ನೀರು ಬಿಡದೆ ಜೈಲಿಗೆ ಹೋಗಲು ಸಿದ್ಧರಾಗಿ : ಮಾದೇಗೌಡ
ಮಂಡ್ಯ, ಸೆಪ್ಟೆಂಬರ್ 30 : ಕಾವೇರಿ ನೀರನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗಲೂ ಸಿದ್ಧರಾಗಿರಬೇಕು. ಜೊತೆಯಲ್ಲಿ ನಾವೂ ಬರುತ್ತೇವೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ. ಮಾದೇಗೌಡ ಅವರು ಕರೆ ನೀಡಿದ್ದಾರೆ.
ಕಾವೇರಿ ಜಲಾಶಯಗಳಲ್ಲಿರುವ ನೀರು ಕುಡಿಯುವ ನೀರಿಗೆ ಮಾತ್ರ ಎಂದು ಜಂಟಿ ಅಧಿವೇಶನದಲ್ಲಿ ಒಕ್ಕೊರಲಿನಿಂದ ನಿರ್ಣಯ ಮಾಡಿ ಆಗಿದೆ. ಅದು ಇಡೀ ರಾಜ್ಯದ ಜನರ ಆದೇಶ. ಅದಕ್ಕೆ ವಿರುದ್ಧವಾಗಿ ನಡೆಯುವುದು ಬೇಡ ಎಂದು ಅವರು ಶುಕ್ರವಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ನೀರಿನ ವಿವಾದ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ನೀಡಿರುವ ಆದೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿಗೆ ಸದ್ಯ ನೀರು ಬಿಡದಿರುವ ನಿರ್ಧಾರ ಮಾಡಿದ್ದಾರೆ. ಆ ನಿರ್ಣಯಕ್ಕೆ ಅವರು ಬದ್ಧರಾಗಿದ್ದಾರೆ. ಒಮ್ಮೆ ನೀರು ಬಿಟ್ಟರೆ ಉಗ್ರ ಹೋರಾಟ ನಮಗೆ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು. [ಸುಪ್ರೀಂ ಆದೇಶದ ವಿರುದ್ಧ ಮಂಡ್ಯದಲ್ಲಿ ಬೊಗಸೆ ಚಳವಳಿ]

ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾಗಬಾರದು. ಅದು ಜಿಲ್ಲೆಯ ಜನರಿಗೆ ಮಾರಕ ತೀರ್ಮಾನ. ನೀರು ಬಿಡದೆ ಜೈಲಿಗೆ ಹೋಗೋಣ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸೋಣ. ನೀರು ಬಿಡುವ ತೀರ್ಮಾನ ಮಾಡಿ ಸುಖಾಸುಮ್ಮನೆ ಜನರನ್ನು ಕೆಣಕುವುದು ಬೇಡ ಎಂದು ಅವರು ಸರಕಾರಕ್ಕೆ ಕಿವಿಮಾತು ಹೇಳಿದರು.
ನಮ್ಮ ನಿಲುವನ್ನೂ ಧಿಕ್ಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀರು ಬಿಡುಗಡೆ ಮಾಡಿದರೆ ಮುಂದೆ ಹೋರಾಟ ಇದ್ದೇ ಇದೆ, ಅದು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಮಾದೇಗೌಡರು ಮಾಧ್ಯಮಗಳಿಗೆ ಹೇಳಿದರು. ಸುಪ್ರೀಂ ಆದೇಶ ಹೊರಬೀಳುತ್ತಿದ್ದಂತೆ ಮಂಡ್ಯದಲ್ಲಿ ಪ್ರತಿಭಟನೆ ತೀವ್ರವಾಗುತ್ತಿದೆ. ರೈತರೆಲ್ಲ ಬೀದಿಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ. [ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕರ್ನಾಟಕಕ್ಕೆ ಆಘಾತ!]












Click it and Unblock the Notifications