Uttar Pradesh Election Results 2022: ಲಖಿಂಪುರದ 8 ಕ್ಷೇತ್ರಗಳ ಪೈಕಿ 7 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
ಲಕ್ನೋ ಮಾರ್ಚ್ 10: ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಮೂರು ಹಂತದ ಭದ್ರತೆ ಹಾಗೂ ಎಲ್ಲ ಕೇಂದ್ರಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ನಡುವೆ ಕೇಂದ್ರದ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ರೈತರ ಮೇಲೆ ಹಲ್ಲೆ ನಡೆಸಿರುವ ಲಖಿಂಪುರ ಖೇರಿಯಲ್ಲಿ ಬಿಜೆಪಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಉತ್ತರ ಪ್ರದೇಶದ ಮತ ಎಣಿಕೆಯ ಆರಂಭಿಕ ಸುತ್ತಿನಲ್ಲಿ ಬಿಜೆಪಿ ತನ್ನ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ 78 ಸ್ಥಾನಗಳ ವಿರುದ್ಧ 262 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ನಡೆದ ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಭದ್ರತೆ ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆರಂಭಿಕ ಸುತ್ತಿನಲ್ಲಿ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಯಿತು. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿದ್ದು ಬೆಳಗ್ಗೆ ಸಮಯ 10ಕ್ಕೆ ಬಿಜೆಪಿ 225, ಎಸ್ಪಿ 95, ಬಿಎಸ್ಪಿ 7, ಕಾಂಗ್ರೆಸ್ 6, ಆರ್ ಎಲ್ ಡಿ 7, ಎಡಿಎಸ್ 3, ನಿಶಾದ್ 5, ಇತರೆ 2 ಕಡೆಗೆ ಮುನ್ನಡೆ ಸಾಧಿಸಿದೆ.
ಲಖಿಂಪುರ ಖೇರಿ ಏಕೆ ಫೋಕಸ್ನಲ್ಲಿದೆ?
ಕಳೆದ ಅಕ್ಟೋಬರ್ನಲ್ಲಿ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು. ಬಿಜೆಪಿ ಕಾರ್ಯಕರ್ತರಿದ್ದ ಕಾರು ವೇಗವಾಗಿ ಪ್ರತಿಭಟನಾ ನಿರತ ರೈತರ ಗುಂಪಿನ ಮೇಲೆ ಹರಿದಿತ್ತು. ಬಳಿಕ ರೈತರ ಮೇಲೆ ಹಲ್ಲೆ ನಡೆಸಿದ ಆರೋಪಗಳು ಕೇಳಿಬಂದಿದ್ದವು. ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ನನ್ನು ಪೊಲೀಸರು ಬಂಧಿಸಿದ್ದು, ಕಳೆದ ತಿಂಗಳು ಅವರು ಜಾಮೀನು ಪಡೆದಿದ್ದರು. ಈ ಘಟನೆಯ ಬಳಿಕ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ರೈತ ವಿರೋಧಿ ನಿರ್ಧಾರಗಳ ಬಗ್ಗೆ ವಿಪಕ್ಷಗಳು ಪ್ರಸ್ತಾಪಿಸಿವೆ. ಬಿಜೆಪಿಯನ್ನು ಮೂಲೆಗುಂಪು ಮಾಡುವ ಯಾವುದೇ ಅವಕಾಶವನ್ನು ವಿರೋಧ ಪಕ್ಷಗಳು ಕಳೆದುಕೊಂಡಿಲ್ಲ.

