ಪಕ್ಷ ಓಕೆ ಅಂದರೆ ಚುನಾವಣೆಯಲ್ಲಿ ಸ್ಪರ್ಧಿಸುವೆ: ಯೋಗಿ ಆದಿತ್ಯನಾಥ್
ಲಕ್ನೋ, ನವೆಂಬರ್ 06: ಪಕ್ಷವು ಓಕೆ ಅಂದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದರು.
ನಾನು ಯಾವಾಗಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಹಾಗೂ ಪಕ್ಷ ಹೇಳುವುದಾದರೆ ನಾನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.

ಕಳೆದ 2017ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿ ಸರ್ಕಾರ ಏನೆಲ್ಲಾ ಭರವಸೆಗಳನ್ನು ನೀಡಿತ್ತೋ ಅವುಗಳೆಲ್ಲವನ್ನೂ ಪೂರೈಸಿದೆ. ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ರಾಜ್ಯ ಮಾದರಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಗಲಭೆ ನಡೆಯದೆ ದೀಪಾವಳಿ ಸೇರಿದಂತೆ ಎಲ್ಲಾ ಹಬ್ಬಗಳನ್ನು ಶಾಂತಿಯುತವಾಗಿ ಆಚರಣೆ ಮಾಡಲಾಗಿದೆ ಎಂದರು ಹೇಳಿದರು.
ಪಕ್ಷವು ಸಂಸದೀಯ ಮಂಡಳಿಯನ್ನು ಹೊಂದಿದ್ದು, ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಅದು ನಿರ್ಧರಿಸುತ್ತದೆ ಎಂದರು. ಭದ್ರತೆಯ ಖಾತ್ರಿ, ಉತ್ತಮ ರಸ್ತೆ ಸಂಪರ್ಕದಿಂದಾಗಿ ವಿದೇಶದಿಂದ ಹೂಡಿಕೆ ಮಾಡಲು ರಾಜ್ಯವು ಇದೀಗ ದೇಶದ ಉತ್ತಮ ಸ್ಥಾನವೆನಿಸಿಕೊಂಡಿದೆ. ಈ ಮೊದಲು ವಿದೇಶಗಳು ಹೂಡಿಕೆ ಮಾಡುತ್ತಿರಲಿಲ್ಲ.
ಆದರೆ ಈಗ ದೇಶಕ್ಕೆ ಹೊರಗಿನಿಂದ ಹೂಡಿಕೆ ಬರುತ್ತಿದೆ. ಮೊದಲು ಜನರು ಉತ್ತರ ಪ್ರದೇಶವು ಗುಂಡಿಗಳು ಹಾಗೂ ಹಳ್ಳಗಳಿಂದ ಕೂಡಿದೆ ಎನ್ನುತ್ತಿದ್ದರು. ಈಗ ಎಕ್ಸ್ಪ್ರೆಸ್ ವೇಗಳು ಹಾಗೂ ಚತುಷ್ಪಥ ರಸ್ತೆಗಳ ಸಂಪರ್ಕಕ್ಕೆ ಉತ್ತರ ಪ್ರದೇಶ ಹೆಸರುವಾಸಿಯಾಗಿದೆ ಎಂದು ನುಡಿದರು.
ಉತ್ತರ ಪ್ರದೇಶವು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದು, ಹಾಗೂ 2017 ಬಳಿಕ ರಾಜ್ಯವು ಇಂತಹ ಪರಿಸ್ಥಿತಿಯಿಂದ ಹೊರಬಂದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ವಿವಿಧ ಯೋಜನೆಗಳ ಪ್ರಯೋಜನಗಳು ತಲುಪಿವೆ ಎಂದರು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ, ರೈತರ ವಿರುದ್ಧದ ಸುಮಾರು 900 ಕೇಸ್ ಗಳನ್ನು ಹಿಂತೆಗೆದುಕೊಳ್ಳಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಪೈರನ್ನು ಸುಡುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣವಾದ ಆರೋಪದ ಮೇರೆಗೆ ರೈತರ ಮೇಲೆ ಕೇಸ್ ಹಾಕಲಾಗಿತ್ತು.
ಈ ಸಂಬಂಧದ ರಾಜ್ಯ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ ನಂತರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ( ಗೃಹ) ಅವನಿಶ್ ಅವಾಸ್ತಿ ರೈತರ ಮೇಲಿನ ಕೇಸ್ ಹಿಂಪಡೆಯುವ ಆದೇಶವನ್ನು ಹೊರಡಿಸಿದ್ದಾರೆ.
ರಾಜ್ಯದ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ರೈತರು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆದ್ದರಿಂದ ಪೈರನ್ನು ಸುಟ್ಟಿದ್ದಕ್ಕಾಗಿ ರೈತರ ವಿರುದ್ಧ ಹಾಕಲಾಗಿದ್ದ 868 ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಅವಾಸ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದಿಂದ ಆರ್ಥಿಕ ತೊಂದರೆಯಿಂದ ಸಂಕಷ್ಟ ಪಡುತ್ತಿರುವ ರೈತರ ಹಿತಾಸಕ್ತಿ ರಕ್ಷಿಸುವ ಸಲುವಾಗಿ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿದ್ದ ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಆದೇಶಿಸಿರುವುದಾಗಿ ಅವಾಸ್ತಿ ಹೇಳಿದ್ದಾರೆ.
ಪೈರನ್ನು ಸುಡುವುದಕ್ಕಾಗಿ ರೈತರ ಮೇಲೆ ಹಾಕಲಾಗಿರುವ ಕೇಸ್ ಗಳನ್ನು ಹಿಂಪಡೆಯುವುದಾಗಿ ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಭರವಸೆ ನೀಡಿದ್ದರು. ಒಂದು ವೇಳೆ ಯಾವುದೇ ದಂಡ ವಿಧಿಸಿದ್ದರೆ ಅದನ್ನು ಮನ್ನಾ ಮಾಡಲಾಗುವುದು, ಇದಲ್ಲದೇ, ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸುವ ವಿಚಾರವನ್ನು ಪರಗಣಿಸಲಾಗುವುದು ಎಂದು ಅಭಯ ನೀಡಿದ್ದರು.












Click it and Unblock the Notifications