the Notifications