ಮುಂಗಾರು ಸಮಯದಲ್ಲಿ ತೋಟಗಾರಿಕೆ ಬೆಳೆಗಾರರೇ ಹೀಗೆ ಮಾಡಿ
ರೈತರಿಗೆ ಸಹಾಯವಾಗಲು ತೋಟಗಾರಿಕೆ ಇಲಾಖೆ ತೋಟಗಾರಿಕೆ ಬೆಳೆಗಳಲ್ಲಿ ಅನುಸರಿಸಬೇಕಾದ ಮಾರ್ಗಗಳನ್ನು ಸಲಹೆ ರೂಪದಲ್ಲಿ ನೀಡಿದೆ. ತೋಟಗಾರಿಕೆ ಇಲಾಖೆ ತಜ್ಞರು ನೀಡಿರುವ ಸಲಹೆಗಳು ಹೀಗಿವೆ.
ಮಡಿಕೇರಿ ಮೇ, 5: ಮೇ ಮತ್ತು ಜೂನ್ ತಿಂಗಳು ಕೊಡಗಿನ ಹವಾಮಾನದಲ್ಲಿ ಕೃಷಿ ಚಟುವಟಿಕೆ ಆರಂಭಿಸಲು ಸೂಕ್ತ ಸಮಯ.
ಸುಡು ಬಿಸಿಲಿನ ತಾಪಮಾನದ ಮಧ್ಯೆ ತಂಪೆರೆಯುವ ಮಳೆಯಿಂದ ಭೂಮಿ ತಂಪಾಗಿ ಗಿಡ-ಮರಗಳು ಹೊಸ ಚಿಗುರು ಬಿಡಲು ಹಾತೊರೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ತೋಟಾಗಾರಿಕೆ ಬೆಳೆಗಳಲ್ಲಿ ಕೆಲವು ನಿಯಮಗಳನ್ನು ರೈತರು ಅನುಸರಿಸುವುದು ಉತ್ತಮ.[ಸಕಲೇಶಪುರ ಕಾಫಿ ಎಸ್ಟೇಟ್ ನಲ್ಲಿ ನಿಮ್ಮ ಕನಸಿನ ಮನೆ!]
ರೈತರಿಗೆ ಸಹಾಯವಾಗಲು ತೋಟಗಾರಿಕೆ ಇಲಾಖೆ ತೋಟಗಾರಿಕೆ ಬೆಳೆಗಳಲ್ಲಿ ಅನುಸರಿಸಬೇಕಾದ ಮಾರ್ಗಗಳನ್ನು ಸಲಹೆ ರೂಪದಲ್ಲಿ ನೀಡಿದೆ. ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕೊಡಗಿನ ರೈತರಿಗೆ ಇಲಾಖೆ ತಜ್ಞರು ನೀಡಿರುವ ಸಲಹೆಗಳು ಹೀಗಿವೆ.
ಕಾಳು ಮೆಣಸು
ನೀರಿನ ಲಭ್ಯತೆ ಕಡಿಮೆ ಇದ್ದಲ್ಲಿ ವಾರ ಅಥವಾ 15 ದಿನಕ್ಕೊಮ್ಮೆ ಗಿಡ ಒಂದಕ್ಕೆ 40 ರಿಂದ 50 ಲೀಟರ್ ನೀರು ಕೊಡುವುದನ್ನು ಮುಂದುವರೆಸಬೇಕು. ಹಾಗೂ ಹೊದಿಕೆ ಹಾಕಿ ನೀರಿನ ಸಂರಕ್ಷಣೆ ಮಾಡುವುದು ಉತ್ತಮ.
