ತಮಿಳುನಾಡಿನಲ್ಲಿ ಮಂಡ್ಯದ ಬಾಲಾಜಿ ವಿಗ್ರಹ ಪತ್ತೆ: ಪೊಲೀಸರ ಶೋಧ ಕಾರ್ಯ ಹೇಗಿತ್ತು?
ಮಂಡ್ಯ, ನವೆಂಬರ್, 10: ಮಂಡ್ಯ ಜಿಲ್ಲೆಯಿಂದ ಬಾಲಾಜಿ ವಿಗ್ರಹವನ್ನು ಕಳ್ಳತನ ಮಾಡಿ ತಮಿಳುನಾಡಿಗೆ ಕೊಂಡೊಯ್ದಿದ್ದಾರೆ ಎಂದು ರಾಜ್ಯ ವಿಗ್ರಹ ವಿಭಾಗದ ಸಿಐಡಿ ತಿಳಿಸಿದೆ. ಕೇಂದ್ರ ವಲಯದ ಹೆಚ್ಚುವರಿ ಡಿಎಸ್ಪಿ ಬಾಲಮುರುಗನ್ ಮತ್ತು ಅವರ ಅಧಿಕಾರಿಗಳ ತಂಡ 22.8 ಕೆ.ಜಿ.ಯ ವಿಗ್ರಹವನ್ನು ಪತ್ತೆ ಹಚ್ಚಿದ್ದಾರೆ. ತಮಿಳುನಾಡಿನ ಗೋಬಿಚೆಟ್ಟಿಪಾಳ್ಯದ ಮನೆಯೊಂದರಲ್ಲಿ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಕೆಲ ವರ್ಷಗಳಿಂದ ಮಂಡ್ಯದ ದೇವಸ್ಥಾನದ ಪೂಜಾರಿ ವಿಗ್ರಹವನ್ನು ಕದ್ದು, ಗೋಬಿಚೆಟ್ಟಿಪಾಳ್ಯದ ವಕೀಲರಿಗೆ ಮಾರಾಟ ಮಾಡಿದ್ದ ಎಂದು ತನಿಖೆಯಿಂದ ಬಯಲಾಗಿದೆ. ಪೊಲೀಸರು ವೇಷ ಧರಿಸಿಕೊಂಡು ಕಳ್ಳಸಾಗಣೆದಾರರಂತೆ ವಿಗ್ರಹ ಹುಡುಕಲು ಪ್ರಾರಂಭಿಸಿದ್ದರು. ನವೆಂಬರ್ 4ರಂದು ಮಧ್ಯವರ್ತಿಯ ಮೂಲಕ ವಕೀಲರ ಮನೆಗೆ ತೆರಳಿ ವಿಗ್ರಹವನ್ನು ವಶಪಡಿಸಿಕೊಂಡಿದ್ದು, ವಕೀಲರನ್ನು ವಶಕ್ಕೆ ಪಡೆದಿದ್ದಾರೆ. ಬಾಲಮುರುಗನ್ ಮೇಲ್ವಿಚಾರಣೆಯಲ್ಲಿ ಇನ್ಸ್ಪೆಕ್ಟರ್ ಎಲಾಂಗೊ ನೇತೃತ್ವದಲ್ಲಿ ಅಧಿಕಾರಿಗಳು 22.8 ಕೆ.ಜಿ, 58 ಸೆಂ.ಮೀಟರ್ ಎತ್ರವುಳ್ಳ ಬಾಲಾಜಿ ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 4ರಂದು ಅವಿನಾಶಿ ರಸ್ತೆಯ ಕಾಫಿ ಶಾಫ್ನಲ್ಲಿ ಮಧ್ಯವರ್ತಿಯ ಮೂಲಕ ವಕೀಲರ ಮನೆಗೆ ತೆರಳಿ, ಖರೀದಿಸುವ ನೆಪದಲ್ಲಿ ವಿಗ್ರಹ ವಶಪಡಿಸಿಕೊಂಡು, ಸಿನಿಮೀಯ ಶೈಲಿಯಲ್ಲಿ ವಕೀಲನನ್ನು ಬಲೆಗೆ ಕೆಡವಿದ್ದಾರೆ.

