ಬೆಂಗಳೂರು-ಮೈಸೂರು ಸೇರಿ 5 ಮಾರ್ಗಗಳಿಗೆ RRTS ಪ್ರಸ್ತಾವನೆ: ಮೆಟ್ರೋ ಯೋಜನೆಗಳಿಗೆ ಕೇಂದ್ರದ ಒಪ್ಪಿಗೆಗೆ ವೇಟಿಂಗ್
ನವದೆಹಲಿ/ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆಗಾಗಿ ರಾಜ್ಯ ಸರ್ಕಾರ ನಮ್ಮ ಮೆಟ್ರೋ ವಿವಿಧ ಹಂತದ ಯೋಜನೆಗಳು, ಪ್ರಮುಖ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆಗೆ ಉದ್ದೇಶಿಸಿದೆ. ಹೊಸದಾಗಿ ಬೆಂಗಳೂರಿನಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ 'ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS)' ಅಥವಾ 'ವಂದೇ ಮೆಟ್ರೋ' ಯೋಜನೆಗೆ ಪ್ಲ್ಯಾನ್ ಮಾಡಿಕೊಂಡಿದೆ. ಇದೆಲ್ಲ ಯೋಜನೆಗಳಿಗೆ ಕೇಂದ್ರ ಸರ್ಕಾರವೇ ಅಂತಿಮ ಅನುಮೋದನೆ ನೀಡಿದ ಬಳಿಕ ಯೋಜನೆ ಹಂತ ಹಂತವಾಗಿ ಜಾರಿಯಾಗುತ್ತವೆ.
ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ದೆಹಲಿಗೆ ತೆರಳಿದ್ದು, ಅಲ್ಲಿ
ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಯೋಜನೆಗಳ ಕುರಿತು ವಿಶೇಷ ಮನವಿ ಮಾಡಿದ್ದಾರೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಪ್ರಮುಖ ಯೋಜನೆಗಳಿಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಈ ಮೂಲಕ ವಿಳಂಬವಾಗುತ್ತಿರುವ ಹಾಗೂ ಉದ್ದೇಶಿತ ಯೋಜನೆಗಳಿಗೆ ವೇಗ ನೀಡಲು ಪ್ಲ್ಯಾನ್ ರೂಪಿಸಿದ್ದಾರೆ.

ಬೆಂಗಳೂರು ಉದ್ದೇಶಿತ ಸಾರಿಗೆ ಯೋಜನೆಗಳ ಪಟ್ಟಿ
* ಡಬಲ್ ಡೆಕ್ಕರ್ ಯೋಜನೆಗೆ ಅನುಮತಿ
ನಮ್ಮ ಮೆಟ್ರೋ ಮೂರನೇ ಹಂತ ಯೋಜನೆಯಲ್ಲಿ 44.65 ಕಿಲೋ ಮೀಟರ್ ಉದ್ದದ ಡಬಲ್ ಡೆಕ್ಕರ್ ಮೆಲ್ಸೇತುವೆ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮುಂದಾಗಿದೆ. 2024 ಸೆಪ್ಟಂಬರ್ 13 ರಂದು ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿತ್ತು. ಈ ಯೋಜನೆಯ ವೆಚ್ಚ 9,700 ಕೋಟಿ ರೂಪಾಯಿ ಅಂದಾಜಿಸಿದ್ದು, ಅದನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ.
2026 ಜನವರಿ 19 ರಂದು BMRCL ಮಂಡಳಿಯ 118ನೇ ಸಭೆಯಲ್ಲಿ ಸಣ್ಣ ಬದಲಾವಣೆ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ತ್ವರಿತವಾಗಿ ಅನುಮತಿ ನೀಡಬೇಕೆಂದು ಅವರು ಕೋರಿದ್ದಾರೆ.
* ಪ್ರಾದೇಶಿಕ ಕ್ಷಿಪ್ರ ರೈಲು ವ್ಯವಸ್ಥೆಗೆ (RRTS) ಒಪ್ಪಿಗೆ ನೀಡಿ
ನಮ್ಮ ಮೆಟ್ರೋ ವಿಸ್ತರಣೆ ಮಾರ್ಗ ಬದಲಾಗಿ ಅಂತರ ನಗರ ಸಂಪರ್ಕ ಕಲ್ಪಿಸಲು ಸೂಕ್ತವಾದ ಪ್ರಾದೇಶಿಕ ಕ್ಷಿಪ್ರ ರೈಲು ವ್ಯವಸ್ಥೆಗೆ (RRTS ಅಥವಾ ವಂದೇ ಮೆಟ್ರೋ) ಜಾರಿಗೊಳಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಅಕ್ಕಪಕ್ಕದ ಊರುಗಳಿಗೆ ಪ್ರಾದೇಶಿಕ ಕ್ಷಿಪ್ರ ರೈಲು ವ್ಯವಸ್ಥೆಗೆ ಜಾರಿಗೆ ತೀರ್ಮಾನಿಸಿದೆ.