ಗೆದ್ದಲಿನ ಬಾಧೆ ಇದ್ದಲ್ಲಿ ಹೀಗೆ ಮಾಡಿ
ಗೆದ್ದಲಿನ ಬಾಧೆ ಇದ್ದಲ್ಲಿ ಪ್ರತಿ ಲೀಟರ್ ನೀರಿಗೆ 2ಮಿಲಿ ಕ್ಲೋರೋಫೈರಿಫಾಸ್ ಹಾಗೂ ಮೀಲಿಬಗ್ಸ್ ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 0.5 ಮಿಲಿ ಇಮ್ಮಿಡಾ ಕ್ಲೊಪ್ರಿಡ್ ಅನ್ನು ಬುಡಕ್ಕೆ ಸುರಿಯುವುದು ಉತ್ತಮ. 200 ಲೀ ನೀರಿನಲ್ಲಿ 1 ಕೆ.ಜಿ ಐ.ಐ.ಎಸ್.ಆರ್ ರವರ ಕಾಳು ಮೆಣಸು ಸ್ಪೆಷಲ್ ಅನ್ನು ಸಿಂಪಡನೆ ಮಾಡುವುದು. ಈ ಅವಧಿಯಲ್ಲಿ ನೆರಳಿನ ನಿಯಂತ್ರಣ ಮಾಡುವುದು ಹಾಗೂ ಹೊಸ ಗಿಡ ನೆಡುವುದಕ್ಕೆ ಸೂಕ್ತ ಕಾಲವಾಗಿದೆ.[ಆಹಾ ಎಂಥಾ ಮಾವು, ಹಲಸು...ಬನ್ರೀ ಲಾಲ್ ಬಾಗ್ ಗೆ, ತಿನ್ರೀ ಮನಸಾರೆ]
ರೋಗ ನಿಯಂತ್ರಿಸಲು ಇಲ್ಲಿದೆ ಮಾರ್ಗ
ಮುಂಜಾಗರುಕತಾ ಕ್ರಮವಾಗಿ ರೋಗ ನಿಯಂತ್ರಿಸಲು ಪ್ರತಿ ಸಣ್ಣ ಗಿಡಕ್ಕೆ 50 ಗ್ರಾಂ ಹಾಗೂ ದೊಡ್ಡ ಗಿಡಗಳಿಗೆ 100ಗ್ರಾಂ ನಂತೆ ಟ್ರೈಕೋಡರ್ಮಾ ವನ್ನು ಕೊಟ್ಟಿಗೆ ಗೊಬ್ಬರ 5-10ಕೆ.ಜಿ ಹಾಗೂ ಬೇವಿನ ಹಿಂಡಿ 1 ಕೆ.ಜಿ ಯೊಂದಿಗೆ ಮಿಶ್ರಣ ಮಾಡಿ ಗಿಡಕ್ಕೆ ಕೊಡಬೇಕು. ಇದಾದ 20-25 ದಿನಗಳ ನಂತರ ಶೇ.1ರ ಬೋರ್ಡೋ ದ್ರಾವಣ ಸಿಂಪಡಣೆ ಮಾಡಬಹುದು.
ಇದರಿಂದ ಸಾಧ್ಯವಾದಷ್ಟು ಮಟ್ಟಿಗೆ ಶಿಲೀಂಧ್ರದಿಂದ ಬರುವ ಶೀಘ್ರ ಸೊರಗು ರೋಗ, ಕೊಳೆರೋಗ, ಎಲೆ ಚುಕ್ಕಿ ರೋಗ ಬಾರದ ಹಾಗೆ ನಿಯಂತ್ರಿಸಬಹುದು. ಹಾಗೇನಾದರೂ ಕಂಡುಬಂದಲ್ಲಿ ಕಾಪರ್ ಆಕ್ಸಿ ಕ್ಲೋರೈಡ್ 2ಮಿಲಿ ಪ್ರತಿ ಲೀ ನೀರಿನಲ್ಲಿ ಮಿಶ್ರಣಮಾಡಿ ಬುಡಕ್ಕೆ ಸುರಿಯಬಹುದು. ಟ್ರೈಕೋಡರ್ಮಾ ಹಾಗೂ ರಸಾಯನಿಕ ಔಷಧಿಗಳ ಬಳಕೆಯ ಮಧ್ಯೆ 20-25 ದಿನಗಳ ಅಂತರವಿರಲಿ.
