ಮದ್ದೂರಲ್ಲಿ ಟೆಕ್ಕಿಗಳ ಮದುವೆಗೆ ನಾಟಿ ತಳಿ ಕರುಗಳ ಉಡುಗೊರೆ
ಮದ್ದೂರು, ಡಿಸೆಂಬರ್ 10 : ಸಾಮಾನ್ಯವಾಗಿ ಮದುವೆಯ ವೇಳೆಯಲ್ಲಿ ವಧು-ವರರಿಗೆ ಬೇರೆ ಬೇರೆ ರೀತಿಯ ಉಡುಗೊರೆ ನೀಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಮದ್ದೂರಿನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ನೂತನ ವಧು-ವರರಿಗೆ ಉಡುಗೊರೆಯಾಗಿ ನಾಟಿ ಕರುವನ್ನು ನೀಡಿರುವುದು ವಿಶೇಷವಾಗಿದೆ.
ಖಾಸಗಿ ಸಮುದಾಯ ಭವನದಲ್ಲಿ ಟೆಕ್ಕಿಗಳಾದ ಕಿರಣ್ ಕುಮಾರ್ ಹಾಗೂ ನಾಗಶ್ರೀ ಅವರ ವಿವಾಹ ಸಮಾರಂಭ ಏರ್ಪಡಾಗಿತ್ತು. ಇವರಿಗೆ ಬಯಲು ಸೀಮೆ ಬೆಳೆಗಾರರ ಸಂಘ ಹಾಗೂ ನಿರ್ಮಲ ಧರಿತ್ರಿ ರೈತ ಒಕ್ಕೂಟದ ಸದಸ್ಯರು ನಾಟಿ ತಳಿಯ ಎರಡು ಕರುಗಳನ್ನು ಉಡುಗೊರೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ, ಸಿಬಿಐ ಮುಂದಿದೆ ಸವಾಲು
ಭಾನುವಾರ ರಾತ್ರಿ ಸಮುದಾಯ ಭವನದಲ್ಲಿ ಆರತಕ್ಷತೆ ಕಾರ್ಯ ನಡೆಯುತ್ತಿತ್ತು. ಅವರಿಗೆ ಉಡುಗೊರೆಯಾಗಿ ಮದುವೆಗೆ ಬಂದಿದ್ದವರು ಬೇರೆ ಬೇರೆ ರೀತಿಯ ಉಡುಗೊರೆಯನ್ನು ನೀಡುತ್ತಿದ್ದರು. ಈ ವೇಳೆ ಮದುವೆ ಮಂಟಪಕ್ಕೆ ಎರಡು ದೇಸಿ ತಳಿ ಕರುಗಳೊಂದಿಗೆ ಆಗಮಿಸಿದವರನ್ನು ಕಂಡು ಎಲ್ಲರು ಅಚ್ಚರಿಪಟ್ಟರು. ಆದರೆ ವಧು-ವರರಿಗೆ ಇವುಗಳನ್ನು ಉಡುಗೊರೆಯಾಗಿ ಕೊಡಲು ತಂದಿದ್ದಾರೆ ಎನ್ನುವುದು ನೆರೆದ ಬಹಳಷ್ಟು ಜನರಿಗೆ ಗೊತ್ತಾಗಲೇ ಇಲ್ಲ. ಬಳಿಕ ವಧು-ವರರಿಗೆ ಉಡುಗೊರೆಯಾಗಿ ನೀಡಲು ಕರುಗಳನ್ನು ತರಲಾಗಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ನೆರೆದವರಿಗೆ ಅಚ್ಚರಿಯೋ ಅಚ್ಚರಿ.
ವಾಯುವಿಹಾರಕ್ಕೆಂದು ಹೋದ ಟೆಕ್ಕಿ ಬೆಂಗಳೂರಿನಲ್ಲಿ ನಿಗೂಢ ನಾಪತ್ತೆ
ಇಷ್ಟಕ್ಕೂ ವಧು-ವರರಿಗೆ ದೇಸಿ ಕರುಗಳನ್ನು ಉಡುಗೊರೆಯಾಗಿ ನೀಡಲು ಕಾರಣವೂ ಇದೆ. ಅದೇನೆಂದರೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗಳಾದ ಕಿರಣ್ ಕುಮಾರ್ ಹಾಗೂ ನಾಗಶ್ರೀ ಅವರು, ಸಾವಯವ ಕೃಷಿ ಪದ್ಧತಿಯ ಬೆಳೆಗಳನ್ನು ರಾಜಧಾನಿಯಲ್ಲಿ ಮಾರಾಟ ಮಾಡಲು ಸಹಾಯ ಮಾಡುತ್ತಿದ್ದಾರೆ. ರೈತರ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಬಿಡುವಿನ ವೇಳೆಯಲ್ಲಿ ಮಾರಾಟ ಮಾಡುವ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಈ ಅಪರೂಪದ ಉಡುಗೊರೆ ನೀಡಿರುವುದಾಗಿ ಕೃಷಿಕರು ಹೇಳುವ ಮೂಲಕ ಎಲ್ಲರ ಅಚ್ಚರಿಗೆ ತೆರೆ ಎಳೆದಿದ್ದಾರೆ.