ಆದರೆ ಈ ಹಂತದಲ್ಲಿ ಎಲ್ಲಾ ಎಂಟು ವಿಧಾನಸಭಾ ಸ್ಥಾನಗಳು ಬಿಜೆಪಿ ಪಾಲಾಗಿವೆ. 2017 ರ ಚುನಾವಣೆಯಲ್ಲಿ ಬಿಜೆಪಿಯ ಯೋಗೇಶ್ ವರ್ಮಾ ಅವರು ಸಮಾಜವಾದಿ ಪಕ್ಷದಿಂದ ಉತ್ಕರ್ಷ್ ವರ್ಮಾ ಮಧುರ್ ಅವರನ್ನು 37,748 ಮತಗಳ ಅಂತರದಿಂದ ಸೋಲಿಸಿದರು. ಪಲಿಯಾ, ನಿಘಸನ್, ಗೋಲಾ, ಶ್ರೀನಗರ (ಎಸ್ಸಿ), ಧೌರಾಹ್ರಾ, ಲಖಿಂಪುರ, ಕಾಸ್ತಾ (ಎಸ್ಸಿ) ಮತ್ತು ಮೊಹಮ್ಮದಿ ವಿಧಾನಸಭಾ ಕ್ಷೇತ್ರಗಳೊಂದಿಗೆ ಲಖಿಂಪುರ ಖೇರಿ ಜಿಲ್ಲೆಯ ನಾಲ್ಕನೇ ಹಂತದ ಚುನಾವಣೆಯಲ್ಲಿ ಫೆಬ್ರವರಿ 23 ರಂದು ಮತದಾನ ನಡೆದಿತ್ತು. ವರದಿಗಳ ಪ್ರಕಾರ, ಲಖಿಂಪುರ ವಿಧಾನಸಭಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಮತ್ತು ಆರು ಅಭ್ಯರ್ಥಿಗಳು ಪಾಲಿಯಾ ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ.
ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಚುನಾವಣೆಗೆ ಬುಧವಾರ(ಫೆಬ್ರವರಿ 23) ಮತದಾನ ನಡೆದಿದೆ. ನಾಲ್ಕನೇ ಹಂತದಲ್ಲಿ ಒಂಬತ್ತು ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಈ ಹಂತದಲ್ಲಿ 59 ವಿಧಾನಸಭಾ ಸ್ಥಾನಗಳಿಗೆ 624 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಈ ಹಂತದ ಪ್ರಮುಖ ಅಭ್ಯರ್ಥಿಗಳಲ್ಲಿ ಉತ್ತರ ಪ್ರದೇಶದ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಅವರು ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಮತ್ತು ಎರಡನೇ ಬಾರಿ ಕಾರ್ಪೊರೇಟರ್ ಸುರೇಂದ್ರ ಸಿಂಗ್ ಗಾಂಧಿ ಅವರನ್ನು ಎದುರಿಸುತ್ತಿದ್ದಾರೆ. ಲಕ್ನೋ ಕಂಟೇನ್ಮೆಂಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬ್ರಜೇಶ್ ಪಾಠಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಾಠಕ್ 2017 ರಲ್ಲಿ ಲಕ್ನೋ ಸೆಂಟ್ರಲ್ ಸ್ಥಾನವನ್ನು ಗೆದ್ದಿದ್ದರು. ಮತ್ತೊಬ್ಬ ಸಚಿವ ಅಶುತೋಷ್ ಟಂಡನ್ ಲಕ್ನೋ ಪೂರ್ವ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಇನ್ನೂ ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ರಾಯ್ ಬರೇಲಿ ಕೂಡ ಈ ಹಂತದಲ್ಲಿ ಚುನಾವಣೆ ನಡೆದಿದೆ. ರಾಯ್ ಬರೇಲಿಯಿಂದ ಬಿಜೆಪಿಯ ಅದಿತಿ ಸಿಂಗ್ ಕಣದಲ್ಲಿದ್ದಾರೆ. ಇವರು ಈ ಹಿಂದೆ ಕಾಂಗ್ರೆಸ್ನಲ್ಲಿದ್ದರು. ರಾಯಬರೇಲಿಯಲ್ಲಿ ಆದಿತಿಸಿಂಗ್ ಗೆ ಹಿನ್ನಡೆಯಾಗಿದೆ.

ಅಕ್ಟೋಬರ್ 3 ರಂದು ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ ಈ ಸ್ಥಳದಲ್ಲಿ ಸಾವನ್ನಪ್ಪಿದ್ದರು. ಹೀಗಾಗಿ ಇಲ್ಲಿನ ರೈತರಿಗೆ ಬಿಜೆಪಿ ವಿರುದ್ಧ ಅಸಮಧಾನವಿದೆ. ಈ ಅಸಮಧಾನ ಈ ಬಾರಿ ಬಿಜೆಪಿ ಗೆಲುವಿಗೆ ದೊಡ್ಡ ಸವಾಲಾಗಿತ್ತು. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಬಿಜೆಪಿ ಲಂಖಿಪುರದಲ್ಲಿ ಮುನ್ನಡೆ ಸಾಧಿಸಿದೆ. 2017ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 325, ಎಸ್ಪಿ 47, ಬಿಎಸ್ಪಿ 19 ಮತ್ತು ಕಾಂಗ್ರೆಸ್ 7 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಉತ್ತರಪ್ರದೇಶದಲ್ಲಿ ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ಬೇಕಿರುವ ಮ್ಯಾಜಿಕ್ ನಂಬರ್ 202.
ಚುನಾವಣಾ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಎಲ್ಲಿ?
ಒನ್ ಇಂಡಿಯಾ ಕನ್ನಡದ ಲೈವ್ ಲಿಂಕ್ ಮೂಲಕ ನೀವು ಪಂಚ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ನೀವು ನೋಡಬಹುದು. ಇದನ್ನು ಹೊರತುಪಡಿಸಿ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ವೆಬ್ಸೈಟ್ ಅಂದರೆ eciresults.nic.in ನಲ್ಲಿ ಪರಿಶೀಲಿಸಬಹುದು.












Click it and Unblock the Notifications