ಮಾವಿಗೆ ಮೋಹಕ ಬಲೆ
ಮಾವಿನಣ್ಣಿನ ಊಜಿ ನೊಣದ ಬಾಧೆ ನಿಯಂತ್ರಿಸಲು ಮೋಹಕ ಬಲೆಗಳನ್ನು ಅಳವಡಿಸಬಹುದು. ಬಿದ್ದ ಹಣ್ಣುಗಳನ್ನು ಸಂಗ್ರಹಿಸಿ ನಾಶ ಪಡಿಸುವುದು. ಮಾವಿನ ಹಣ್ಣಿನ ಊಜಿ ನೊಣದ ಆಕರ್ಷಣೆಗೆ ಬೈಟ್ ಪದಾರ್ಥ(1ಲೀ ನೀರಿನಲ್ಲಿ 1ಮಿಲಿ ಡೆಲ್ಟ್ರಾಮೈಥ್ರಿನ್ ಅಥವಾ 1ಮಿಲಿ ಡೈಮಿಥೊಯೆಟ್ನ್ನು 10ಗ್ರಾಂ ಬೆಲ್ಲದಲ್ಲಿ ಕರಗಿಸಿ) ಹಣ್ಣು ಮಾಗುವ ಹಂತದಲ್ಲಿ ಸಿಂಪಡಣೆ ಮಾಡಬಹುದು.
ಕುಯಿಲು ಮಾಡಿದ ನಂತರ ಹಣ್ಣುಗಳನ್ನು 52 ಡಿಗ್ರಿ ಸೆ.ಉಷ್ಣತೆ ಇರುವ ನೀರಿನಲ್ಲಿ 10ನಿಮಿಷಗಳ ಕಾಲ ಮುಳುಗಿಸಿ ಶೇ. 0.05ರ ಪ್ರೋಕ್ಲೋರಾಜ್ ದ್ರಾವಣದಿಂದ ಉಪಚರಿಸಬೇಕು.
ಕಿತ್ತಳೆ ಹಣ್ಣಿಗೆ ಬಲೆಗಳು
ಕಿತ್ತಳೆ ಹೇನುಗಳನ್ನು ನಿಯಂತ್ರಿಸಲು ಲಿಂಗಾ ಆಕರ್ಷಕ ಬಲೆಗಳನ್ನು ಅಳವಡಿಸುದರೊಂದಿಗೆ ಪ್ರತಿ ಲೀ ನೀರಿನಲ್ಲಿ 2ಮಿಲಿ ಡೈಮಿಥೋಯೆಟ್ ಅಥವಾ ಕ್ವಿನಾಲ್ಫಾಸ್ ಬಳಸಬಹುದು. ಮಳೆ ಬಾರದೆ ಇದ್ದಲ್ಲಿ ನೀರು ಕೊಡುವುದನ್ನು ಮುಂದುವರಿಸಬೇಕು. ವಾರ್ಷಿಕ ಗೊಬ್ಬರದ ಪ್ರಮಾಣದ ಅರ್ಧಭಾಗವನ್ನು ಈಗ ಕೊಡುವುದು.
ಅಡಿಕೆ ರೋಗವನ್ನು ಹೀಗೆ ತಡೆಗಟ್ಟಿ
ಮುಂಜಾಗರುಕತೆ ಕ್ರಮವಾಗಿ ರೋಗ ತಡೆಗಟ್ಟಲು ಶೇ.1ರ ಬೋರ್ಡೋ ದ್ರಾವಣ ಸಿಂಪಡಿಸುವುದು. ಮಳೆಗಾಲದ ಮುಂಚೆ ಗೊಬ್ಬರ ಕೊಡುವುದು. ತಾಳೆ- ನೀರಿನ ಆಧ್ಯತೆ, ವಾರಕ್ಕೊಮ್ಮೆ ನೀರು ಕೊಟ್ಟು ಹೊದಿಕೆ ಹಾಕಿ ನೀರಿನ ಸಂರಕ್ಷಣೆ ಮಾಡುವುದು ಅಗತ್ಯವಾಗಿದೆ. ಕಳೆ ನಿಯಂತ್ರಿಸಿ ಸಾವಯವ ಗೊಬ್ಬರ, ರಸಾಯನಿಕ ಗೊಬ್ಬರ, ಲಘು ಪೋಷಕಾಂಶಗಳಾದ ಬೋರಾನ್ ಹಾಗೂ ಮೆಗ್ನಿಷೀಯಂ ಅನ್ನು ಕೊಡುವುದು ಈ ಸಂದರ್ಭದಲ್ಲಿ ಉತ್ತಮ.