ಬೆಂಗಳೂರು-ಮೈಸೂರು, ಬೆಂಗಳೂರು- ಕನಕಪುರ, ಬೆಂಗಳೂರು- ತುಮಕೂರು, ಬೆಂಗಳೂರು- ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು- ಕೋಲಾರ ನಡುವೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS) ಅನುಷ್ಠಾನಕ್ಕೆ ಅನುಮೋದನೆ ನೀಡಬೇಕೆಂದು ಕೇಂದ್ರ ಸಚಿವರ ಬಳಿ ಮನವಿ ಮಾಡಿದ್ದಾರೆ.
* ಮೆಟ್ರೋ 2ನೇ ಹಂತದ ಪರಿಷ್ಕೃತ ವೆಚ್ಚಕ್ಕೆ ಬೇಕಿದೆ ಅನುಮತಿ
ಬೆಂಗಳೂರು ಮೆಟ್ರೋ ಎರಡನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ 2014ರ ಫೆಬ್ರವರಿ 21 ರಂದು 26,405 ಕೋಟಿ ರೂಪಾಯಿಯ ಅಂದಾಜು ವೆಚ್ಚಕ್ಕೆ ಅನುಮತಿ ನೀಡಿತ್ತು. 72.095 ಕಿಲೋ ಮೀಟರ್ ಉದ್ದದ 61 ನಿಲ್ದಾಣಗಳನ್ನು ಒಳಗೊಂಡಿರುವ ಈ ಯೋಜನೆ ಅಂದಾಜು ವೆಚ್ಚ ಈಗ 40,425 ಕೋಟಿ ರೂ.ಗೆ ಅಂದರೆ 14,019.88 ಕೋಟಿ ರೂ. ಏರಿಕೆ ಮಾಡಲಾಗಿದೆ. ವೆಚ್ಚ ಹೆಚ್ಚಳದಿಂದ ಅನುಮೋದನೆ ಸಿಗದೇ ಯೋಜನೆ ನಿಂತಿದ್ದು, ಸಮಸ್ಯೆ ಆಗುತ್ತಿದೆ. ಆದ್ದರಿಂದ ತಾವು ಈ ಪರಿಷ್ಕೃತ ಯೋಜನಾ ವೆಚ್ಚಕ್ಕೆ ಒಪ್ಪಿ ಅನುಮೋದಿಸುವಂತೆ ಸಿಎಂ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
* ಮೆಟ್ರೋ 3ನೇ ಎ ಹಂತಕ್ಕೆ ಅನುಮತಿ
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಸರ್ಜಾಪುರದಿಂದ ಹೆಬ್ಬಾಳದವರೆಗೆ ಒಟ್ಟು 37.804 ಕಿಲೋ ಮೀಟರ್ (14.28 ಕಿಲೋ ಮೀಟರ್ ಸುರಂಗ ಮತ್ತು 23.524 ಕಿಲೋ ಮೀಟರ್ ಮೇಲ್ಸೇತುವೆ) ಉದ್ದವಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕೆಲವು ಮಾರ್ಪಾಡು ಮಾಡಲಾಗಿದೆ. 25,999 ಕೋಟಿ ರೂಪಾಯಿ ಅಂದಾಜು ವೆಚ್ಚದ ಪರಿಷ್ಕೃತ ಡಿಪಿಆರ್ ಅನ್ನು ಇದೇ ವರ್ಷ ಮಾರ್ಚ್ 29 ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಡಿಪಿಆರ್ಗೆ ಒಪ್ಪಿಗೆ ನೀಡುವ ಮೂಲಕ ಯೋಜನೆಗಳ ಜಾರಿಗೆ ಸಹಕರಿಸುವಂತೆ ಕೋರಿದ್ದಾರೆ.
ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ
ಈ ಮೇಲಿನ ಎಲ್ಲ ಯೋಜನೆಗಳಿಗೆ ನಗರದ ಸಂಚಾರ ದಟ್ಟಣೆ ನಿವಾರಣೆಗೆ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಒದಗಿಸುತ್ತದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಟ್ರಾಫಿಕ್ ಕಿರಿಕಿರಿ ತಪ್ಪಿಸುವಲ್ಲಿ ಈ ಯೋಜನೆಗಳು ನೀರ್ಣಾಯಕವಾಗಿವೆ. ಈಗಾಗಲೇ ಯೋಜನೆಗಳ ಆರಂಭ ವರ್ಷಗಟ್ಟಲೇ ತಡವಾಗಿದ್ದು, ಕೇಂದ್ರ ಸರ್ಕಾರ ಬೆಂಗಳೂರು ಯೋಜನೆಗಳ ಕುರಿತಂತೆ ತುರ್ತು ಸಕಾರಾತ್ಮಕ ನಿರ್ಧಾರ ಪ್ರಕಟಿಸುವ ಅಗತ್ಯವಿದೆ. ಇನ್ನೂ ಡಿಕೆ ಶಿವಕುಮಾರ್ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.














Click it and Unblock the Notifications