ಮಂಡ್ಯ ಮೂಲದ ಖದೀಮನ ಬಂಧನ
ಸಾಲ ತೀರಿಸಲು ಪೂಜೆ ಮಾಡಿಸುವ ನೆಪದಲ್ಲಿ ದೇವಾಲಯಗಳಿಗೆ ಹೋಗಿ ದೇವಿಯ ಚಿನ್ನದ ತಾಳಿ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಶ್ರೀರಾಮಪುರ ಪೊಲೀಸರು ಬಂಧಿಸಿದ್ದರು. ಮಂಡ್ಯ ಮೂಲದ ಕಲ್ಲೇಶ ಬಂಧಿತ ಆರೋಪಿ ಆಗಿದ್ದಾನೆ. ವ್ಯವಸಾಯ ಮಾಡುತ್ತಿದ್ದ ಈತ ವಿಪರೀತ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ನಗರದ ವಿವಿಧ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುವ ಸೋಗಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದ. ಕಳೆದ ತಿಂಗಳು ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಕಾ ಪರಮೇಶ್ವರಿ ದೇವಾಲಯಕ್ಕೆ ಭಕ್ತನ ಸೋಗಿನಲ್ಲಿ ತೆರಳಿದ್ದಾನೆ. ದೇವಸ್ಥಾನದಲ್ಲಿ ಯಾರು ಇಲ್ಲದಿರುವ ಸಮಯ ನೋಡಿ ದೇವಿಯ ಮಾಂಗಲ್ಯವನ್ನು ಕದ್ದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ಸ್ಸ್ಪೆಕ್ಟರ್ ಬಾಲಕೃಷ್ಣ ನೇತೃತ್ವದ ತಂಡ ಸಿಸಿಟಿವಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿದ್ದರು.

ಕಳ್ಳತನ ಮಾಡುವ ಉದ್ದೇಶದಿಂದಲೇ ನಗರಕ್ಕೆ ಬರುತ್ತಿದ್ದ ಕಲ್ಲೇಶ್, ಬೆಳಗಿನ ಜಾವ ಬಂದು ಮಡಲಕ್ಕಿ ಸೇವೆ ಸೇರಿದಂತೆ ವಿವಿಧ ರೀತಿಯ ಪೂಜೆ ಮಾಡಿಸಬೇಕೆಂದು ಹೇಳುತ್ತಿದ್ದ. ಈತನ ಮಾತನ್ನು ನಂಬುತ್ತಿದ್ದ ಅರ್ಚಕರು ಪೂಜೆ ಮಾಡಿಸಲು ಸಿದ್ಧತೆ ನಡೆಸುತ್ತಿದ್ದರು. ಅಲ್ಲದೆ ಭಕ್ತಾದಿಗಳು ಇಲ್ಲದ ಸಮಯ ನೋಡಿಕೊಂಡು ಕ್ಷಣಾರ್ಧದಲ್ಲಿ ದೇವಿಗೆ ಹಾಕಿದ್ದ ಮಾಂಗಲ್ಯ ಸರವನ್ನ ಕದ್ದು ಪರಾರಿ ಆಗುತ್ತಿದ್ದ. ಊರಿಗೆ ತೆರಳಿ ಚಿನ್ನಾಭರಣ ಅಡವಿಟ್ಟು ಹಣ ಮಾಡಿಕೊಳ್ಳುತ್ತಿದ್ದ. ಶ್ರೀರಾಮಪುರ, ಮಾಗಡಿ ರೋಡ್, ಪೀಣ್ಯ ಹಾಗೂ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಗಳ ದೇವಾಲಯಗಳಲ್ಲಿ ಕಳ್ಳತನ ಮಾಡಿರುವುದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ.












Click it and Unblock the Notifications