ಕೊವಿಡ್-19 ತಪಾಸಣೆ: ರಕ್ತ, ಗಂಟಲು ದ್ರವ ಕೊಟ್ಟವರೇ ನಾಪತ್ತೆ!
ಲಕ್ನೋ, ಆಗಸ್ಟ್.23: ನೊವೆಲ್ ಕೊರೊನಾವೈರಸ್ ಸೋಂಕಿನ ಹರಡುವಿಕೆ ಭೀತಿ ನಡುವೆಯೂ ಜನರನ್ನು ಆತಂಕಕ್ಕೆ ದೂಡುವಂತಾ ಘಟನೆಯೊಂದು ಉತ್ತರ ಪ್ರದೇಶದ ಮುಜಾಫರ್ ನಗರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಕೊವಿಡ್-19 ಸೋಂಕು ತಪಾಸಣೆ ಬಳಿಕ ಪಾಸಿಟಿವ್ ಎಂದು ವರದಿ ಬಂದಿರುವ ಮೂವರನ್ನು ಪತ್ತೆ ಮಾಡುವುದೇ ವೈದ್ಯಕೀಯ ಸಿಬ್ಬಂದಿಗೆ ಸವಾಲಿನ ಕೆಲಸವಾಗಿದೆ. ಏಕೆಂದರೆ ಕೊರೊನಾವೈರಸ್ ಸೋಂಕು ತಪಾಸಣೆ ಸಂದರ್ಭದಲ್ಲಿ ಮೂವರು ವ್ಯಕ್ತಿಗಳು ತಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ತಪ್ಪಾಗಿ ನೀಡಿರುವುದ ಬೆಳಕಿಗೆ ಬಂದಿದೆ.
ಮೂವರ ಪೈಕಿ ಇಬ್ಬರು ತಾವು ಕೊವಿಡ್-19 ತಪಾಸಣೆಗೆ ಒಳಗಾದ ಆಸ್ಪತ್ರೆಯ ಸಿಬ್ಬಂದಿಯೇ ಎಂದು ಮಾಹಿತಿ ನೀಡಿದ್ದಾರೆ. ಇನ್ನೊಬ್ಬ ವ್ಯಕ್ತಿಯು ಇಲ್ಲಿನ ಸಾಕೇತ್ ಕಾಲೋನಿಯ ನಿವಾಸಿ ಎಂದು ಮಾಹಿತಿ ನೀಡಿರುವುದು ಗೊತ್ತಾಗಿದೆ. ಅಧಿಕಾರಿಗಳು ಇದೀಗ ತಪಾಸಣೆಗೊಳಗಾದ ಮೂವರ ಆಧಾರ್ ಕಾರ್ಡ್ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

ಸ್ಥಳ ಪರಿಶೀಲನೆ ವೇಳೆ ಸತ್ಯ ಬಹಿರಂಗ:
ಕಳೆದ ಶುಕ್ರವಾರ ಕೊರೊನಾವೈರಸ್ ಸೋಂಕಿನ ತಪಾಸಣೆ ಮಾಡಿಸಿಕೊಂಡ ವ್ಯಕ್ತಿಯು ತಾನು ಸಾಕೇತ್ ಕಾಲೋನಿ ನಿವಾಸಿ ಎಂದು ಮಾಹಿತಿ ನೀಡಿದ್ದರು. ಶನಿವಾರ ತಪಾಸಣೆಗೆ ಒಳಗಾದ ಇಬ್ಬರು ತಾವು ಅದೇ ಆಸ್ಪತ್ರೆ ಸಿಬ್ಬಂದಿ ಎಂದು ಹೇಳಿದ್ದರು. ಆದರೆ ಭಾನುವಾರ ಸೋಂಕು ಪಾಸಿಟಿವ್ ಎಂದು ಬರುತ್ತಿದ್ದಂತೆ ಸ್ಥಳ ಪರಿಶೀಲನೆಗೆ ತೆರಳಿದ ವೇಳೆ ತಪ್ಪು ವಿಳಾಸವನ್ನು ನೀಡಿರುವುದು ಬೆಳಕಿಗೆ ಬಂದಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಪ್ರವೀಣ್ ಚೋಪ್ಡಾ ತಿಳಿಸಿದ್ದಾರೆ.
ಭಾರತದಲ್ಲಿ ಮುಂದುವರಿದ ಕೊರೊನಾವೈರಸ್ ಅಟ್ಟಹಾಸ:
ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಈಗಾಗಲೇ 30 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲೇ ಕೊರೊನಾವೈರಸ್ ಸೋಂಕಿಗೆ 912 ಮಂದಿ ಪ್ರಾಣ ಬಿಟ್ಟಿದ್ದು, 69239 ಜನರಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3044941ಕ್ಕೆ ಏರಿಕೆಯಾಗಿದ್ದು, ಈ ಪೈಕಿ 2280567 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 707668 ಸಕ್ರಿಯ ಪ್ರಕರಣಗಳಿದ್ದು, ಮಹಾಮಾರಿಗೆ ಇದುವರೆಗೂ ದೇಶದಲ್ಲಿ 56706 ಜನರು ಪ್ರಾಣ ಬಿಟ್ಟಿದ್ದಾರೆ.












Click it and Unblock the Notifications